FACT CHECK | ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ಅಭ್ಯರ್ಥಿ ನವನೀತ್ ರಾಣಾ ಬಿಕ್ಕಿ ಬಿಕ್ಕಿ ಅತ್ತಿದ್ದು ನಿಜವೇ?
2024ರ ಲೋಕಸಭಾ ಚುನಾವಣೆಯಲ್ಲಿ ಅಮರಾವತಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ನ ಬಲ್ವಂತ್ ವಾಂಖೆಡೆ ವಿರುದ್ಧ ಬಿಜೆಪಿ ಅಭ್ಯರ್ಥಿ ನವನೀತ್ ರಾಣಾ ಸೋತ ಬಳಿಕ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವೊಂದು ಸಾಮಾಜಿಕ ಮಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.
ಚುನಾವಣಾ ಪ್ರಚಾರದ ವೇಳೆ ಮಸೀದಿಗೆ ಬಾಣ ಬಿಡುವ ನಟನೆಯನ್ನು ಮಾಡುತ್ತಿದ್ದರು ಈಗ ಸೋತು ಹೇಗೆ ಅಳುತ್ತಿದ್ದಾರೆ ನೋಡಿ. ಕರ್ಮ ರಿಟರ್ನ್ ಎಂದು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. 24 ಸೆಕೆಂಡುಗಳ ವೀಡಿಯೊದಲ್ಲಿ, ರಾಣಾ ಅವರು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದಾರೆ, ನಿರಂತರವಾಗಿ ಅಳುತ್ತಿರುವ ನವನೀತ್ ರಾಣಾ ಅವರನ್ನುಅವರ ಪತಿ ರವಿ ಸಮಾಧಾನ ಪಡಿಸುತ್ತಿರುವುದನ್ನು ಕಾಣಬಹುದು. ಇದೇ ರೀತಿಯ ಮತ್ತೊಂದು ಪೋಸ್ಟ್ ಅನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ನಲ್ಲಿ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 2022ರ ಮೇ 5 ರಂದು ಇಂಡಿಯಾ ಟುಡೇ ಮಾಧ್ಯಮ ಸಂಸ್ಥೆಯ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋ ಲಭ್ಯವಾಗಿದೆ. ಇದೀಗ ವೈರಲ್ ಆಗಿರುವ ವಿಡಿಯೋವನ್ನು 2022ರಲ್ಲಿ ಇಂಡಿಯಾ ಟುಡೇ ಪೋಸ್ಟ್ ಮಾಡಿತ್ತು.
ವರದಿಯ ಪ್ರಕಾರ, ಅಮರಾವತಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ತಮ್ಮ ಪತಿ ಶಾಸಕ ರವಿ ರಾಣಾ ಅವರನ್ನು ನೋಡಿದ ನಂತರ ಭಾವುಕರಾಗಿ ಕಣ್ಣೀರಿಟ್ಟರು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅಧಿಕೃತ ನಿವಾಸವಾದ ‘ಮಾತೋಶ್ರೀ’ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಬೆದರಿಕೆ ಹಾಕಿದ್ದ ಕಾರಣಕ್ಕಾಗಿ ಈ ದಂಪತಿಯನ್ನು ಬಂಧಿಸಲಾಗಿತ್ತು. 12 ದಿನಗಳ ಕಾಲ ಜೈಲಿನಲ್ಲಿ ಕಳೆದ ನಂತರ ಗಂಡ ಹೆಂಡತಿ ಪರಸ್ಪರ ಭೇಟಿಯಾದರು. ಇದೊಂದು ಭಾವನಾತ್ಮಕ ಪುನರ್ಮಿಲನವಾಗಿತ್ತು ಎಂದು ಉಲ್ಲೇಖಿಸಿದೆ.
ಸಿಎನ್ಎನ್ – ನ್ಯೂಸ್ 18, ಎಬಿಪಿ ಲೈವ್ ಮತ್ತು ಝೀ 24 ತಾಸ್ ಸೇರಿದಂತೆ ಹಲವು ಸುದ್ದಿ ವಾಹಿನಿಗಳೂ ಕೂಡಾ ಇದೇ ವೀಡಿಯೋವನ್ನು ಹಾಗೂ ಇದೇ ಮಾಹಿತಿಗಳನ್ನು ಪ್ರಕಟಿಸಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಮರಾವತಿಯ ಮಾಜಿ ಸಂಸದೆ ನವನೀತ್ ರಾಣಾ ಅವರ ಪತಿ ಆಸ್ಪತ್ರೆಯಲ್ಲಿ ಸಾಂತ್ವನ ಹೇಳಿದ 2022 ರ ದೃಶ್ಯಗಳನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕೊಯಮತ್ತೂರಿನ ಬೂತ್ವೊಂದರಲ್ಲಿ ಅಣ್ಣಾಮಲೈಗೆ ಕೇವಲ ಒಂದೇ ಒಂದು ಮತ ಬಿದಿದ್ದು ನಿಜವೇ