6,7,8ನೇ ತರಗತಿ ಆರಂಭಿಸಲು ಸರ್ಕಾರ ನಿರ್ಧಾರ : ವಾರದಲ್ಲಿ 5 ದಿನ ಮಾತ್ರ ಶಾಲೆ ಓಪನ್!
ಕೊರೊನಾ 3ನೇ ಅಲೆಯ ಭೀತಿಯ ಮಧ್ಯೆ 6,7,8ನೇ ತರಗತಿ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಇಂದು ತಜ್ಞರೊಂದಿಗೆ ಮಹತ್ವದ ಸಭೆಯಲ್ಲಿ ಚರ್ಚಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಈ ಆದೇಶ ಹೊರಡಿಸಿದ್ದಾರೆ.
ಇಂದು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ್, ” ಇಂದು ತಜ್ಞರೊಂದಿಗೆ ಚರ್ಷಿಸಿ 6,7,8ನೇ ತರಗತಿ ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಪಾಸಿಟಿವ್ ರೇಟ್ ಶೇಕಡ 2ಕ್ಕಿಂತ ಕೊರೊನಾ ಕಡಿಮೆ ಇರುವ ತಾಲೂಕುಗಳಲ್ಲಿ ಶಾಲೆ ಆರಂಭಿಸಲಾಗುತ್ತದೆ. ಮಕ್ಕಳು ದಿನ ಬಿಟ್ಟು ದಿನ ಶಾಲೆಗೆ ಆಗಮಿಸುತ್ತಾರೆ. ಉದಾಹರಣೆಗೆ 30 ಜನ ಮಕ್ಕಳು ಇದ್ದರೆ, ಇವರಲ್ಲಿ 15 ಜನ ಮಕ್ಕಳು ಸೋಮವಾರ ಶಾಲೆಗೆ ಬಂದರೆ ಮರುದಿನ ಇನ್ನುಳಿದ 15 ಮಕ್ಕಳು ಶಾಲೆಗೆ ಬರಬೇಕು. 30 ಜನ ಮಕ್ಕಳು ಒಟ್ಟಿಗೆ ಬರುವಂತಿಲ್ಲ. ಈ ಮೂಲಕ ಶಾಲೆಯಲ್ಲಿ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಹೀಗೆ ಶೇ.50 ರಷ್ಟು ಮಾತ್ರ ಮಕ್ಕಳು ಶಾಲೆಗಳಿಗೆ ಹಾಜರಾಗಬೇಕು. ವಾರದಲ್ಲಿ 5 ದಿನ ಮಾತ್ರ ಶಾಲೆ ತೆರೆಯಲಾಗುತ್ತದೆ. ಉಳಿದ 2 ದಿನ (ಶನಿವಾರ ಮತ್ತು ಭಾನುವಾರ) ಶಾಲೆ ಸ್ವಚ್ಚಗೊಳಿಸಲಾಗುತ್ತದೆ” ಎಂದು ಹೇಳಿದರು.
ಇನ್ನೂ ಕೇರಳದಿಂದ ಬಂದವರಿಗೆ ಒಂದು ವಾರ ಕ್ವಾರಂಟೈನ್ ಆಗಬೇಕು. 7 ದಿನ ಆದ್ಮೇಲೆ ಟೆಸ್ಟ್ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಕೊರೊನಾ ಹೊಸ ಮಾರ್ಗಸೂಚಿಯಲ್ಲಿ ಹೊರಡಿಸಲಾಗಿದೆ.
ಜೊತೆಗೆ ರಾಜ್ಯಾದ್ಯಂತ ಗಣೇಶೋತ್ಸವಕ್ಕೆ ಅವಕಾಶ ನೀಡಲಾಗಿದೆ. ಡಿಸಿ ಎಸ್ಪಿಗಳ ಜೊತೆ ಗಣೇಶ್ ಹಬ್ಬದ ಆಚರಣೆ ಬಗ್ಗೆ ಚರ್ಚಿಸಲಾಗಿದೆ. ಸೆ.5 ರಂದು ಸಿಎಂ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಲಾಗುತ್ತದೆ ಎಂದಿದ್ದಾರೆ.