ಫ್ಯಾಕ್ಟ್ಚೆಕ್: ದೆಹಲಿ ಗಲಭೆಯೆಂದು ಹಳೆಯ ಫೋಟೋವನ್ನು ಹಂಚಿಕೊಂಡ ಬಿಜೆಪಿ ಮುಖಂಡರು
ಉದ್ರಿಕ್ತರ ಗುಂಪೊಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಸಂದರ್ಭದಲ್ಲಿ ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರು ಓಡಿ ಹೋಗುವಾಗ ನೆಲಕ್ಕೆ ಬಿದ್ದಿರುವ ದೃಶ್ಯವನ್ನು ಸಾಮಾಜಿಕ ಮಾಧ್ಯಗಳಲ್ಲಿ ಹಂಚಿಕೊಳ್ಳುತ್ತ ಇದು ದೆಹಲಿಯ ಜಹಾಂಗೀರ್ಪುರಿಯಲ್ಲಿ ಇತ್ತೀಚೆಗೆ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದೆ ಎಂದು ಕೆಲವು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಕನ್ನಡದ ಪೋಸ್ಟ್ ಕಾರ್ಡ್ ಕನ್ನಡ ತನ್ನ ಸೋಶಿಯಲ್ ಮೀಡಿಯಾದ ಫೇಸ್ಬುಕ್ ಪೇಜ್ನಲ್ಲಿ ಇದೇ ಫೋಟೋವನ್ನ “ಭಾರತದಲ್ಲಿ ಇರಲು ಭಯವಾಗುತ್ತದೆ, ನಮಗೆ ರಕ್ಷಣೆ ಇಲ್ಲ ಎನ್ನುವವರು ಇವರೇ ತಾನೆ? ಎಂಬ ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಶೇರ್ ಮಾಡಿದೆ.
“ಜಿಹಾದಿ ಅಬ್ದುಲ್ ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ಮಾಡುವ ಮೂಲಕ ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ನೀತು ಸಿಂಗ್ ಟ್ವೀಟ್ ಮಾಡಿದ್ದಾರೆ.
“ಇದು ದೆಹಲಿ ಪೊಲೀಸರ ಸ್ಥಿತಿ ಹೀಗಾದರೆ, ಇನ್ನು ಸಾಮಾನ್ಯ ಹಿಂದೂಗಳ ಸ್ಥಿತಿ ಏನಾಗಬಹುದು ಎಂದು ಯೋಚಿಸಿ” ಎಂಬ ಶೀರ್ಷಿಕೆಯೊಂದಿಗೆ ಉತ್ತರ ಪ್ರದೇಶದ ಬಿಜೆಪಿ ಶಾಸಕ ಪ್ರೇಮ್ ನಾರಾಯಣ್ ಪಾಂಡೆ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ಈ ಎಲ್ಲಾ ಪೋಸ್ಟ್ಗಳಲ್ಲಿಯೂ ಹಂಚಿಕೊಂಡಿರುವ ಫೋಟೋಗಳು ದೆಹಲಿಯ ಜಹಾಂಗೀರ್ಪುರಿಯಲ್ಲಿ ಹನುಮ ಜಯಂತಿಯಂದು ಶೋಭಾಯಾತ್ರೆ ನಡೆಯುವ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಫೋಟೋ ದೆಹಲಿಯಲ್ಲಿ ನಡೆದ ಗಲಭೆಯದ್ದಾ? ಇದರ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಪೋಸ್ಟ್ನಲ್ಲಿ ಪ್ರತಿಪಾದಿಸಲಾದ ಪೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಟೋ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋದಿಸಿ ಗುಜರಾತ್ನಲ್ಲಿ ನಡೆಸಿದ ಪ್ರತಿಭಟನೆ ವೇಳೆ ಸೆರೆಹಿಡಿದಿರುವ ಫೋಟೋ ಎಂಬ ಮಾಹಿತಿ ಲಭ್ಯವಾಗಿದೆ. ಡಿಸೆಂಬರ್ 20, 2019 ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ಲೇಖನದಲ್ಲಿ ವಿವರಗಳನ್ನು ಇಲ್ಲಿ ನೋಡಬಹುದು.
ಫೋಟೋ 2019ರಲ್ಲಿ ಸಿಎಎ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಸೆರೆಹಿಡಿದಿರುವುದು
ಡಿಸೆಂಬರ್ 20, 2019 ರಂದು ಪ್ರಕಟವಾದ ನವಭಾರತ್ ಟೈಮ್ಸ್ ಲೇಖನವು ಆ ಸಮಯದಲ್ಲಿ ಗುಜರಾತ್ನಲ್ಲಿ ನಡೆದ ಪ್ರತಿಭಟನೆಯ ಬಗ್ಗೆ ವರದಿ ಮಾಡಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಜನರ ಗುಂಪು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ತೋರಿಸುವ ವೀಡಿಯೊ ಟ್ವೀಟ್ ಅನ್ನು ವರದಿಯು ಹೊಂದಿದೆ.
गुजरात के अहमदाबाद में खौफनाक मंजर, पुलिसकर्मियों पर प्रदर्शनकारियों ने बरसाए पत्थर, देखिए विडियो https://t.co/Wb85shDI0M #NBTonCAA #CAA2019 #CitizenshipAmendmentAct2019 pic.twitter.com/RLTU2YoRQq
— NBT Hindi News (@NavbharatTimes) December 19, 2019
2019ರಲ್ಲಿ ರಾಷ್ಟ್ರದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋದಿಸಿ ಪ್ರತಿಭಟನೆಗಳು ನಡೆಯುತ್ತಿದ್ದವು, ಇದೇ ವೇಳೆ ಗುಜರಾತ್ನಲ್ಲು ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪೊಲೀಸರೊಂದಿಗೆ ಗುಂಪು ಘರ್ಷಣೆಗೆ ಕಾರಣವಾಯಿತು. ಕಲ್ಲು ತೂರಾಟ ಮತ್ತು ಹಲ್ಲೆಯಿಂದಾಗಿ ಎಸಿಪಿ, ಪಿಐ, ಡಿಸಿಪಿ ಹಾಗೂ, 12 ಪೊಲೀಸರು ಸೇರಿದಂತೆ ಕನಿಷ್ಠ 30 ಮಂದಿ ಗಾಯಗೊಂಡಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ದೆಹಲಿಯಲ್ಲಿ ನಡೆದ ಗಲಭೆಗೂ ಫೋಟೋಗೂ ಸಂಬಂಧವಿಲ್ಲ.
ಮಾಧ್ಯಮ ವರದಿಗಳ ಪ್ರಕಾರ, ಏಪ್ರಿಲ್ 16 ರಂದು ವಾಯುವ್ಯ ದೆಹಲಿಯ ಜಹಾಂಗೀರ್ ಪುರಿ ಪ್ರದೇಶದಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದೆ. ಈ ಪ್ರದೇಶದಲ್ಲಿ ಕಲ್ಲು ತೂರಾಟ ನಡೆಸಲಾಗಿದ್ದು, ಹಿಂಸಾಚಾರದಲ್ಲಿ ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ 2019ರಲ್ಲಿ ಸಿಎಎ ವಿರುದ್ದ ಗುಜರಾತಿನಲ್ಲಿ ನಡೆದ ಗಲಭೆಯ ಫೋಟೋವನ್ನು ಇತ್ತೀಚಿಗೆ ಹನುಮ ಜಯಂತಿ ವೇಳೆ ದೆಹಲಿಯಲ್ಲಿ ನಡೆದ ಗುಂಪು ಘರ್ಷಣೆಯದ್ದು ಎಂದು ಹಳೆಯ ಫೋಟೋವನ್ನು ಕೋಮು ದ್ವೇಷ ಹರಡುವ ಉದ್ದೇಶದಿಂದ ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಆನೆಗೆ ಮಾಂಸ ನೀಡಲು ಹೋದಾಗ ನಡೆದ ಘಟನೆ! ವಾಸ್ತವೇನು?