Fact check: UP ಮುಸ್ಲಿಮ್ಮರು BJP ಯನ್ನು ಬೆಂಬಲಿಸುತ್ತಿದ್ದಾರೆ ಎಂದು ಸುದ್ದಿ ಮಾಡಿದ ‘ಟಿವಿ9 ಭಾರತವರ್ಷ’! ವಾಸ್ತವವೇನು?

ಜನವರಿ 29 ರಂದು, ಟಿವಿ9 ಭಾರತವರ್ಷವು ‘ದಿ ಎಂ ಫ್ಯಾಕ್ಟರ್’ ಎಂಬ ವಿಶೇಷ ವರದಿಯನ್ನು ಪ್ರಸಾರ ಮಾಡಿತು. ಈ ವರದಿಯ ಆರಂಭಿಕ ಹೇಳಿಕೆಗಳಲ್ಲಿ ಆಂಕರ್ ಸಮೀರ್ ಅಬ್ಬಾಸ್ ಅವರು, ‘ಈ ವರದಿಯು ಪಶ್ಚಿಮ ಯುಪಿಯ ಬಿಜ್ನೋರ್ ಜಿಲ್ಲೆಯಲ್ಲಿ ಯಾವ ಪಕ್ಷವು ಮುಸ್ಲಿಂ ಮತಗಳನ್ನು ಸೆಳೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಗ್ರೌಂಡ್‌ ಟೆಸ್ಟ್‌ ನಡೆಸುತ್ತಿದೆ’ ಎಂದು ಹೇಳುತ್ತಾರೆ. ಈ ವರದಿಗೂ ಒಂದು ದಿನ ಮೊದಲು ಮುಖ್ಯಮಂತ್ರಿ ಆದಿತ್ಯನಾಥ್ ಅವರು ಬಿಜ್ನೋರ್‌ನಲ್ಲಿ ಮನೆ-ಮನೆ ಪ್ರಚಾರ ನಡೆಸಿದ್ದರು.

ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ಈ ಪ್ರಸಾರದ 47 ಸೆಕೆಂಡುಗಳ ಕ್ಲಿಪ್ ಅನ್ನು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಮಹಿಳೆಯೊಬ್ಬರು ಬಿಜೆಪಿ ಮತ್ತು ಸಿಎಂ ಆದಿತ್ಯನಾಥ್ ಅವರನ್ನು ಅನುಮೋದಿಸುವುದನ್ನು ತೋರಿಸುತ್ತದೆ. ಇದೇ ವಿಡಿಯೊವನ್ನು ಬಿಜೆಪಿ ಉತ್ತರ ಪ್ರದೇಶ ಟ್ವಿಟರ್‌ ಹ್ಯಾಂಡಲ್‌ ಕೂಡಾ ಹಂಚಿಕೊಂಡಿದೆ. ಎರಡೂ ಖಾತೆಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

ವಿಡಿಯೋದಲ್ಲಿರುವ ಮಹಿಳೆಯನ್ನು “ನೂರ್‌ಪುರದ ಮುಸ್ಲಿಂ ಮತದಾರ” ಎಂದು ಗುರುತಿಸಲಾಗಿದೆ. ನೂರ್‌ಪುರ ಬಿಜ್ನೋರ್‌ನಲ್ಲಿರುವ ಒಂದು ನಗರವಾಗಿದೆ.

 

ಟಿವಿ9 ಈ ವರದಿಯಲ್ಲಿ ಜನಾಭಿಪ್ರಾಯ ಎಂದು 11 ಮುಸ್ಲಿಂ ವ್ಯಕ್ತಿಗಳನ್ನು ಸಂದರ್ಶಿಸಿದ್ದು, ಅವರಲ್ಲಿ 10 ಮಂದಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಟಿವಿ9 ನ ವ್ಯವಸ್ಥಾಪಕ ಸಂಪಾದಕ ಸಂತ ಪ್ರಸಾದ್ ರೈ ಅವರು ಸಂಬಿತ್‌ ಪತ್ರಾ ಅವರ ಟ್ವೀಟ್ ಅನ್ನು ಉಲ್ಲೇಖಿಸಿ ಖುಷಿಯಿಂದ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‌ನಲ್ಲಿ ಅವರು, ಟಿವಿ9ಭಾರತ್‌ವರ್ಷ ಮಾಡಿರುವ ಕಾರ್ಯಕ್ರಮ ‘ಭಾರಿ ವೈರಲ್’ ಆಗಿದೆ ಎಂದು ಬರೆದಿದ್ದು, ‘ವಾಸ್ತವ ವರದಿಯನ್ನು’ ಪ್ರಸ್ತುತಪಡಿಸಿದ್ದಕ್ಕಾಗಿ ವರದಿಗಾರ ಶ್ರೀನಿವಾಸ್ ಅವರನ್ನು ಶ್ಲಾಘಿಸಿದ್ದಾರೆ.

 

ಪ್ರೊಪಗಾಂಡವನ್ನು ಸುದ್ದಿಯಾಗಿ ಪ್ರಸಾರ ಮಾಡಲಾಗಿದೆಯೆ?

ಜನಾಭಿಪ್ರಾಯವು ಪತ್ರಿಕೋದ್ಯಮದ ಒಂದು ರೂಪವಾಗಿದ್ದು, ಜನರ ಅಭಿಪ್ರಾಯವನ್ನು ಪ್ರಸ್ತುತಪಡಿಸಲು ವರದಿಗಾರ ಸಾರ್ವಜನಿಕರೊಂದಿಗೆ ಕಿರು ಸಂದರ್ಶನಗಳನ್ನು ನಡೆಸುತ್ತಾನೆ. ಜನಾಭಿಪ್ರಾಯದ ಪ್ರಮುಖ ವೈಶಿಷ್ಟ್ಯವೆಂದರೆ, ಮಾಧ್ಯಮಗಳು ಸಾಮಾನ್ಯ ಜನರನ್ನು ಸಂದರ್ಶಿಸುವುದಾಗಿದೆ. ಇದಕ್ಕೆ ಯಾವುದೆ ಪೂರ್ವಾಭ್ಯಾಸ ಇರುದಿಲ್ಲ. ಜನರು ಯಾರ ಪರವಾಗಿ ಇದ್ದಾರೆ ಎಂದು ತಿಳಿದುಕೊಳ್ಳಲು ಯಾದೃಚ್ಛಿಕವಾಗಿ ಜನರನ್ನು ಸಂದರ್ಶನ ನಡೆಸಲಾಗುತ್ತದೆ.

ಆದಾಗ್ಯೂ, TV9ನ ಈ ಜನಾಭಿಪ್ರಾಯದ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಬಿಜೆಪಿ ಬೆಂಬಲಿಸುವವರಿದ್ದರು. ಯಾಕೆಂದರೆ ಅವರು ಸಂದರ್ಶಿಸಿದ ಹೆಚ್ಚಿನ ಜನರು ಬಿಜೆಪಿಯ ಸದಸ್ಯರು, ಕಾರ್ಯಕರ್ತರು ಮತ್ತು ಬೆಂಬಲಿಗರಾಗಿದ್ದರು!.

ಟಿವಿ9 ಕಾರ್ಯಕ್ರಮವನ್ನು ದೇಶದ ಖ್ಯಾತ ಫ್ಯಾಕ್ಟ್‌ಚೆಕ್‌ ವೈಬ್‌ಸೈಟ್‌ ಆಲ್ಟ್ ನ್ಯೂಸ್‌‌ ಪರಿಶೀಲಿಸಿದ್ದು, ಚಾನೆಲ್‌ ಸಂದರ್ಶಿಸಿದ ಹಲವು ಜನರು ಬಿಜೆಪಿಯದ್ದೇ ಜನರು ಎಂದು ಅದು ಕಂಡುಕೊಂಡಿದೆ.

ಟಿವಿ9 ಕಾರ್ಯಕ್ರಮದ 8:45 ನಿಮಿಷದಲ್ಲಿ, ಅಲಿಶಾ ಸಿದ್ದಿಕಿ ಎಂಬವರನ್ನು ಸಂದರ್ಶಿಸಿದ್ದು, ಅವರು ಯುಪಿಯಲ್ಲಿ ಮುಂಬರುವ ಚುನಾವಣೆಗಳ ಕುರಿತು ಮಾತನಾಡುತ್ತಾ, “ಈ ಬಾರಿ ಯೋಗಿ ಜಿ ಆಯ್ಕೆಯಾಗುತ್ತಾರೆ ಎಂದು ನಾನು ಭಾವಿಸುತ್ತೇನೆ..” ಎಂದು ಹೇಳುತ್ತಾರೆ. TV9 ಅವರನ್ನು “ನೂರ್‌‌ಪುರದ ಮುಸ್ಲಿಂ ಮತದಾರ” ಎಂದು ಗುರುತಿಸಿದೆ.

ಆದರೆ, ಫೇಸ್‌ಬುಕ್‌ನಲ್ಲಿ ಅವರ ಹೆಸರನ್ನು ಹುಡುಕಿದಾಗ, ಅವರು ಬಿಜೆಪಿ ಸದಸ್ಯೆ ಎಂದು ತಿಳಿದು ಬಂದಿದೆ. ಪರಾಕ್ರಮ್ ದಿವಸ್ (ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ) ಸಂದರ್ಭದಲ್ಲಿ ಅಲಿಶಾ ಸಿದ್ದೀಕಿ ಅವರು ಬಿಜೆಪಿಯ ಪೋಸ್ಟರ್‌‌ ಅನ್ನು ತನ್ನ ಭಾವಚಿತ್ರದೊಂದಿಗೆ ಹಂಚಿಕೊಂಡಿದ್ದಾರೆ. ಅವರ ಪ್ರೊಫೈಲ್‌ನಲ್ಲಿ ಅವರು ಬಿಜೆಪಿ ಸದಸ್ಯೆ ಎಂದು ತಿಳಿಯಲು ಹಲವು ಚಿತ್ರಗಳಿವೆ. (1 ಮತ್ತು 2)

ವಿಡಿಯೊದ 7:05 ನಿಮಿಷದಲ್ಲಿ, ಹೆಸರಿಲ್ಲದ ವ್ಯಕ್ತಿಯನ್ನು “ನೂರ್‌ಪುರದ ಮುಸ್ಲಿಂ ಮತದಾರ” ಎಂದು ಪರಿಚಯಿಸಲಾಗಿದೆ. “ದ್ವೇಷವನ್ನು ಪ್ರೀತಿಯಾಗಿ ಪರಿವರ್ತಿಸುವವರು ಯಾರು?” ಎಂದು ವರದಿಗಾರರು ಕೇಳಿದಾಗ ಅವರು ಬಿಜೆಪಿಯ ಬಿಜ್ನೋರ್ ಮೂಲದ ನಾಯಕ ಸಿಪಿ ಸಿಂಗ್ ಎಂದು ಹೆಸರಿಸಿದರು. ಇದಕ್ಕೆ ವರದಿಗಾ “ಸಿಪಿ ಸಿಂಗ್ ಯಾರು?” ಎಂದು ಕೇಳುತ್ತಾರೆ. ಆಗ ಆ ಮುಸ್ಲಿಂ ವ್ಯಕ್ತಿ, “ಅವರು ನಮ್ಮ ಶಾಸಕರು.. ಬಿಜೆಪಿ ಅಭ್ಯರ್ಥಿ” ಎಂದು ಹೇಳುತ್ತಾರೆ. ಈ ಹೊತ್ತಲ್ಲಿ ವರದಿಗಾರ ಆ ವ್ಯಕ್ತಿಯನ್ನು ಹಲವು ಬಾರಿ ಕೇಳುತ್ತಾರೆ, “ನೀವು ಬಿಜೆಪಿಯವರೇ?” ಅದಕ್ಕೆ ಆ ವ್ಯಕ್ತಿ ‘ಹೌದು’ ಎಂದು ಉತ್ತರಿಸುತ್ತಾರೆ.

ಆಲ್ಟ್‌‌‌ ನ್ಯೂಸ್‌‌‌ ಅಲ್ಲಿನ ಸ್ಥಳೀಯ ಪತ್ರಕರ್ತ ನರೇಂದ್ರ ಪ್ರತಾಪ್ ಅವರನ್ನು ಸಂಪರ್ಕಿಸಿದ್ದು, ಅವರು TV9 ಕಾರ್ಯಕ್ರಮದಲ್ಲಿನ ಹಲವು ಜನರನ್ನು ಗುರುತಿಸಿದ್ದಾರೆ.

14:36 ನಿಮಿಷದಲ್ಲಿ, ಅಮ್ಜದ್ ಅಲಿ ಅನ್ಸಾರಿ ಎಂಬವರನ್ನು ಸಂದರ್ಶಿಸಲಾಗಿದೆ. ಅನ್ಸಾರಿ ಅವರು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ನಾಯಕ ಎಂದು ನರೇಂದ್ರ ಪ್ರತಾಪ್‌ ತಿಳಿಸಿದ್ದಾರೆ.

ಅಮ್ಜದ್ ಅಲಿ ಅನ್ಸಾರಿ ಅವರ ಚಿತ್ರವಿರುವ ಬಿಜೆಪಿಯ ರಾಜಕೀಯ ಪೋಸ್ಟರ್ ಅನ್ನು ಸಹ ಪ್ರತಾಪ್ ಹಂಚಿಕೊಂಡಿದ್ದಾರೆ.

16:12 ನಿಮಿಷಕ್ಕೆ, ಧರ್ಮಪುರದ “ಮುಸ್ಲಿಂ ಮತದಾರ” ಎಂದು ಸಂದರ್ಶಿಸಲಾಗಿದೆ. ಆದರೆ TV9 ಈ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಲಿಲ್ಲ.

ಈ ವ್ಯಕ್ತಿಯ ಹೆಸರು ಜಾವೇದ್ ಮುಲ್ತಾನಿ ಎಂದು ಪತ್ರಕರ್ತ ನರೇಂದ್ರ ಪ್ರತಾಪ್ ಬಹಿರಂಗಪಡಿಸಿದ್ದಾರೆ. ಅವರ ಚಿತ್ರವಿರುವ ಬಿಜೆಪಿಯ ಪೋಸ್ಟರ್‌‌ ಅನ್ನು ಪ್ರತಾಪ್ ಅವರು ಹಂಚಿಕೊಂಡಿದ್ದಾರೆ. ಕೆಳಗಿನ ಪೋಸ್ಟರ್‌ನಲ್ಲಿ, ಮುಲ್ತಾನಿ ಬಲಭಾಗದಲ್ಲಿದ್ದರೆ, ಬಿಜೆಪಿಯ ಧಂಪುರ್ ಶಾಸಕ ಅಶೋಕ್ ರಾಣಾ ಎಡಭಾಗದಲ್ಲಿದ್ದಾರೆ.

ಮುಲ್ತಾನಿಯ ಫೇಸ್‌ಬುಕ್ ಪ್ರೊಫೈಲ್ ಅಲ್ಲಿ ಕೂಡಾ ಈ ಪೋಸ್ಟರ್‌ ಇರುವುದು ಕಾಣುತ್ತದೆ.

ಇದರ ಜೊತೆಗೆ ಸಿಎಂ ಆದಿತ್ಯನಾಥ್ ಜೊತೆ ಮುಲ್ತಾನಿ ಕ್ಲಿಕ್ಕಿಸಿಕೊಂಡ ಸೆಲ್ಫಿಯನ್ನೂ ಪ್ರತಾಪ್ ಹಂಚಿಕೊಂಡಿದ್ದಾರೆ.

17:18 ನಿಮಿಷದಲ್ಲಿ, ದಾವುದ್‌ ಅಲಿ ಎಂಬವರನ್ನು ಸಂದರ್ಶಿಸಲಾಗಿದೆ. ಈ ವ್ಯಕ್ತಿ ಬಿಜೆಪಿ ಶಾಸಕ ಅಶೋಕ್ ರಾಣಾ ಅವರ ವೈಯಕ್ತಿಕ ಅಂಗರಕ್ಷಕ ಎಂದು ಪ್ರತಾಪ್ ಗುರುತಿಸಿಸಿದ್ದಾರೆ.

ಆದರೆ ಬಿಜೆಪಿ ಶಾಸಕ ಅಶೋಕ್‌ ರಾಣಾ ಈ ಹೇಳಿಕೆಯನ್ನು ನಿರಾಕರಿಸಿದ್ದು, “ದಾವುದ್ ಅಲಿ ಮತ್ತು ನಾನು ಬಹಳ ಸಮಯದಿಂದ ಸಹವರ್ತಿಯಾಗಿದ್ದೇವೆ. ಬಿಜೆಪಿಗೆ ಸಂಬಂಧಿಸಿದ ಎಲ್ಲಾ ಸಭೆಗಳಲ್ಲಿ ಅವರು ಹಾಜರಿರುತ್ತಾರೆ” ಎಂದು ಹೇಳಿದ್ದಾರೆ.

“ಸಂದರ್ಶನದಲ್ಲಿ ಹೆಚ್ಚಿನ ಜನರು ಬಿಜೆಪಿ ಜೊತೆಗೆ ಸಂಬಂಧ ಹೊಂದಿದ್ದಾರೆ” ಎಂದು ದಾವುದ್‌ ಅಲಿ ತಿಳಿಸಿದ್ದಾರೆ ಎಂದು ಆಲ್ಟ್‌ ನ್ಯೂಸ್‌ ವರದಿ ಮಾಡಿದೆ.

13:56 ನಿಮಿಷದಲ್ಲಿ, ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ನಾಯಕ ಅಮ್ಜದ್ ಅಲಿ ಅನ್ಸಾರಿ ಸಂದರ್ಶನ ಮಾಡುವ ಮೊದಲು, ಟಿವಿ9 ನಜಾಕತ್ ಹುಸಿಯಾನ್ ಅವರ ಬೈಟ್ ಅನ್ನು ಪ್ರಸಾರ ಮಾಡಿದೆ. ಹುಸೇನ್ ಬಿಜೆಪಿ ಕಾರ್ಯಕರ್ತ ಆಗಿದ್ದು, ಪಕ್ಷದಲ್ಲಿ ಅಧಿಕೃತ ಹುದ್ದೆಯನ್ನು ಹೊಂದಿಲ್ಲ ಎಂದು ಅನ್ಸಾರಿ ಆಲ್ಟ್ ನ್ಯೂಸ್‌ಗೆ ತಿಳಿಸಿದ್ದಾರೆ.

15:17 ನಿಮಿಷದಲ್ಲಿ, ಮೊಹಮ್ಮದ್ ಮುಬಿನ್ ಅವರನ್ನು ಸಂದರ್ಶಿಸಲಾಗಿದೆ. ಮುಬಿನ್ ಸಹ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದು, ಆದರೆ ಪಕ್ಷದ ಅಧಿಕೃತ ಹುದ್ದೆಯನ್ನು ಹೊಂದಿಲ್ಲ ಎಂದು ಅನ್ಸಾರಿ ಆಲ್ಟ್ ನ್ಯೂಸ್‌ಗೆ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಟಿವಿ9 ಇನ್ನೂ ಮೂವರು ಮುಸ್ಲಿಂ ವ್ಯಕ್ತಿಗಳನ್ನು ಮಾಡಿದೆ. ಆದರೆ ಅವರನ್ನು ಗುರುತಿಸಲು ಆಲ್ಟ್‌‌ನ್ಯೂಸ್‌ಗೆ ಸಾಧ್ಯವಾಗಿಲ್ಲ.

ಆದಾಗ್ಯೂ, ಟಿವಿ9 ಸಂದರ್ಶಿಸಿದ 11 “ಮುಸ್ಲಿಂ ಮತದಾರರಲ್ಲಿ” ಕನಿಷ್ಠ ಏಳು ಮಂದಿ ಬಿಜೆಪಿಯ ಸದಸ್ಯರು ಅಥವಾ ಕಾರ್ಯಕರ್ತರಾಗಿದ್ದಾರೆ. ಟಿವಿ ಭಾರತವರ್ಷ್, ಈ ವ್ಯಕ್ತಿಗಳನ್ನು ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಸಾಮಾನ್ಯ “ಮುಸ್ಲಿಂ ಧ್ವನಿಗಳು” ಎಂದು ಪ್ರಸ್ತುತಪಡಿಸಿದೆ.

                                                                                                                                                                                     ಕೃಪೆ: Alt News


ಇದನ್ನೂ ಓದಿ: Fact check: ದೆಹಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights