ಫ್ಯಾಕ್ಟ್ಚೆಕ್: ಕರ್ನಾಟಕ ಎಂದು ಹೆಸರಿಟ್ಟಿದ್ದು, DMK ಸ್ಥಾಪಕ ಅಣ್ಣಾದೊರೈ ಎಂಬುದು ನಿಜವೇ ?
ಮೈಸೂರು ರಾಜ್ಯ ಎಂಬುದನ್ನು ಕರ್ನಾಟಕ ಎಂದು ನಾಮಕರಣ ಮಾಡಲು ಅಣ್ಣಾ ದೊರೈ ಕಾರಣವೇ? 1956ರಲ್ಲಿ ಬೆಂಗಳೂರಿನಲ್ಲಿ ನಡೆದ ಡಿಎಂಕೆ ಸಮಾವೇಶದಲ್ಲಿ ಅಣ್ಣಾದೊರೈರವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಸುವಂತೆ ಕೇಳಿಕೊಂಡರು. ಅದರಂತೆ ಸಾಮಾಜಿಕ ನ್ಯಾಯದ ಹಾದಿಯಲ್ಲಿ ಸಾಗಿದ ದೇವರಾಜ್ ಅರಸ್ ಅವರು ಅಧಿಕಾರಕ್ಕೆ ಬಂದ ನಂತರ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಿದರು ಎಂದು ಹೇಳುವ ಪೋಸ್ಟ್ರ್ ಒಂದನ್ನು WeDravidians ಎನ್ನುವ ಟ್ವಿಟರ್ ಹ್ಯಾಂಡಲ್ನಿಂದ ಪೋಸ್ಟ್ ಮಾಡಲಾಗಿದೆ. ಅಂದರೆ ಮೈಸೂರು ರಾಜ್ಯ ಎಂದು ಇದ್ದ ಹೆಸರನ್ನು ಕರ್ನಾಟಕ ಎಂದು ಹೆಸರು ಬರಲು ಕಾರಣವಾಗಿದ್ದು DMK ಸಂಸ್ಥಾಪಕ ಅಣ್ಣಾದೊರೈ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
Q:Was Anna the reason behind naming of Karnataka?
A: Yes! In 1956, at the DMK conference in Bangalore, Anna asked to name Mysore state as Karnataka.
Devaraj Urs, who followed the path of social justice, changed the name of the state to Karnataka after assuming power. pic.twitter.com/sChbrJQirq
— We Dravidians (@WeDravidians) August 6, 2022
ಫ್ಯಾಕ್ಟ್ಚೆಕ್ :
1956ನೇ ನವೆಂಬರ್ 1 ಮೈಸೂರು ರಾಜ್ಯ ನಿರ್ಮಾಣವಾಯಿತು. ರಾಜ್ಯಗಳ ಪುನರ್ ವಿಂಗಡನೆ ಕಾಯಿದೆಯ ಮೇರೆಗೆ ಜನ್ಮ ತಳೆದ ನವ ರಾಜ್ಯವು ಕೇವಲ ಕನ್ನಡ ಭಾಷಾ ಪ್ರದೇಶಗಳ ಒಂದುಗೂಡಿಕೆಯಾಗಿರಲಿಲ್ಲ. ಸುಮಾರು 2 ಸಾವಿರ ವರ್ಷಗಳ ಉಜ್ವಲ ಇತಿಹಾಸ ಪರಂಪರೆ ಹಾಗೂ ಸಂಸ್ಕೃತಿಯುಳ್ಳ ಜನತೆಯ ಹೃದಯವನ್ನು ಅದು ಒಂದುಗೂಡಿಸಿತು.
ಕನ್ನಡ ನಾಡು ಏಕೀಕೃತಗೊಂಡ ನಂತರ ಅದರ ಮೂಲ ಹೆಸರು ಮೈಸೂರು ರಾಜ್ಯವೆಂದೇ ಇತ್ತು. ಇಲ್ಲಿನ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಪರಂಪರೆಗಳ ವೈವಿಧ್ಯತೆಯನ್ನು ಗುರುತಿಸಿ ಬದಲಿ ಹೆಸರಯ ನಾಮಕರಣ ಮಾಡುವ ಬಗ್ಗೆ ಹಲವು ಗಂಭೀರ ಚರ್ಚೆಗಳಾಗಿರುವುದು ಕಂಡುಬರುತ್ತದೆ. ಶ್ರೀ ಎಸ್.ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮರು ಹೆಸರಿನ್ನಿಡುವ ಚರ್ಚೆ ಆರಂಭಗೊಂಡಿತ್ತು. ನಂತರ ಶ್ರೀ ವೀರೇಂದ್ರ ಪಾಟೀಲರು ಇದನ್ನು ಮುಂದುವರಿಸಿದರು. ಕೊನೆಯಲ್ಲಿ ಶ್ರೀ ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನವೆಂಬರ್ 1, 1973ರಂದು ಕರ್ನಾಟಕವೆಂಬ ಹೆಸರು ಅಸ್ತಿತ್ವಕ್ಕೆ ಬಂತು.
ಕರ್ನಾಟಕ ಏಕೀಕರಣ ಚಳವಳಿ ಮತ್ತು ಕರ್ನಾಟಕ ಹೆಸರಿನ ನಾಮಕರಣ ಚಳವಳಿ ಬಹಳ ದೀರ್ಘವಾದದ್ದು. WeDravidians ಎಂಬ ಟ್ವಿಟರ್ನಲ್ಲಿ ಹಂಚಿಕೊಂಡಿರುವಂತೆ DMK ಸಂಸ್ಥಾಪಕರಾದ ಅಣ್ಣಾದೊರೈರವರು ಮೈಸೂರನ್ನು ಕರ್ನಾಟಕ ಎಂದು ನಾಮಕರಣ ಮಾಡುವಂತೆ ಹೇಳಿದ್ದಾರೆಯೇ ಎಂದು ಹುಡುಕಿದಾಗ ಯಾವುದೇ ವಿಶ್ವಾಸಾರ್ಹ ಮಾಹಿತಿಗಳು ಸಿಕ್ಕಿಲ್ಲ. ಆದರೆ ಈ ಸಂದರ್ಭದಲ್ಲಿ ಕರ್ನಾಟಕ ಎಂದು ನಾಮಕರಣ ಮಾಡುವಾಗ ಯಾವುದಾದರೂ ಒಂದು ಹೆಸರು ಹೆಚ್ಚು ಚಾಲ್ತಿಗೆ ಬರುತ್ತದೆ ಎಂದರೆ ಅದು ಆಲೂರು ವೆಂಕಟರಾಯರು.
ಆಲೂರು ವೆಂಕಟರಾಯರು :
ಕರ್ನಾಟಕತ್ವವೆಂದರೆ ಕೇವಲ ದೇಶಾಭಿಮಾನವಲ್ಲ, ಭಾಷಾಭಿಮಾನವಲ್ಲ, ಇತಿಹಾಸಾಭಿಮಾನವಲ್ಲ ಅದರಲ್ಲಿ ಇವು ಮೂರೂ ಅಡಗಿದೆ. ರಾಷ್ಟ್ರೀಯತ್ವಕ್ಕೆ ವಿರುದ್ಧವಾದುದು ಕರ್ನಾಟಕತ್ವವಲ್ಲ.ಕರ್ನಾಟಕತ್ವಕ್ಕೆ ವಿರುದ್ಧವಾದುದು ನಿಜವಾದ ರಾಷ್ಟ್ರೀಯತ್ವದಲ್ಲ, ಕರ್ನಾಟಕದ ಬಗ್ಗೆ ಅಭಿಮಾನವನ್ನು ತಾಳುವುದೇ ಕರ್ನಾಟಕತ್ವ. ಇಂತಹ ಉಜ್ವಲ ಅಭಿಮಾನವನ್ನು ವ್ಯಕ್ತಪಡಿಸಿದವರಲ್ಲಿ ಆಲೂರು ವೆಂಕಟರಾಯರು ಅಗ್ರಗಣ್ಯರು ಅವರು ಕರ್ನಾಟಕ ಎಂಬ ಹೆಸರನ್ನಿಡಬೇಕೆಂದು ಒತ್ತಾಯಿಸಿದವರಲ್ಲಿ ಪ್ರಮುಖರು. 1973 ನವೆಂಬರ್ 1ರಂದು ರಾಜ್ಯೋದಯದ ದಿನ. ಮೈಸೂರು ಎಂಬ ಹೆಸರಿನ ಬದಲಿಗೆ ಕರ್ನಾಟಕವೆಂದು ಅಧಿಕೃತವಾಗಿ ನಾಮಕರಣ ಮಾಡಿದ ದಿನ.
ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಲಾಯಿತು. ಹೀಗಾಗಿ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ. ವಿಶಾಲ ಮೈಸೂರು ರಾಜ್ಯಕ್ಕೆ ನವೆಂಬರ್ 1, 1973 ರಂದು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು.
ಒಟ್ಟಾರೆಯಾಗಿ ಹೇಳುವುದಾದರೆ ಮೈಸೂರು ಎಂದಿದ್ದ ರಾಜ್ಯವನ್ನು ಕರ್ನಾಟಕ ಎಂದು ನಾಮಕರಣವಾಗಲು DMK ಸಂಸ್ಥಾಪಕ ಅಣ್ಣಾದೊರೈ ಕಾರಣ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವುದಕ್ಕೆ ಯಾವುದೇ ಆಧಾರಗಳು ಸಿಕ್ಕಿಲ್ಲ. ವಾಸ್ತವವಾಗಿ ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಲಾಯಿತು. ಶ್ರೀ ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನವೆಂಬರ್ 1, 1973ರಂದು ಕರ್ನಾಟಕವೆಂಬ ಹೆಸರು ಅಸ್ತಿತ್ವಕ್ಕೆ ಬಂತು. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಚಿನ್ನದ ಹಾವು ಇರುವುದು ನಿಜವೇ?