ಫ್ಯಾಕ್ಟ್ಚೆಕ್ : ಕ್ರಿಶ್ಚಿಯನ್ ಧರ್ಮ ಪ್ರಚಾರ ಮಾಡುತ್ತಿದ್ದ ದಂಪತಿಗಳನ್ನು ಬೆತ್ತಲೆ ಮೆರವಣಿಗೆ ಮಾಡಲಾಗಿದೆ ಎಂಬುದು ಸುಳ್ಳು
ಉತ್ತರ ಪ್ರದೇಶದಲ್ಲಿ ಕ್ರೈಸ್ತ ಧರ್ಮ ಪ್ರಚಾರದಲ್ಲಿ ತೊಡಗಿದ್ದ ಪಾದ್ರಿ ಮತ್ತು ಆತನ ಪತ್ನಿಯನ್ನು ಬಲವಂತವಾಗಿ ವಿವಸ್ತ್ರಗೊಳಿಸಿ ಬೆತ್ತಲೆ ಮೆರವಣಿಗೆ ಮಾಡಲಾಗಿದೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರಾದ ಸಾಮೆಲ್ ಬಾಬು (ಆರ್ಕೈವ್) ಜುಲೈ 27 ರಂದು ಬೆತ್ತಲಾಗಿರುವ ಮಹಿಳೆ ಮತ್ತು ಪುರುಷನ ಫೋಟೊವನ್ನು ಹಂಚಿಕೊಂಡಿದ್ದು, ಇದು ನಗ್ನ ದಂಪತಿಗಳ ಈ ಚಿತ್ರ. “ದಯವಿಟ್ಟು ಕ್ರಿಶ್ಚಿಯನ್ ಪಾದ್ರಿ ಮತ್ತು ಅವರ ಬಾಳಸಂಗಾತಿಗಾಗಿ ಪ್ರಾರ್ಥಿಸಿ, ಉತ್ತರ ಪ್ರದೇಶದಲ್ಲಿ ಬೈಬಲ್ ಬೋಧಿಸಿದ ಕಾರಣಕ್ಕೆ ಅವರನ್ನು ಬೆತ್ತಲೆಯಾಗಿ ಮಾಡಲಾಗಿದೆ. ಮತ್ತು ನಗರದ ತುಂಬ ಮೆರವಣಿಗೆ ನಡೆಸಿದ್ದಾರೆ. ಓ ಕರ್ತನೇ ಕರುಣಿಸು, ನೀವು ದಯವಿಟ್ಟು ಈ ಸುದ್ದಿಯನ್ನು ಸಾಧ್ಯವಾದಷ್ಟು ಹಂಚಿಕೊಳ್ಳಿ, ಇದರಿಂದ ಬಹಳಷ್ಟು ಜನರು ಅವರಿಗಾಗಿ ಪ್ರಾರ್ಥಿಸಬಹುದು ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಇದೇ ಫೋಟೊವನ್ನು ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು, ಮಣಿಪುರದ ಘಟನೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ವೈರಲ್ ಪೋಸ್ಟ್ನ ಹಿನ್ನಲೆ ಮತ್ತು ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಇಂಡಿಯಾ ಟುಡೇ ವೆಬ್ಸೈಟ್ನಲ್ಲಿ ಅಕ್ಟೋಬರ್ 10, 2015 ರಂದು ಪ್ರಕಟವಾದ ಸುದ್ದಿಯೊಂದು ಲಭ್ಯವಾಗಿದೆ. ಇಂಡಿಯಾ ಟುಡೇ ಪ್ರಕಾರ, ಗ್ರೇಟರ್ ನೋಯ್ಡಾದ ದಂಕೌರ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಸುನೀಲ್ ಗೌತಮ್ ಎಂಬ ವ್ಯಕ್ತಿ ತನ್ನ ಮೇಲೆ ನಡೆದ ಹಲ್ಲೆಯ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ, ಪೊಲೀಸರು ಪ್ರಕರಣ ದಾಖಲಿಸದೆ ಇದ್ದಾಗ ಬೇಸತ್ತ ಕುಟುಂಬ, ಪ್ರಕರಣ ದಾಖಲಿಸುವಂತೆ ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.
ವರದಿಯ ಪ್ರಕಾರ, ಅಕ್ಟೋಬರ್ 2015 ರಲ್ಲಿ ಉತ್ತರ ಪ್ರದೇಶದ ಗೌತಮ್ ಬುಧ್ ನಗರದ ದಂಕೌರ್ನ ಮಾರುಕಟ್ಟೆಯಲ್ಲಿ ದರೋಡೆ ಪ್ರಕರಣದ ದೂರು ದಾಖಲಿಸಲು ಪೊಲೀಸರು ನಿರಾಕರಿಸಿದ್ದರು. ದೂರು ನೀಡಲು ಬಂದಿದ್ದ ಕುಟುಂಬದ ಸದಸ್ಯರು ಪೊಲೀಸರ ವರ್ತನೆಯಿಂದ ಬೇಸತ್ತು ಬೆತ್ತಲೆಯಾಗಿ ಪ್ರತಿಭಟಿಸಿದರು, ತಕ್ಷಣ ಪೊಲೀಸರು ದಲಿತ ಕುಟುಂಬದ ಮೂವರು ಮಹಿಳೆಯರು ಸೇರಿದಂತೆ ಐವರನ್ನು ಬಂಧಿಸಿದ್ದರು ಎಂದು ವರದಿಯಾಗಿದೆ.
ಮತ್ತಷ್ಟು ಪರಿಶೀಲನೆ ನಡೆಸಿದಾಗ NMF ಸುದ್ದಿಯ YouTube ಚಾನಲ್ಗೆ ಅಪ್ಲೋಡ್ ಮಾಡಿದ ಅದೇ ಘಟನೆಯ ವೀಡಿಯೊ ವರದಿಯು ಲಭ್ಯವಾಗಿದೆ. ಈ ವಿಡಿಯೋದಲ್ಲಿ ಪೊಲೀಸರು ಹಾಗೂ ಕುಟುಂಬದವರ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ವರದಿಯಾಗಿದೆ.
ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆದ ನಂತರ, ಕುಟುಂಬದ ಸದಸ್ಯರು ಗ್ರೇಟರ್ ನೋಯ್ಡಾ ಪೊಲೀಸ್ ಠಾಣೆಯಿಂದ ಹೊರಬಂದು ಬೆತ್ತಲಾಗಿ ಪ್ರತಿಭಟನೆ ನಡೆಸಿ, ಪೊಲೀಸರು ಆರೋಪಿಗಳ ರಕ್ಷಣೆಗೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು ಎಂದು ವರದಿಯಾಗಿದೆ.
ಕಳೆದ ವರ್ಷ ಇದೇ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕರ್ನಾಟಕದ ಮಾಲೂರಿನಲ್ಲಿ ದಲಿತ ಕುಟುಂಬ ಬೆತ್ತಲೆ ಪ್ರತಿಭಟನೆ ನಡಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಂಡಾಗ, ಏನ್ಸುದ್ದಿ.ಕಾಂ ಫ್ಯಾಕ್ಟ್ಚೆಕ್ ಮೂಲಕ ಪ್ರತಿಪಾದನೆ ಸುಳ್ಳು ಎಂದು ವರದ ಮಾಡಿತ್ತು.
ಫ್ಯಾಕ್ಟ್ಚೆಕ್: ಸಾಮಾಜಿಕ ಬಹಿಷ್ಕಾರ ಹಾಕಿದ್ದಕ್ಕೆ ಕರ್ನಾಟಕದಲ್ಲಿ ದಲಿತ ಕುಟುಂಬ ಬೆತ್ತಲೆ ಪ್ರತಿಭಟನೆ ನಡೆಸಿಲ್ಲ
ಒಟ್ಟಾರೆಯಾಗಿ ಹೇಳುವುದಾದರೆ, ಕ್ರಿಶ್ಚಿಯನ್ ದಂಪತಿಗಳನ್ನು ಬಲವಂತವಾಗಿ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಲಾಗಿದೆ ಎಂದು ಸುಳ್ಳು ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಈ ಘಟನೆ ಅಕ್ಟೋಬರ್ 7, 2015 ರಂದು, ಗ್ರೇಟರ್ ನೋಯ್ಡಾದ ಡಂಕೌರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ತಮ್ಮ ಏಲೆ ಹಲ್ಲೆ ನಡೆಸಿದವರ ವಿರುದ್ದ ಪ್ರಕರಣ ದಾಖಲಿಸದ ಪೊಲೀಸರ ಕ್ರಮವನ್ನು ಪ್ರತಿಭಟಿಸುವ ಸಲುವಾಗಿ ದಲಿತ ಕುಟುಂಬದ ಸದಸ್ಯರು ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ನೆಹರು ಮತ್ತು ಇಂದಿರಾ ಅವರೊಂದಿಗೆ ಇರುವ ವ್ಯಕ್ತಿಗಳು ಯಾರು ಗೊತ್ತೆ?