ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು: ಅಮರಿಂದರ್ರನ್ನು ಸಿಎಂ ಸ್ಥಾನದಿಂದ ತೆಗೆದುಹಾಕಲು ಶಾಸಕರ ಒತ್ತಾಯ!
ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಶಾಸಕರಲ್ಲಿ ಅಸಮಾಧಾನವಿದೆ. ಕೆಲವು ಶಾಸಕರು ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಒತ್ತಾಯಿಸಿದ್ದಾರೆ ಎಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪರ್ಗತ್ ಸಿಂಗ್ ಬುಧವಾರ ಹೇಳಿದ್ದಾರೆ.
“ಸಮಸ್ಯೆಗಳನ್ನು ಬಗೆಹರಿಸದ ಕಾರಣ, ಶಾಸಕರಲ್ಲಿ ಅಸಮಾಧಾನವಿದೆ. ಈ ವಿಚಾರವಾಗಿ ನಾನು ಎಐಸಿಸಿ ವೀಕ್ಷಕರ ಮೇಲ್ವಿಚಾರಣೆಯ ವೇಳೆ ಕಾಂಗ್ರೆಸ್ ಹೈಕಮಾಂಡ್ಗೆ ಸಲಹೆ ನೀಡುತ್ತೇನೆ. ಮುಖ್ಯಮಂತ್ರಿ ಎಲ್ಲಾ ಶಾಸಕರ ಸಭೆ ಕರೆಯಬೇಕು. ಅವರೊಂದಿಗೆ ಚರ್ಚೆಯ ನಂತರ ನಿರ್ಧರ ತೆಗೆದುಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.
“ಕೆಲವು ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ಅನ್ನು ಭೇಟಿಯಾಗಿದ್ದಾರೆ. ನಾನೂ ಕೂಡ ಅಲ್ಲಿಗೆ ಹೋಗುತ್ತೇನೆ. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವು ಸಮಸ್ಯೆಗಳನ್ನು ಬೇರೆಡೆಗೆ ತಿರುಗಿಸಬಾರದು. ಕ್ಯಾಪ್ಟನ್ ಅಮರಿಂದರ್ ಸಿಂಗ್ ನಮ್ಮ ಮುಖ್ಯಮಂತ್ರಿ ಮತ್ತು ನಮಗೆ ಇದರಲ್ಲಿ ಯಾವ ತಕರಾರೂ ಇಲ್ಲ. ನಾವು ಕೆಲಸ ಮಾಡಬೇಕು” ಎಂದು ಎಂದು ಅವರು ತಿಳಿಸಿದ್ದಾರೆ.
ಪಕ್ಷದ ರಾಜ್ಯ ಘಟಕದಲ್ಲಿ ಬದಲಾವಣೆಗಳಾದ ನಂತರ ಸಂಭವನೀಯ ಸಮಸ್ಯೆಗಳನ್ನು ಪರಿಹರಿಸುವ ಆಲೋಚನೆಗಳಿವೆ. ಇದ್ದಕ್ಕಿದ್ದಂತೆ ಹೆಚ್ಚಿನ ಸಂಖ್ಯೆಯ ಶಾಸಕರು ನಿರಾಶೆಗೊಂಡಿದ್ದಾರೆ. ಇದಕ್ಕೆ ಕಾರಣವೇನು ಎಂದು ಪರಿಶೀಲಿಸುತ್ತೇವೆ. ಅದಕ್ಕಾಗಿ ಹಲವು ಪರಿಹಾರಗಳನ್ನು ಪಕ್ಷವು ಕಂಡುಕೊಳ್ಳುತ್ತದೆ ಎಂದು ಪಂಜಾಬ್ನ ಎಐಸಿಸಿ ಉಸ್ತುವಾರಿ ಹರೀಶ್ ರಾವತ್ ಹೇಳಿದ್ದಾರೆ.
ಪಂಜಾಬ್ನ ವಿವಿಧ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಅಮರೀಂದರ್ ಸಿಂಗ್ ಅವರ “ಅಸಮರ್ಥತೆ” ಕಂಡು ಬಂದಿದೆ. ಈ ಬಗ್ಗೆ ಚರ್ಚಿಸಲು ರಾವತ್ ಅವರು ಡೆಹ್ರಾಡೂನ್ನಲ್ಲಿರುವ ಸಿಎಂ ನಿವಾಸದಲ್ಲಿ ಪಂಜಾಬ್ ಕಾಂಗ್ರೆಸ್ ನಾಯಕರ ನಿಯೋಗದೊಂದಿಗೆ ಸಭೆ ನಡೆಸಿದ್ದಾರೆ.
ಪಂಜಾಬ್ ಕಾಂಗ್ರೆಸ್ ನಾಯಕರ ಒಂದು ಗುಂಪು ಅಮರೀಂದರ್ ಸಿಂಗ್ ಅವರ ವಿರುದ್ಧ ಪಕ್ಷದ ಹೈಕಮಾಂಡ್ಗೆ ದೂರು ನೀಡಿದೆ. ಅಮರೀಂದರ್ ಅವರ ಕಾರ್ಯಶೈಲಿಯು ಪಕ್ಷ ಮತ್ತು ರಾಜ್ಯಕ್ಕೆ ಹಾನಿಯುಂಟುಮಾಡುತ್ತಿದೆ ಎಂದು ಉಲ್ಲೇಖಿಸಿರುವ ನಾಯಕರು ಅವರನ್ನು ಮುಖ್ಯಮಂತ್ರಿಯಾಗಿ ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.