ಫ್ಯಾಕ್ಟ್ಚೆಕ್: ತಮಿಳುನಾಡಿನ DMK ಸರ್ಕಾರ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಲು ಮುಂದಾಗಿರುವುದು ನಿಜವೇ?
ತಮಿಳುನಾಡಿನ ಚೆನ್ನೈ ಬಳಿಯ ತಾಂಬರಂನಲ್ಲಿ ರಾಮಮಂದಿರವನ್ನು ಧ್ವಂಸ ಮಾಡುತ್ತಿರುವ ಇತ್ತೀಚಿನ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರವು ತಮಿಳುನಾಡಿನಲ್ಲಿ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿಕೊಂಡು ಧ್ವಂಸಕ್ಕೆ ಇಳಿದಿದೆ ಎಂದು ಆರೋಪಿಸಿದೆ. ಹಾಗಾಗಿ ಈ ಸುದ್ದಿ ನಿಜವೇ ? ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ವೀಡಿಯೊದಲ್ಲಿನ ಸ್ಕ್ರೀನ್ಶಾಟ್ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್ ನಲ್ಲಿ ಸರ್ಚ್ ಮಾಡಿದಾಗ, ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವೀಡಿಯೊವನ್ನು 11 ಜನವರಿ 2022 ರಂದು ‘ಪಾಲಿಮರ್ ನ್ಯೂಸ್’ ಯೂಟ್ಯೂಬ್ ಚಾನೆಲ್ ಅಪ್ಲೋಡ್ ಮಾಡಿರುವುದು ಕಂಡುಬಂದಿದೆ. ಆಂಜನೇಯ ದೇವಸ್ಥಾನವನ್ನು ಕೆಡವಿರುವುದನ್ನು ತೋರಿಸುವ ದೃಶ್ಯಗಳು ಎಂದು ಪೊಲಿಮರ್ ನ್ಯೂಸ್ ವರದಿ ಮಾಡಿದೆ. ನದಿಪಾತ್ರದ ಜಾಗವನ್ನು ಅತಿಕ್ರಮಿಸಿದ ಕಾರಣಕ್ಕೆ ದೇವಾಲಯವನ್ನು ತೆರವು ಮಾಡಲಾಗಿದೆ. ಅದೇ ರೀತಿಯ ಆರೋಪದ ಮೇಲೆ ಚರ್ಚ್ವೊಂದಕ್ಕೆ ಸೇರಿದ ಗೋಡೆಯನ್ನೂ ಕೆಡವಲಾಗಿದೆ ಎಂದು ಸುದ್ದಿ ವಾಹಿನಿ ವರದಿ ಮಾಡಿದೆ.
ಹೆಚ್ಚಿನ ವಿವರಗಳಿಗಾಗಿ ಕೀವರ್ಡ್ಗಳನ್ನು ಬಳಸಿಕೊಂಡು ಸರ್ಚ್ ಮಾಡಿದಾಗ, 11 ಜನವರಿ 2022 ರಂದು ‘DT ನೆಕ್ಸ್ಟ್’ ಸುದ್ದಿ ವೆಬ್ಸೈಟ್ ಪ್ರಕಟಿಸಿದ ಲೇಖನದಲ್ಲಿ ವಿವರಗಳು ಕಂಡುಬಂದಿದ್ದು. ಲೇಖನದ ಪ್ರಕಾರ, 10 ಜನವರಿ 2022 ರಂದು, ಪೊಲೀಸ್ ಪಡೆಗಳ ಜೊತೆಗೆ ಕಂದಾಯ ಅಧಿಕಾರಿಗಳು ನೇತೃತ್ವ ವಹಿಸಿದ್ದರು. ತಮಿಳುನಾಡಿನ ಚೆನ್ನೈನ ತಾಂಬರಂ ಪ್ರದೇಶದ ಬಳಿಯ ವರದರಾಜಪುರಂನಲ್ಲಿರುವ ಅಡ್ಯಾರ್ ನದಿಪಾತ್ರವನ್ನು ಅತಿಕ್ರಮಣ ಮಾಡಿದ ಆರೋಪದ ಮೇಲೆ ತಾಂಬರಂ ಸಹಾಯಕ ಆಯುಕ್ತರು ಆಂಜನೇಯರ ದೇವಸ್ಥಾನವನ್ನು ಕೆಡವಿದರು. ಅದೇ ರೀತಿ ವರದಿ ಮಾಡುತ್ತಾ, ಹಲವಾರು ಇತರ ಸುದ್ದಿ ವೆಬ್ಸೈಟ್ಗಳು ಸಹ ಜನವರಿ 2022 ರಲ್ಲಿ ಲೇಖನಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಆಂಜನೇಯ ದೇವಸ್ಥಾನ ಧ್ವಂಸ ವಿವಾದದ ಕುರಿತು ಪ್ರತಿಕ್ರಿಯಿಸಿದ ತಾಂಬರಂ ಪೊಲೀಸ್ ಕಮಿಷನರ್ 2022 ರ ಜನವರಿಯಲ್ಲಿ ಅಡ್ಯಾರ್ ನದಿಪಾತ್ರವನ್ನು ಅತಿಕ್ರಮಿಸಿ ಅಕ್ರಮವಾಗಿ ನಿರ್ಮಿಸಲಾದ ಎಲ್ಲಾ ಧಾರ್ಮಿಕ ಮತ್ತು ವಾಣಿಜ್ಯ ಕಟ್ಟಡಗಳನ್ನು 2015 ರ ಮದ್ರಾಸ್ ಹೈಕೋರ್ಟ್ ನಿರ್ದೇಶನದ ಪ್ರಕಾರ ನೆಲಸಮಗೊಳಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದರು. ಈ ಅತಿಕ್ರಮಣ ಕಾರ್ಯಾಚರಣೆಯಲ್ಲಿ ಆಂಜನೇಯ ದೇವಸ್ಥಾನದ ಜೊತೆಗೆ ಚರ್ಚ್ ಅನ್ನು ಸಹ ಕೆಡವಲಾಯಿತು ಎಂದು ತಾಂಬರಂ ಆಯುಕ್ತರು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ತಮಿಳುನಾಡಿನ ಅಡ್ಯಾರ್ ನದಿಪಾತ್ರದ ಜಾಗವನ್ನು ಆಕ್ರಮಿಸಿಕೊಂಡ ದೇವಾಲಯದ ತೆರೆವು ಕಾರ್ಯಾಚರಣೆಯನ್ನು ಮಾಡುತ್ತಿರುವ ಹಳೆಯ ವೀಡಿಯೊವನ್ನು, DMK ಸರ್ಕಾರ ಹಿಂದೂ ದೇವಾಲಯಗಳನ್ನು ದುರುದ್ದೇಶದಿಂದ ಧ್ವಂಸಗೊಳಿಸುತ್ತಿದೆ ಎಂದು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಜಾಗವನ್ನು ಅತಿಕ್ರಮಿಸಿದ ಇತರೆ ಧಾರ್ಮಿಕ ಕೇಂದ್ರಗಳ ಕಟ್ಟಡಗಳನ್ನು ತೆರವು ಮಾಡಲಾಗಿತ್ತು. ಆದರೆ ಅದನ್ನು ಮರೆಮಾಚಿ ಸುಳ್ಳು ಪ್ರತಿಪಾದನೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್ : ನೋಟು ರದ್ದತಿಯಿಂದ ಜನ ನರಳುತ್ತಿದ್ದಾಗ ದೇಶದ ಜನರನ್ನ ವ್ಯಂಗ್ಯ ಮಾಡಿ ಮಾತನಾಡಿದ್ದರೆ ಮೋದಿ ?
ಮೊದಲು ಸುಳ್ಳು ಸುದ್ದಿ ಹಬ್ಬಿಸಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಸಮಾಜ ದ್ರೋಹಿಗಳು ಅವರು ಯಾವುದೇ ಪಕ್ಷದವರಾಗಿರಲಿ ಹಿಡಿದು ಸರಿಯಾಗಿ ಶಿಕ್ಷೆ ನೀಡಿ,ಅಗಲಾದರು ಇಂತಹ ಸುದ್ದಿಗಳಿಗೆ ತೆರೆ ಬೀಳಲಿದೆ.