ಜೆಡಿಎಸ್ ಮುಳುಗುತ್ತಿರುವ ಪಕ್ಷ; ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ: ಅರುಣ್ ಸಿಂಗ್
ಕರ್ನಾಟಕದಲ್ಲಿ ಜೆಡಿಎಸ್ “ಮುಳುಗುತ್ತಿರುವ ಪಕ್ಷ’. ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿದ್ದಾರೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳು ಮತ್ತು ಪದಾಧಿಕಾರಿಗಳೊಂದಿಗೆ ಮೈಸೂರಿನ ಸಭೆ ನಡೆಸಿರುವ ಅರುಣ್ ಸಿಂಗ್, “ಜೆಡಿಎಸ್ ಮುಳುಗುತ್ತಿದೆ. ಬಿಜೆಪಿ ಬೆಳೆಯುತ್ತಿದೆ.” ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಜೆಡಿಎಸ್ ರಾಜ್ಯದಲ್ಲಿ ಕಾಂಗ್ರೆಸ್ ಜೊತೆಗೆ ಆಡಳಿತ ನಡೆಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿಯ ಮಾತೇ ಇಲ್ಲ. “ನಾವು ಬಹಳ ಮುಂದಿದ್ದೇವೆ” ಎಂದು ಹೇಳಿದ್ದಾರೆ.
ಬಿಜೆಪಿಯು ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಮುಂದಿನ ಚುನಾವಣೆಯಲ್ಲಿಯೂ ಸರ್ಕಾರವನ್ನು ರಚಿಸಲು ತನ್ನದೇ ಆದ ಬಹುಮತವನ್ನು ಗಳಿಸುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜಲಿಯನ್ ವಾಲಾಬಾಗ್: ಮೋದಿ ಹುತಾತ್ಮತೆಯ ಅರ್ಥ ತಿಳಿಯದ ವ್ಯಕ್ತಿ; ಹುತಾತ್ಮರಿಗೆ ಅವಮಾನ ಮಾಡಿದ್ದಾರೆ: ರಾಹುಲ್ಗಾಂಧಿ ಆಕ್ರೋಶ
ಹಳೆಯ ಮೈಸೂರು ಪ್ರದೇಶದಲ್ಲಿ ಬಿಜೆಪಿಯ ಗ್ರಾಫ್ ಕ್ರಮೇಣ ಹೆಚ್ಚುತ್ತಿದೆ. ಹಾಸನ ಮತ್ತು ಮಂಡ್ಯ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವು 8 ರಿಂದ 10 ಪಟ್ಟು ಹೆಚ್ಚು ಸ್ಥಾನಗಳನ್ನು ಪಡೆಯುವ ಮಟ್ಟಗೆ ಪಕ್ಷ ಬೆಳೆದಿದೆ. ಸಂಘಟನೆಯನ್ನು ಬಲಪಡಿಸುವ ಮೂಲಕ, ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಿಂಗ್ ಹೇಳಿದ್ದಾರೆ.
ಮೈಸೂರಿನಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಈ ಕೆಲಸಕ್ಕಾಗಿ ನಾನು ಪಕ್ಷದ ಸಂಸದರು ಮತ್ತು ಶಾಸಕರನ್ನು ಅಭಿನಂದಿಸುತ್ತೇನೆ. ಮೈಸೂರು ಮತ್ತು ಬೆಂಗಳೂರು ನಡುವಿನ ಎಕ್ಸ್ಪ್ರೆಸ್ವೇಯನ್ನು ಆರು ಪಥಗಳಿಂದ 10 ಪಥಗಳಿಗೆ ವಿಸ್ತರಿಸುವುದರಿಂದ ಜನರು 90 ನಿಮಿಷಗಳಲ್ಲಿ ಎರಡು ನಗರಗಳ ನಡುವೆ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ “ಶಾಂತಿ ಮತ್ತು ಅಭಿವೃದ್ಧಿ ಇದೆ” ಎಂದು ಸಿಂಗ್ ಹೇಳಿದ್ದಾರೆ.
ಕರ್ನಾಟಕ ಸಚಿವ ಸುಂಪುಟದ ಭಿನ್ನರಾಗಗಳ ಬಗ್ಗೆ ಮಾತಮಾಡಿರುವ ಅವರು, ಎಲ್ಲಾ ಮಂತ್ರಿಗಳು ತಮಗೆ ನೀಡಲಾದ ಖಾತೆಗಳನ್ನು ಸ್ವೀಕರಿಸಿದ್ದಾರೆ. ಈಗಾಗಲೇ ಹಂಚಿಕೆಯಾಗಿರುವ ಖಾತೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಜನರ ಹಿತಾಸಕ್ತಿಗಾಗಿ ದುಡಿಯಬೇಕು. ವೈಯಕ್ತಿಕ ಲಾಲಸೆಗಳನ್ನು ಸಚಿವರು ಬಿಡಬೇಕು ಎಂದು ಹೇಳಿದ್ದಾರೆ.