ಫ್ಯಾಕ್ಟ್ಚೆಕ್: ರಟ್ಟಿನಲ್ಲಿ ಕಾರ್ಮಿಕರಿಗೆ ಊಟ- ಕೆಂಪೇಗೌಡ ಪ್ರತಿಮೆ ಅನಾವರಣದ ವೇಳೆ ಕಾರ್ಯಕ್ರಮವಲ್ಲ
ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ಮೂಲ ಕಾರಣರಾದ ನಾಡಪ್ರಭು ಕೆಂಪೇಗೌಡ ಅವರು ಸದಾ ಎಲ್ಲರಿಗೂ ಸ್ಪೂರ್ತಿಯಾಗಲು ಹಾಗೂ ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ ಕೆಂಪೇಗೌಡ ಅವರ 108 ಅಡಿ ಎತ್ತರದ ಭವ್ಯವಾದ ಕಂಚಿನ ಪ್ರತಿಮೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು. 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು 84 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. 98 ಟನ್ ಕಂಚು, 120 ಟನ್ ಉಕ್ಕು ಬಳಸಿ ಪ್ರತಿಮೆ ನಿರ್ಮಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಸೇರಿಸುವ ಉದ್ದೇಶದಿಂದ ಕೆಲವು ಕೂಲಿ ಕಾರ್ಮಿಕರನ್ನು ಹಣ ಕೊಟ್ಟು ಕರೆಕೊಂಡು ಬರಲಾಗಿತ್ತು ಎಂಬ ಆರೋಪವೂ ಇದೆ. ಆ ಕಾರ್ಮಿಕರಿಗೆ ಸರಿಯಾದ ಊಟದ ವ್ಯವಸ್ಥೆ ಮಾಡದ ಕಾರಣ, ಉಪಹಾರವನ್ನು ಪ್ಲೇಟ್ ಬದಲಿಗೆ ಕಾರ್ಟನ್ ಬಾಕ್ಸ್ನ ರಟ್ಟಿನ ಮೇಲೆ ಹಾಕಿಕೊಂಡು ತಿನ್ನುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
ಹಾಗಿದ್ದರೆ ಕೆಂಪೆಗೌಡರ 108 ಅಡಿ ಕಂಚಿನ ಪ್ರತಿಮೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ರೊಟ್ಟಿನ ಪಟ್ಟಿಯ ಮೇಲೆ ಆಹಾರ ಬಡಿಸಿ ನೀಡಲಾಗಿದೆ ಎಂದು ವಿಡಿಯೋ ಮೂಲಕ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ವೀಡಿಯೊದ ಸ್ಕ್ರೀನ್ಶಾಟ್ಗಳನ್ನು ಗೂಗಲ್ ರಿವರ್ಸ್ ಇಮೇಜ್ ನಲ್ಲಿ ಸರ್ಚ್ ಮಾಡಿದಾಗ, 27 ಅಕ್ಟೋಬರ್ 2022 ರಂದು ಇದೇ ರೀತಿಯ ವೀಡಿಯೊವನ್ನು ಪತ್ರಕರ್ತರೊಬ್ಬರು ಟ್ವೀಟ್ ಮಾಡಿರುವುದು ಲಭ್ಯವಾಗಿದೆ. ಮುನುಗೋಡು ಉಪ ಚುನಾವಣೆಯ ಸಂದರ್ಭದಲ್ಲಿ TRS ಪಕ್ಷ ಆಯೋಜಿಸಿದ್ದ ಗೊಲ್ಲ-ಕುರುಮ ಸಮುದಾಯದ ಸಭೆಯ ದೃಶ್ಯಗಳು ಎಂದು ವರದಿ ಮಾಡಿದೆ. BSP ತೆಲಂಗಾಣ ನಾಯಕ ಆರ್.ಎಸ್. ಪ್ರವೀಣ್ ಕುಮಾರ್ ಎಂಬುವವರು ಇದೇ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
Ahead of Munugode Bye-poll, these men & women were served meals on carton straps(attalu) at Golla-Kuruma caste meet organised by the https://t.co/x2UPW6v3Sw shows the practice of caste,similarly lower castes are treated without any dignity in rural dominant caste ppls functions. pic.twitter.com/LLMjAiUHhj
— CharanTeja (@CharanT16) October 27, 2022
ಈ ಮಾಹಿತಿಯನ್ನು ಬಳಸಿಕೊಂಡು ಹೆಚ್ಚಿನ ಮೂಲಗಳನ್ನು ಹುಡುಕಿದಾಗ, 27 ಅಕ್ಟೋಬರ್ 2022 ರಂದು ‘ಈನಾಡು’ ಪತ್ರಿಕೆಯು ಪ್ರಕಟಿಸಿದ ಸುದ್ದಿ ವರದಿಯಲ್ಲಿ ಈ ಘಟನೆಯ ವಿವರಗಳನ್ನು ಕಂಡುಬಂದಿದೆ. ಸುದ್ದಿ ವರದಿಯ ಪ್ರಕಾರ, ಗೊಲ್ಲ-ಕುರುಮ ಸಮುದಾಯಗಳ ಸಮ್ಮೇಳನದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ತೆಲಂಗಾಣದ ಹೈದರಾಬಾದ್ನಲ್ಲಿರುವ ಮನ್ನೆಗುಡಾದ ಫಂಕ್ಷನ್ ಹಾಲ್ನಲ್ಲಿ TRS ಪಕ್ಷ ಆಯೋಜಿಸಿತ್ತು. ಈ ಸಭೆಗೆ ಹೆಚ್ಚಿನ ಜನರು ಭಾಗವಹಿಸಿದ್ದರಿಂದ ಸಂಘಟಕರಿಗೆ ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ ಅಸ್ತವ್ಯಸ್ತಗೊಂಡಿತ್ತು. ಊಟದ ತಟ್ಟೆಗಳು ಕೊರತೆಯಾದ ಕಾರಣ ಜನರು ರೊಟ್ಟಿನ ಪಟ್ಟಿಯ ಮೇಲೆ ಆಹಾರವನ್ನು ಹಾಕಿಕೊಂಡು ತ್ತಿನ್ನುತ್ತಿರುವ ದೃಶ್ಯ ಎಂದು ‘ಈನಾಡು’ ಪತ್ರಿಕೆ ವರಿದಿ ಮಾಡಿದೆ.
ಹಲವು ಸುದ್ದಿ ವೆಬ್ಸೈಟ್ಗಳು ಅಕ್ಟೋಬರ್ 2022 ರಲ್ಲಿ ಈ ಮಾಹಿತಿಯನ್ನು ವರದಿ ಮಾಡುವ ಲೇಖನಗಳು ಮತ್ತು ವೀಡಿಯೊಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಾಗಿ ಇದು ತೆಲಂಗಾಣದ TRS ಪಕ್ಷ ಆಯೋಜಿಸಿದ್ದ ಗೊಲ್ಲ-ಕುರುಮ ಸಮಾವೇಶದ ಸಂದರ್ಭದಲ್ಲಿ ಊಟಕ್ಕೆ ನೂಕು ನುಗ್ಗಲು ನಡೆದು ತಟ್ಟೆಗಳು ಸಿಗದ ಕಾರಣಕ್ಕೆ ರೊಟ್ಟನ್ನು ಬಳಸಿ ಆಹಾರ ಸೇವಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ವೇಳೆ ನಡೆದ ಘಟನೆಯೇ ಬೇರೆ
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಮತ್ತು ಊಟ ಕೊಡಿಸಿಲ್ಲ ಎಂದು ಆರೋಪಿಸಿ ಕಾರ್ಮಿಕರು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮುಂದಾಗಿದ್ದರು.
40ಕ್ಕೂ ಹೆಚ್ಚು ಕಾರ್ಮಿಕರು ಶನಿವಾರ ಬೆಳಿಗ್ಗೆ ನಗರದಲ್ಲಿನ ಬಿಜೆಪಿ ಮುಖಂಡರೊಬ್ಬರ ಮನೆ ಬಾಗಿಲು ತಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಆ ಮುಖಂಡ “ಅದು ಸರ್ಕಾರಿ ಕಾರ್ಯಕ್ರಮ. ಅಲ್ಲಿ ಯಾರು ಯಾರಿಗೂ ಹಣ ಕೊಟ್ಟಿಲ್ಲ. ಹಣ ಕೇಳಿದರೆ ಪೊಲೀಸರಿಗೆ ಪ್ರಕರಣ ದಾಖಲಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ ಎಂದು ವರದಿ ಆಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಜನರು ರಟ್ಟಿನ ಪಟ್ಟಿಯನ್ನು ಬಳಸಿ ಆಹಾರ ತಿನ್ನುವ ಈ ವೀಡಿಯೊ ತೆಲಂಗಾಣದಲ್ಲಿ TRS ಪಕ್ಷ ಆಯೋಜಿಸಿದ ಸಮಾವೇಶದ ಸಂದರ್ಭದ್ದು, ಆದರೆ ಇದ್ದನ್ನು ಕೆಂಪೇಗೌಡ ಪ್ರತಿಮೆಯ ಅನಾವರಣ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದ ದೃಶ್ಯಾವಳಿಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: 2 ಸಾವಿರ ಮುಖಬೆಲೆಯ ಎರಡು ಕೋಟಿ ಖೋಟಾ ನೋಟುಗಳು ಚಲಾವಣೆಯಾಗುತ್ತಿವೆ ಎಂದು RBI ಹೇಳಿದೆಯೇ?