ಫ್ಯಾಕ್ಟ್ಚೆಕ್: ಉ.ಕ ಜಿಲ್ಲೆ ಮುಸ್ಲಿಂ ಯುವಕನಿಗೆ ಕತ್ತಿಯಿಂದ ಇರಿತ ಘಟನೆಗೆ ಕೋಮು ದ್ವೇಷದ ಹಿನ್ನಲೆ ಇಲ್ಲವೆಂದ ಪೊಲೀಸರು
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತೇರ್ಗಾಂವ್ ಗ್ರಾಮದಲ್ಲಿ ಮುಸ್ಲಿಂ ಯುವಕನೊಬ್ಬನ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಳಾಗಿದ್ದು. 18 ವರ್ಷದ ಅಮಾನುಲ್ಲಾ ಇರ್ಫಾನ್ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ವೀಕ್ಷಿಸಿ ಹಿಂತಿರುಗುವಾಗ ಹೊನಪ್ಪ ಬೋವಿ ಎಂಬ 30 ವರ್ಷದ ವ್ಯಕ್ತಿ ಚಾಕುವಿನಿಂದ ಕತ್ತಿನ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತೇರ್ಗಾಂವ್ ಗ್ರಾಮದಲ್ಲಿ ಕಳೆದ ಬುಧವಾರ ಸಂಜೆ ಅಮಾನುಲ್ಲಾ ಇರ್ಫಾನ್ ಎಂಬ 18ವರ್ಷದ ಯುವಕನಿಗೆ ಹೊನ್ನಪ್ಪ ಬೋವಿ ಎಂಬ ವ್ಯಕ್ತಿಯು ತನ್ನ ಜೇಬಿನಲ್ಲಿದ್ದ ಚಿಕ್ಕ ಕತ್ತಿಯಿಂದ ಇರ್ಫಾನ್ ನ ಕುತ್ತಿಗೆಯನ್ನು ಇರಿದಿದ್ದಾನೆ. ಈ ಘಟನೆಯನ್ನು ” ಕೆಲವರು ದಿ ಕಾಶ್ಮೀರ್ ಫೈಲ್ಸ್” ಚಿತ್ರ ವೀಕ್ಷಣೆ ಮುಗಿಸಿ ಮನೆಗೆ ಹಿಂತಿರುಗುವ ಸಂದರ್ಭದಲ್ಲಿ ಕೃತ್ಯ ನಡೆಸಲಾಗಿದೆ ಎಂಬ ಹೇಳಿಕೆಯೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನೆ ನೆಪವಾಗಿಟ್ಟುಕೊಂಡು ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರಕ್ಕೆ ಸಂಬಂಧ ಕಲ್ಪಿಸಿ ” ಹಿಂದೂಗಳಿಂದ ಮುಸ್ಲಿಂ ಯುವಕನ ಹತ್ಯೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿತ್ತು.
ಹಾಗಿದ್ದರೆ ಹಲ್ಲೆಗೆ ಕಾರಣ ಏನು?
ಅಮಾನುಲ್ಲಾ ಇರ್ಫಾನ್ ಮೇಲೆ ನಡೆದಿರುವ ಹಲ್ಲೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಹಲ್ಲೆಗೆ ಕಾರಣ ಏನೆಂಬುದನ್ನು ಹಂಚಿಕೊಂಡಿದ್ದಾರೆ. ಆರೋಪಿ ಹೊನಪ್ಪ ಮತ್ತು ಸಂತ್ರಸ್ತ ಇರ್ಫಾನ್ ನೆರೆಹೊರೆಯವರು ಎಂದು ಉಲ್ಲೇಖಿಸಿದ್ದಾರೆ. ಹಲ್ಲೆ ನಡೆಸಿರುವ ಹೊನ್ನಪ್ಪ ಬೋವಿಯ ತಾಯಿಯನ್ನು ಇರ್ಫಾನ್ ನಿರಂತರವಾಗಿ ನಿಂದಿಸುತ್ತಿದ್ದ, ಇದೆ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿದ್ದು, ಹೊನಪ್ಪ ಇರ್ಫಾನ್ನ ಮನೆಯ ಮುಂದೆಯೇ ಜೇಬಿನಲ್ಲಿದ್ದ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಹಲ್ಲೆಗೆ ಕಾರಣ ಏನೆಂದು ತಿಳಿಸಿದ್ದಾರೆ.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಮತ್ತಷ್ಟು ವಿಚಾರಣೆ ನಡೆಸಿದಾಗ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪ್ರಕರಣದ ಹೆಚ್ಚಿನ ತನಿಖೆಗಾಗಿ ಹೊನ್ನಪ್ಪ ಬೋವಿಯನ್ನು ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಈ ಘಟನೆಗೂ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರಕ್ಕೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ. ಹಾಗೆಯೇ ಹಲ್ಲೆಗೆ ಯಾವುದೇ ಕೋಮು ಸಂಘರ್ಷದ ಉದ್ದೇಶವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಹಲ್ಲೆಗೊಳಗಾದ ಇರ್ಫಾನ್ ಈಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೂಕ್ತ ಪರಿಶೀಲನೆ ನಡೆಸದೆ ಸಾಮಾಜಿಕ ಮಾಧ್ಯಮಗಳಲ್ಲಿ ಘಟನೆಯನ್ನು ತಿರುಚಿ ಸುಳ್ಳು ಪೋಸ್ಟ್ ಮಾಡುವುದಾಗಲಿ ,ಸುದ್ದಿ ಪೋರ್ಟಲ್ಗಳಲ್ಲಿ ಕೋಮು ದ್ವೇಷ ಹರಡು ಹೇಳಿಕೆಯನ್ನು ನೀಡುವುದಾಗಲಿ ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ದೆಹಲಿ ಗಲಭೆಯೆಂದು ಹಳೆಯ ಫೋಟೋವನ್ನು ಹಂಚಿಕೊಂಡ ಬಿಜೆಪಿ ಮುಖಂಡರು