ದೇವಾಲಯದಲ್ಲಿ ಅಲೆಮಾರಿ ಮಹಿಳೆಗೆ ಊಟ ನಿರಾಕರಣೆ; ಮಹಿಳೆಯ ಮನೆಗೆ ಭೇಟಿ ನೀಡಿದ ಸಿಎಂ ಸ್ಟಾಲಿನ್!
ತಮಿಳುನಾಡಿನ ಮಾಮಲ್ಲಪುರಂ ದೇವಸ್ಥಾನದಲ್ಲಿ ಅಲೆಮಾರಿ ಸಮುದಾಯದ ಮಹಿಳೆ ಅಶ್ವಿನಿ ಅವರಿಗೆ ಇತ್ತೀಚೆಗೆ ಊಟ ನಿರಾಕರಿಸಲಾಗಿತ್ತು. ಈ ಬಳಿಕ ಸಚಿವ ಶೇಖರ್ ಅವರು ಆಕೆಯೊಂದಿಗೆ ಕುಳಿತು ಊಟ ಮಾಡಿದ್ದರು. ಇದೀಗ ಸಿಎಂ ಎಂ.ಕೆ ಸ್ಟಾಲಿನ್ ಅವರು ಆಕೆಯ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲದೆ, ನರಿಕುರವರ್ ಜನಾಂಗದ ಅಭಿವೃದ್ದಿಗೆ ಯೋಜನೆಯನ್ನೂ ಘೋಷಿಸಿದ್ದಾರೆ.
ನರಿಕುರವರ್ ಮತ್ತು ಇರುಳರ್ ಸಮುದಾಯ ವಾಸಿಸುವ ಮಾಮಲ್ಲಪುರಂ ಬಳಿಯ ಪೂಂಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸ್ಟಾಲಿನ್ 81 ಜನರಿಗೆ ವಸತಿ ಹಕ್ಕುಪತ್ರ ವಿತರಿಸಿದ್ದಾರೆ. 10 ಲಕ್ಷ ವೆಚ್ಚದ ಅಂಗನವಾಡಿ ಮತ್ತು ಪಂಚಾಯತ್ ಯೂನಿಯನ್ ಶಾಲೆಗಳನ್ನು ನಿರ್ಮಿಸಲು ಮತ್ತು ಇತರ ಅಭಿವೃದ್ಧಿ ಕಾರ್ಯಕ್ರಮಗಳ ಆದೇಶಗಳನ್ನು ಸಹ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಮಾಡಿದ್ದಾರೆ.
ಮುಖ್ಯಮಂತ್ರಿಯನ್ನು ಭೇಟಿಯಾದ ಅಶ್ವಿನಿ ಅವರಿಗೆ ಮಣಿ ಹಾರ ಮತ್ತು ಪೊನ್ನಾಡೈ ಶಾಲುಗಳನ್ನು ನೀಡಿ ಗೌರವಿಸಿದರು.
ಈ ವೇಳೆ ಮಾತನಾಡಿದ ಅವರು, “ಮುಖ್ಯಮಂತ್ರಿಗಳಿಗೆ ಧನ್ಯವಾದಗಳು, ನಾವು ಈಗ ಮತದಾರರ ಗುರುತಿನ ಚೀಟಿ, ಆಧಾರ್ ಮತ್ತು ಕುಟುಂಬ ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದೇವೆ. ಇದು ಕನಸಿನಂತೆ ಭಾಸವಾಗುತ್ತಿದೆ. ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳಲ್ಲಿ ಪಡಿತರ ಚೀಟಿ ಪಡೆಯಲು ನಾಲ್ಕು ತಿಂಗಳು ಹರಸಾಹಸ ಪಡಬೇಕಾದ ನಮಗೆ ನೇರವಾಗಿ ಅವರಿಂದಲೇ ಎರಡೇ ದಿನದಲ್ಲಿ ಕಾರ್ಡ್ ಸಿಕ್ಕಿದೆ. ನಾನು ಸಚಿವ ಶೇಖರ್ ಬಾಬು ಅವರನ್ನು ಭೇಟಿಯಾದಾಗ, ನಮ್ಮನ್ನು ಇಲ್ಲಿಂದ ಹೊರಹಾಕುತ್ತಾರೋ ಎಂಬ ಭಯದಲ್ಲಿ ಇಲ್ಲಿ ಪ್ರತಿದಿನ ನಾವು ವಾಸಿಸುತ್ತಿದ್ದೇವೆ ಎಂದು ಹೇಳಿದ್ದೆ. ಈಗ ನಮ್ಮಲ್ಲಿ ಪತ್ರಗಳಿವೆ, ನಮಗೆ ಆ ಭಯವಿಲ್ಲ” ಎಂದು ಹೇಳಿದ್ದಾರೆ.
ಚೆಂಗಲ್ಪೇಟ್ನಲ್ಲಿ ತಮಿಳುನಾಡು ಮುಖ್ಯಮಂತ್ರಿಗಳು ನರಿಕುರವರ್ ಮತ್ತು ಇರುಳ ಬುಡಕಟ್ಟು ಜನಾಂಗದ 282 ಜನರಿಗೆ 4.53 ಕೋಟಿ ರೂಪಾಯಿಗಳ ಸರ್ಕಾರದ ಕಲ್ಯಾಣ ಯೋಜನೆಯನ್ನು ಘೋಷಿಸಿದ್ದಾರೆ. ಜೊತೆಗೆ ಪುರಸಭೆಯ ಸಾರ್ವಜನಿಕ ನಿಧಿ ಯೋಜನೆಯಡಿ 10 ಲಕ್ಷ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಆದೇಶಿಸಿದರು.
ಚೆಂಗಲ್ಪೇಟೆ ಜಿಲ್ಲೆಯಲ್ಲಿ ವಾಸಿಸುತ್ತಿರುವ 282 ಜನರಿಗೆ ವಸತಿ ಬಾಂಡ್ಗಳು, ಕುಟುಂಬ ಕಾರ್ಡ್ಗಳು, ಮತದಾರರ ಗುರುತಿನ ಚೀಟಿಗಳು, ಜಾತಿ ಪ್ರಮಾಣಪತ್ರಗಳು, ಕಲ್ಯಾಣ ಮಂಡಳಿ ಕಾರ್ಡ್ಗಳು, ತರಬೇತಿ ಆದೇಶಗಳು ಮತ್ತು ಬ್ಯಾಂಕ್ ಸಾಲವನ್ನು ಸಿಎಂ ವಿತರಿಸಿದ್ದಾರೆ. ಇಷ್ಟೇ ಅಲ್ಲದೆ, ನಗರಾಭಿವೃದ್ಧಿ ಯೋಜನೆ ಪ್ರಸ್ತಾವನೆಗೂ ಮುಖ್ಯಮಂತ್ರಿ ಅನುಮೋದನೆ ನೀಡಿದ್ದು, ಜಿಲ್ಲೆಯಲ್ಲಿ ಅಂಗನವಾಡಿ ಹಾಗೂ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಆದೇಶ ಹೊರಡಿಸಿದ್ದಾರೆ.
81 ಮಂದಿಗೆ 3.52 ಕೋಟಿ ರೂ.ವೆಚ್ಚದ ವಸತಿ ಪತ್ರ, ಆರು ಮಂದಿಗೆ ವೃದ್ಧಾಪ್ಯ ಕಲ್ಯಾಣ ಯೋಜನೆ, 21 ಮಂದಿಗೆ ಪಡಿತರ ಚೀಟಿ, 18 ಮಂದಿಗೆ ಮತದಾರರ ಗುರುತಿನ ಚೀಟಿ, ಇರುಳ ಸಮುದಾಯದ 88 ಮಂದಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಮತ್ತು 34 ನರಿಕುರವರ್ ಜನರು ತಮ್ಮ ಅತ್ಯಂತ ಹಿಂದುಳಿದ ವರ್ಗ (MBC) ಪ್ರಮಾಣಪತ್ರಗಳನ್ನು ಪಡೆದಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಹೆಚ್ಚುವರಿಯಾಗಿ, 12 ಜನರು ಮುದ್ರಾ ಯೋಜನೆಯಡಿಯಲ್ಲಿ ತಲಾ ರೂ 1 ಲಕ್ಷ ಸಾಲದ ಮೊತ್ತವನ್ನು ಮತ್ತು ಸಣ್ಣ ವ್ಯಾಪಾರ ಯೋಜನೆಯಡಿಯಲ್ಲಿ 33 ಜನರಿಗೆ ತಲಾ ರೂ 10,000 ಸಾಲದ ಮೊತ್ತವನ್ನು ನೀಡಲಾಗಿದೆ. ಪೂಂಚೇರಿಗೆ ರಸ್ತೆ, ವಿದ್ಯುತ್, ಕುಡಿಯುವ ನೀರು ಮತ್ತು ಇತರ ಅಗತ್ಯ ವಸ್ತುಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಸಿಎಂ ಸ್ಟಾಲಿನ್ ಅವರು ಕಾರ್ಯಕ್ರಮದಲ್ಲಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಮಂಡ್ಯ: ದಲಿತ ಯುವಕನನ್ನು ಹಸುವಿನೊಂದಿಗೆ ಕಟ್ಟಿ, ಹಲ್ಲೆ ನಡೆಸಿ ಜಾತಿ ದೌರ್ಜನ್ಯ
ಅಶ್ವಿನಿ ಅವರಿಗೆ ಇತ್ತೀಚೆಗೆ ಮಾಮಲ್ಲಪುರಂ ದೇವಸ್ಥಾನದಲ್ಲಿ ಊಟ ನಿರಾಕರಿಸಲಾಗಿತ್ತು. ಬಡವರಿಗೆ ಉಚಿತ ದೇವಸ್ಥಾನದ ಊಟವನ್ನು ನೀಡುವ ಅನ್ನದಾನಂ ಯೋಜನೆ, ಡಿಎಂಕೆ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಸಿಇ ಇಲಾಖೆಯಿಂದ ಪ್ರಾರಂಭಿಸಲ್ಪಟ್ಟಿದ್ದು, ಪ್ರಸ್ತುತ ತಮಿಳುನಾಡಿನಾದ್ಯಂತ 754 ಸ್ಥಳಗಳಲ್ಲಿ ಸಕ್ರಿಯವಾಗಿದೆ. ಈ ಯೋಜನೆಯಡಿಯಲ್ಲಿ ತಾರತಮ್ಯ ಎಸಗಲಾಗಿದೆ, ತನಗೆ ಮತ್ತು ತನ್ನ ಸಮುದಾಯದವರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡಿಲ್ಲ ಎಂದು ಅಶ್ವಿನಿ ಆರೋಪಿಸಿದ್ದರು. ಅಶ್ವಿನಿ ಪ್ರಶ್ನಿಸಿದ್ದ ಈ ವಿಡಿಯೊ ವೈರಲ್ ಆಗಿತ್ತು.
ಇದು ಸರ್ಕಾರದ ಗಮನಕ್ಕೆ ಬಂದ ನಂತರ ತಮಿಳುನಾಡು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಚಿವರು ಯಾವ ದೇವಸ್ಥಾನದಲ್ಲಿ ಆ ಮಹಿಳೆಗೆ ಆಹಾರ ನಿರಾಕರಿಸಲಾಯಿತೋ ಅದೇ ದೇವಸ್ಥಾನದಲ್ಲಿ ಮಹಿಳೆಯೊಟ್ಟಿಗೆ ಕುಳಿತು ಊಟ ಮಾಡುವ ಮೂಲಕ ಕ್ರಾಂತಿಕಾರಿ ನಡೆ ಅನುಸರಿಸಿದ್ದರು.
ಅಕ್ಟೋಬರ್ 29 ರಂದು ಸಚಿವ ಪಿ.ಕೆ ಸೇಕರ್ ಬಾಬುರವರೊಂದಿಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಮತ್ತು ತಿರುಪೊರುರು ಶಾಸಕರಾದ ಎಸ್.ಎಸ್ ಬಾಲಾಜಿ ಕೂಡಾ ಸ್ಥಳಸಯನ ಪೆರುಮಾಳ್ ದೇವಾಲಯದಲ್ಲಿ ನಡೆದ ಸಾಮೂಹಿಕ ಭೋಜನ ಕಾರ್ಯಕ್ರಮದಲ್ಲಿ ತಾರತಮ್ಯಕ್ಕೊಳಗಾಗಿದ್ದ ಅಶ್ವಿನಿಯವರೊಂದಿಗೆ ಊಟ ಮಾಡಿದ್ದರು. ಇದರ ಜೊತೆಗೆ ಅಶ್ವಿನಿಯವರೊಂದಿಗೆ ಊಟ ನಿರಾಕರಿಸಲ್ಪಟ್ಟ ನರಿಕುರವರ್ ಸಮುದಾಯದ ಹಲವು ಜನರು ಭಾಗವಾಗಿಸಿದ್ದರು.
ಇದನ್ನೂ ಓದಿ: ಪರಿಶಿಷ್ಟ ಜಾತಿಯವರನ್ನು ಸಿನಿಮಾ ಇಂಡಸ್ಟ್ರಿಯಿಂದ ಹೊರ ಹಾಕಬೇಕು ಎಂದ ನಟಿ; ಪ್ರಕರಣ ದಾಖಲು