ಫ್ಯಾಕ್ಟ್‌ಚೆಕ್: ಮಸೀದಿ ಕೆಡವಿದಾಗ ವೀರಭದ್ರೇಶ್ವರ ದೇವಾಲಯ ಪತ್ತೆ! ವಾಸ್ತವವೇನು?

ಕರ್ನಾಟಕದ ರಾಯಚೂರಿನಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮಸೀದಿಯ ಮಿನಾರೆಟ್ ಅನ್ನು ಕೆಡವಿದಾಗ ಪ್ರಸಿದ್ಧ ವೀರಭದ್ರೇಶ್ವರ ದೇವಸ್ಥಾನ ಹೊರಬಂದಿತು, ದೇಶದಲ್ಲಿ ಇನ್ನೂ ಅದೆಷ್ಟು ದೇವಾಲಯಗಳು ಮಸೀದಿಗಳಾಗಿವೆಯೋ..? ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫೇಸ್‌ಬುಕ್ ನಲ್ಲಿ ವ್ಯಾಪಕವಾಗಿ ಹಂಚಿಕೊಂಡಿರುವ ಪೋಸ್ಟ್‌ಗಳನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್:

ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ ಈ ಫೋಟೋವನ್ನು ಕನಿಷ್ಠ 2016 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.  ಹಳೆಯ ಪೋಸ್ಟ್‌ಗಳನ್ನು  ಇಲ್ಲಿ ಮತ್ತು ಇಲ್ಲಿ  ಕಾಣಬಹುದು. ಒಬ್ಬ ಬಳಕೆದಾರರು ಫೋಟೋ ಜೊತೆಗೆ “ರಾಯಚೂರ್ ಏಕ್ ಮಿನಾರ್ ಮಸೀದಿಯನ್ನು ಕೆಡವಲಾಗುತ್ತಿದೆ, 500 ವರ್ಷ ಪುರಾತನವಾದದ್ದು, ಹಿಂದೂ ಬ್ರಾಹ್ಮಣರು ಭವ್ಯವಾದ ಶಿಲ್ಪಗಳನ್ನು ಕೆತ್ತಿದ್ದಾರೆ ನೋಡಿ”  ಎಂದಿದ್ದಾರೆ.

ರಾಯಚೂರು ರಸ್ತೆ ಅಗಲೀಕರಣಕ್ಕಾಗಿ ಏಕ್ ಮಿನಾರ್ ಮಸೀದಿಯನ್ನು ತೆರವುಗೊಳಿಸುವ ಸುದ್ದಿ ಹಳೆಯದಾಗಿದ್ದರೂ ಕೆಲವು ಮತೀಯ ಶಕ್ತಿಗಳು ಕೋಮು ಸೌಹಾರ್ದತೆಯನ್ನು ಹಾಳು ಮಾಡುವಂತ ಪೋಸ್ಟ್‌ಗಳನ್ನು ಮತ್ತೆ ಮತ್ತೆ ಹಾಕುತ್ತಿದ್ದಾರೆ 2021 ರಲ್ಲಿ ಮಸೀದಿಯ ಕೆಳಗೆ ಶಿವನ ದೇವಾಲಯ ಇದೆ ಎಂದು ಪ್ರತಿಪಾದಿಸಿ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು ಆಗ ensuddi.com ಎಕ್ ಮಿನಾರ್ ಮಸೀದಿಗೆ ಸಂಬಂಧಿಸಿದಂತೆ ಫ್ಯಾಕ್ಟ್‌ಚೆಕ್ ಲೇಖನ ಪ್ರಕಟಸಿ ಪೊಸ್ಟ್‌ನಲ್ಲಿ ಪ್ರತಿಪಾದಿಸಿದ ಸುದ್ದಿ ಸುಳ್ಳು ಎಂದು ಪ್ರಸಾರ ಮಾಡಲಾಯಿತು. ಅದನ್ನು ಇಲ್ಲಿ ನೋಡಬಹುದು.

ಈ ಟ್ವೀಟ್‌ಗಳಲ್ಲಿ ಹಂಚಿಕೊಂಡಿರುವ ಮಸೀದಿಯ ಫೋಟೋವನ್ನು ‘ಟ್ರಿಪ್ ಅಡ್ವೈಸರ್’ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಟ್ರಿಪ್ ಅಡ್ವೈಸರ್ ವೆಬ್‌ಸೈಟ್ ಪ್ರಕಾರ ಈ ಫೋಟೋ ರಾಯಚೂರಿನ ಏಕ್ ಮಿನಾರ್ ಮಸೀದಿಯಾಗಿದೆ.

ಈ ವಿವರಗಳನ್ನು ಆಧರಿಸಿ, ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋದ ಕುರಿತು ಹೆಚ್ಚಿನ ಮಾಹಿತಿಯ ಹುಡುಕಾಡಿದಾಗ, ಈ ಘಟನೆಗೆ ಸಂಬಂಧಿಸಿದಂತೆ ‘ಡೆಕ್ಕನ್ ಕ್ರಾನಿಕಲ್’ ಸುದ್ದಿ ಸಂಸ್ಥೆ 15 ಏಪ್ರಿಲ್ 2016 ರಂದು ಲೇಖನವನ್ನು ಪ್ರಕಟಿಸಿರುವುದು ಕಂಡುಬಂದಿದೆ. ರಾಯಚೂರಿನ ಏಕ್ ಮಿನಾರ್ ಮಸೀದಿಯ ಭಾಗವನ್ನು 2016 ರಲ್ಲಿ ರಸ್ತೆ ವಿಸ್ತರಣೆಯ ಭಾಗವಾಗಿ ಕೆಡವಲಾಯಿತು ಎಂದು ಈ ಲೇಖನ ವರದಿ ಮಾಡಿದೆ. ಏಕ್ ಮಿನಾರ್ ಮಸೀದಿ ಧ್ವಂಸದ ನಂತರ ಹೊರಹೊಮ್ಮಿದ ಕಂಬಗಳು ಅಲ್ಲಿನ ಹಿಂದೂ ಸಮುದಾಯಗಳ ಪ್ರಕಾರ ಹಿಂದೂ ದೇವಾಲಯಗಳಲ್ಲಿ ನಿರ್ಮಿಸಲಾದ ಭವ್ಯವಾದ ಶಿಲ್ಪಕಲಾ ಸ್ತಂಭಗಳನ್ನು ಹೋಲುತ್ತವೆ ಎಂದು ಹೇಳಲಾಗುತ್ತದೆ. ಏಕ್ ಮಿನಾರ್ ಮಸೀದಿಯ ಇತಿಹಾಸವನ್ನು ತಕ್ಷಣವೇ ತನಿಖೆ ಮಾಡಿ ಮತ್ತು ಈ ಹಿಂದೆ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆಯೇ ಎಂದು ಸ್ಪಷ್ಟಪಡಿಸಬೇಕೆಂದು ರಾಯಚೂರು ಹಿಂದೂ ಸಮುದಾಯವು ಸರ್ಕಾರವನ್ನು ಒತ್ತಾಯಿಸಿದೆ ಎಂದು ಲೇಖನ ವರದಿ ಮಾಡಿದೆ.

ಆದರೆ, ಈ ಲೇಖನದಲ್ಲಿ ಎಲ್ಲಿಯೂ ಏಕ್ ಮಿನಾರ್ ಮಸೀದಿಯ ಕಂಬಗಳು ಹಿಂದೂ ದೇವಾಲಯಕ್ಕೆ ಸೇರಿವೆ ಎಂದು ದೃಢಪಡಿಸಲಾಗಿಲ್ಲ. ‘ದಿ ಹಿಂದೂ’ ಸುದ್ದಿ ಸಂಸ್ಥೆಯು ರಾಯಚೂರು ರಸ್ತೆ ಅಗಲೀಕರಣಕ್ಕಾಗಿ ಮಸೀದಿ ಕೆಡವಿದ ಕುರಿತು 2016ರ ಏಪ್ರಿಲ್ 10ರಂದು ಲೇಖನ ಪ್ರಕಟಿಸಿತ್ತು.

ಏಕ್ ಮಿನಾರ್ ಮಸೀದಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಸ್ಪಷ್ಟನೆಗಾಗಿ ‘ಆಲ್ಟ್ ನ್ಯೂಸ್’ ಸತ್ಯ ತಪಾಸಣೆ ಸಂಸ್ಥೆ ಅಂದಿನ ರಾಯಚೂರು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿತ್ತು. ಆಲ್ಟ್ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದ ರಾಯಚೂರು ಜಿಲ್ಲಾಧಿಕಾರಿಗಳು, ” ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸಂಪೂರ್ಣ ಸುಳ್ಳು. ರಾಯಚೂರು ರಸ್ತೆ ವಿಸ್ತರಣೆಯ ಭಾಗವಾಗಿ ಪ್ರಾಚೀನ ಏಕ್ ಮಿನಾರ್ ಮಸೀದಿ ಹಾಗೂ ಕೆಲವು ಧಾರ್ಮಿಕ ಕಟ್ಟಡಗಳನ್ನು ಕೆಡವಲಾಯಿತು. ಪ್ರಾಚೀನ ಸ್ಮಾರಕಗಳಲ್ಲಿ ಹಲವು ವಿಧಗಳಿವೆ. ಸರಳವಾಗಿ ಹೇಳುವುದಾದರೆ, ಕಂಬವನ್ನು ಹಿಂದೂ ದೇವಾಲಯ ಎಂದು ಹೇಳಲಾಗುವುದಿಲ್ಲ. ಕೆಲವು ಗುಂಪುಗಳು ಈ ಆರೋಪ ಮಾಡಲು ಯತ್ನಿಸಿದ್ದವು. ಆದರೆ ಅವರ ಆರೋಪಗಳ ಬಗ್ಗೆ ಮತ್ತೆ ಅವರನ್ನೇ ಕೇಳಿದಾಗ ಅವರು ಆರೋಪಗಳನ್ನು ಮುಂದುವರಿಸಲಿಲ್ಲ” ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಇದೊಂದು ಹಳೆಯ ಸುದ್ದಿಯಾಗಿದ್ದು  2016 ರಲ್ಲಿ ರಾಯಚೂರಿನ ಏಕ್ ಮಿನಾರ್ ಮಸೀದಿಯನ್ನು ಕೆಡವಿದಾಗ ಹುಟ್ಟಿಕೊಂಡ ವಿವಾದ. ಆಗ ಕೆಲವರು ಮಸೀದಿಯಲ್ಲಿ ಶಿವನ ದೇವಾಲಯ ಇದೆ ಎಂದು ಸುಳ್ಳು ಪೋಸ್ಟ್ ಹಂಚಿಕೊಂಡಿದ್ದರು ಈಗ ವೀರಭದ್ರೇಶ್ವರ ದೇವಾಲಯ ಕಂಡುಬಂದಿದೆ ಎಂದು ಹೇಳುತ್ತ ಪೋಸ್ಟ್‌ ಮಾಡಿದ್ದಾರೆ ಆದರೆ ಇದೆಲ್ಲವೂ ಸಂಪೂರ್ಣವಾಗಿ ಆಧಾರ ರಹಿತವಾಗಿದೆ.

ಹಾಗಾಗಿ ರಾಯಚೂರಿನಲ್ಲಿ ರಸ್ತೆ ಅಗಲೀಕರಣದ ಭಾಗವಾಗಿ ಕೆಡವಲ್ಪಟ್ಟ ಮಸೀದಿಯ ಕೆಳಗೆ ಹಿಂದೂ ದೇಗುಲ ಸಿಕ್ಕಿಲ್ಲ. ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಕೋಮು ದ್ವೇಷದ ಹಿನ್ನಲೆಯಲ್ಲಿ ಇದೇ ಪೋಟೋದೊಂದಿಗೆ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮುನ್ನ ಪರಿಶೀಲಿಸಿ ಜಾಗೃತರಾಗಿರಿ ಎಂಬುದು ಈ ಲೇಖನದ ಆಶಯ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಭಗವಾನ್ ಶ್ರೀಧರ ಸ್ವಾಮಿಗಳಿಂದ ಆಶೀರ್ವಾದ ಪಡೆಯುತ್ತಿರುವ ವ್ಯಕ್ತಿ ಅಂಬೇಡ್ಕರ್ ಅಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights