ತುಮಕೂರು: ದನ ಮೇಯಿಸಲು ಹೋದ ಮಹಿಳೆ ಕಾಮುಕರಿಗೆ ಬಲಿ
ದನ ಮೇಯಿಸಲು ಗುಡ್ಡಕ್ಕೆ ಹೋಗಿದ್ದ ಮಹಿಳೆ ಕಾಮುಕರ ಕಾಮತೃಷೆಗೆ ಬಲಿಯಾಗಿರುವ ಘಟನೆ ತುಮಕೂರು ತಾಲೂಕಿನ ಹೀರೇಹಳ್ಳಿ ಸಮೀಪದ ಚೋಟಾಸಾಬರ ಪಾಳ್ಯದ ಬಳಿ ನಡೆದಿದೆ.
ಅತ್ಯಾಚಾರ ಮತ್ತು ಕೊಲೆಗೆ ಬಲಿಯಾದ ಮಹಿಳೆಯನ್ನು 35 ವರ್ಷದ ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ.
ದನಗಳನ್ನು ಮೇಯಿಸಲು ಚೋಟಾಸಾಬರ ಪಾಳ್ಯದ ಗುಡ್ಡಕ್ಕೆ ಜಯಲಕ್ಷ್ಮಿ ಹೋಗಿದ್ದರು. ಸಂಜೆಯಾದರೂ ಮನೆಗೆ ವಾಪಸ್ ಬರದೇ ಇದ್ದಾಗ ಅವರ ಪತಿ ಶಿವಕುಮಾರ್ ಹುಡುಕಾಟ ಶುರುಮಾಡಿದ್ದಾರೆ. ಆಗ ಬೆಟ್ಟದ ಮೇಲಿನ ಪೊದೆಯಲ್ಲಿ ಬೆತ್ತಲೆಯಾಗಿ ಬಿದ್ದಿದ್ದ ಜಯಲಕ್ಷ್ಮೀ ಅವರ ಮೃತದೇಹ ಸಿಕ್ಕಿದೆ. ಮೃತದೇಹದ ಮೇಲೆ ಕಚ್ಚಿದ ಗಾಯದ ಕಲೆಗಳು ಇದ್ದು, ಅಪರಿಚಿತರ ಗುಂಪು ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: ಮೈಸೂರು: ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ; ಪ್ರಕರಣ ದಾಖಲು
ಚೋಟಾಸಾಬ್ರ ಪಾಳ್ಯ ಗ್ರಾಮಕ್ಕೆ ಹೊಂದಿಕೊಂಡಿರುವ ಈ ನಿರ್ಜನ ಬೆಟ್ಟದಲ್ಲಿ ಆಗಾಗ ಅಪರಿಚಿತ ಯುವಕರ ಗುಂಪು ಮದ್ಯಪಾನ, ಗಾಂಜಾ ಸೇವನೆಯಂತಹ ಅನೈತಿಕ ಚಟುವಟಿಕೆ ಮಾಡುತ್ತಾರೆ ಎನ್ನಲಾಗಿದೆ. ಗಾಂಜಾ ಸೇವನೆ ನಶೆಯಲ್ಲಿ ಗ್ಯಾಂಗ್ ರೇಪ್ ನಡೆದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ದುರಂತಕ್ಕೆ ಜಯಲಕ್ಷ್ಮಿ ಅವರು ಅತ್ತೆಯೇ ಕಾರಣ. ಅವರು ಜಯಲಕ್ಷ್ಮಿಗೆ ನಿತ್ಯ ದನ ಮೇಯಿಸಲು ಹೋಗುವಂತೆ ಕಿರುಕುಳ ಕೊಡುತ್ತಿದ್ದರು. ಹೀಗಾಗಿ ಜಯಲಕ್ಷ್ಮಿ ಬೇರೆ ದಾರಿ ಕಾಣದೆ ದನ ಕಾಯೋಕೆ ಹೋಗುತ್ತಿದ್ದರು ಎಂದು ಮೃತಳ ಸಹೋದರ ಆರೋಪಿಸಿದ್ದಾರೆ.
ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪತ್ನಿಯನ್ನು ಕಳೆದುಕೊಂಡ ದುಃಖ; ಪತ್ನಿಯ ಚಿತೆಗೆ ಹಾರಿ ಪತಿಯೂ ಸಜೀವ ದಹನ!