ಫ್ಯಾಕ್ಟ್ಚೆಕ್ : ಶಾಲಾ ಮಕ್ಕಳು ಪ್ರದರ್ಶಿಸಿದ ದೇಶಾಭಿಮಾನ ಮೆರೆವ ನಾಟಕದ ದೃಶ್ಯಗಳನ್ನು ತಪ್ಪಾಗಿ ಹಂಚಿಕೆ
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ದೆಹಲಿಯ ಶಾಲೆಯೊಂದರಲ್ಲಿ ನಡೆದ ದೃಶ್ಯಗಳು ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. ಪೋಸ್ಟ್ನ ಹೇಳಿಕೆಯ ಪ್ರಕಾರ,
“ಇದು ದೆಹಲಿ ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿದೆ ಭಾರತೀಯ ತಾಯಿಯ ತಲೆಯಿಂದ ಕಿರೀಟವನ್ನು ತೆಗೆದು ಅದರ ಮೇಲೆ ಬಿಳಿ ಬಟ್ಟೆಯನ್ನು ಹಾಕುವ ಮೂಲಕ ಕಲ್ಮಾವನ್ನು ಕಲಿಸಲಾಗುತ್ತದೆ. ಕೇಜ್ರಿವಾಲ್ ದೆಹಲಿ ಶಾಲೆಯ ಪ್ರಿನ್ಸಿಪಾಲ್ ಆಗಿರುವ ಪ್ರದೇಶವಿದು. ಅಮೆರಿಕದಲ್ಲಿ ಪಾಕ್ ಇಸ್ಲಾಮಿಕ್ ಉಗ್ರರ ಜತೆ ಸಂವಾದ ಒಪ್ಪಂದ ಮಾಡಿಕೊಂಡಿದ್ದಕ್ಕೆ ರಾಹುಲ್ ಚುನಾವಣೆ (2024) ಗೆಲ್ಲಲು ನಡೆಸಿದ ಸಭೆಯೇ ಸಾಕ್ಷಿ! ಸಾಧ್ಯವಾದಷ್ಟು ಹರಡಿ. ದೇಶಕ್ಕೆ ಹೇಳಲು ಬಯಸುವ. ಈ ನಾಟಕಕಾರರ ಮೇಲೆ ಬೆಳಕು ಚೆಲ್ಲದಿದ್ದರೆ ನೀವೂ ನಾವೂ ಇದೇ ರೀತಿ ಬದುಕಬೇಕಾಗುತ್ತದೆ” ಎಂಬ ಪ್ರತಿಪಾನೆಯೊಂದಿಗೆ ಫೇಸ್ಬುಕ್ ಮತ್ತು ವಾಟ್ಸಾಪ್ಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಈ ದೃಶ್ಯಾವಳಿಗಳು ಕಳೆದ 2022 ಆಗಸ್ಟ್ 15ರಂದು ಉತ್ತರ ಪ್ರದೇಶದ ಲಕ್ನೋ ಶಾಲೆಯೊಂದರಲ್ಲಿ ಸರ್ವ ಧರ್ಮ ಸಮನ್ವತೆಯನ್ನು ಸಾರುವ ಸ್ಕಿಟ್ ಅನ್ನು ಶಾಲಾ ಮಕ್ಕಳು ಅಭಿನಯದ ಮೂಲಕ ಪ್ರಸ್ತುತಪಡಿಸಿರುವ ದೃಶ್ಯಗಳು ಎಂದು ತಿಳಿದು ಬಂದಿದೆ.
ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ಪ್ರಾರ್ಥನೆ ಸಲ್ಲಿಸುವ ವಿವಿಧ ಧಾರ್ಮಿಕ ಆಚರಣೆಗಳನ್ನು ಸೂಚಿಸುವ ಅಭಿನಯಗಳನ್ನು ಮಕ್ಕಳು ಮಾಡಿದ್ದಾರೆ. ಆದರೆ ಭಾರತ ಮಾತೆಯ ಪಾತ್ರದಾರಿಯು ನಮಾಝ್ ಮಾಡಿಸಲಾದ ದೃಶ್ಯಗಳನ್ನಷ್ಟೆ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ. ಅರವಿಂದ್ ಚೌಹಾಣ್ ಎಂಬುವವರು ಪೂರ್ಣ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
— Arvind Chauhan (@Arv_Ind_Chauhan) August 15, 2022
2022ರಲ್ಲೂ ಇದೇ ವಿಡಿಯೋವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿತ್ತು. ಭಾರತಾಂಬೆಯ ಪಾತ್ರಧಾರಿಯಿಂದ ಕೇವಲ ನಮಾಜ್ ಮಾಡಿಸುತ್ತಿದ್ದಾರೆ ಎಂದು ನಾಟಕದ ನಮಾಜ್ ಮಾಡುವ ತುಣುಕನ್ನಷ್ಟೆ ತೆಗೆದು ಕೋಮು ನಿರೂಪಣೆಯೊಂದಿಎ ಹಂಚಿಕೊಳ್ಳಲಾಗಿತ್ತು. ಅದೇ ಸಂದರ್ಭದಲ್ಲಿ ಏನ್ಸುದ್ದಿ.ಕಾಂ ಇದನ್ನು ಫ್ಯಾಕ್ಟ್ಚೆಕ್ ಮಾಡುವ ಮೂಲಕ ದೃಶ್ಯಗಳ ವಾಸ್ತವ ಏನೆಂದು ತಿಳಿಸಿತ್ತು ಅದನ್ನು ಇಲ್ಲಿ ನೋಡಬಹುದು.
2022ರಲ್ಲಿ ಈ ದೃಶ್ಯಾವಳಿಗಳನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೊಂಡಾಗ ಲಕ್ನೋದ ಕಮಿಷಿನರ್ ಇದರ ಬಗ್ಗೆ ಸೂಕ್ತ ಮಾಡಿ, ಕೋಮು ಭಾವನೆಗೆ ಧಕ್ಕೆ ತರುವ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಟ್ವೀಟರ್ ಮಾಡಿದ್ದರು.
सोशल मीडिया पर वायरल हो रहे वीडियो जिसमे थाना बाजारखाला क्षेत्रान्तर्गत एक विद्यालय मे बच्चो द्वारा किये जा रहे कार्यक्रम के सम्बन्ध में। @Uppolice pic.twitter.com/t8a6Ws5B6b
— LUCKNOW POLICE (@lkopolice) August 15, 2022
ಒಟ್ಟಾರೆಯಾಗಿ ಹೇಳುವುದಾದರೆ 15 ಆಗಸ್ಟ್ 2022ರಂದು ಉತ್ತರ ಪ್ರದೇಶದ ಲಕ್ನೋ ಶಾಲಾ ಮಕ್ಕಳು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಭಿನಯಿಸಿದ್ದ ಸರ್ವ ಧರ್ಮ ಶಾಂತಿ ಸಂದೇಶ ಸಾರುವ ನಾಟಕದ ದೃಶ್ಯಾವಳಿಗಳನ್ನು ಎಡಿಟ್ ಮಾಡಿ ಸುಳ್ಳು ಪ್ರತಿಪಾದನೆಯೊಂದಿಗೆ ರಾಹುಲ್ ಗಾಂಧಿ ಅರವಿಂದ ಕೇಜ್ರಿವಾಲ್ ಅವರ ಹೆಸರನ್ನು ಉಲ್ಲೇಖಿಸಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.
2022ರಲ್ಲೂ ಇದೇ ದೃಶ್ಯಗಳನ್ನು ಭಾರತ ಮಾತೆ ಪಾತ್ರಧಾರಿಯು ಕೇವಲ ನಮಾಝ್ ಮಾಡಿದಂತೆ ಬಿಂಬಿಸಿ ಕೋಮು ಸಾಮರಸ್ಯವನ್ನು ಕದಡುವ ಕೋಮು ನಿರೂಪಣೆಯೊಂದಿಗೆ ವಿಡಿಯೊವನ್ನು ವೈರಲ್ ಮಾಡಲಾಗಿತ್ತು. ಆದರೆ ಪೂರ್ಣ ವಿಡಿಯೋದಲ್ಲಿ ಸರ್ವ ಧರ್ಮ ಸಮನ್ವಯವನ್ನು ಸಾರುವ ಸಂದೇಶವನ್ನು ಶಾಲಾ ಮಕ್ಕಳು ತಮ್ಮ ನಾಟಕದ ಪ್ರದರ್ಶನದಲ್ಲಿ ಅಭಿನಯಿಸಿರುವುದು ಸ್ಪಷ್ಟವಾಗಿತ್ತು ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ