ಕೊರೊನಾ ಸೋಂಕಿತರ ಚಿಕಿತ್ಸೆ ವೇಳೆ ಮಡಿದ ವೈದ್ಯರಿಗೆ 1 ಕೋಟಿ ರೂ. ಪರಿಹಾರ – ದೆಹಲಿ ಸಿಎಂ
ಕೊರೊನಾ ವೈರಸ್ ನಿಂದಾಗಿ ಇಡೀ ದೇಶವೇ ತಲ್ಲಣಗೊಂಡಿದೆ. ವೈದ್ಯರು, ಪೊಲೀಸರು, ಮಾದ್ಯಮದವರು ಜೀವದ ಹಂಗು ತೊರೆದು ಜನ ಹಿತಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೌದು… ಕೇಂದ್ರ ಸರ್ಕಾರ ದೇಶದ ಬಹುತೇಕ ಸರ್ಕಾರಿ ಸೇವೆಯಲ್ಲಿರುವವರಿಗೆ, ಖಾಸಗೀ ಕಂಪನಿಗಳಿಂದ ಹಿಡಿದು ಸಣ್ಣ ವ್ಯಾಪರಿಗಳಿಗೂ ಮನೆಯಿಂದ ಹೊರಬಾರದಂತೆ ಆದೇಶ ಹೊರಡಿಸಿದೆ. ಆದರೆ ಈ ಲಾಕ್ ಡೌನ್ ಪೊಲೀಸರಿಗೆ, ಮಾದ್ಯಮದವರಿಗೆ ಹಾಗೂ ವೈದ್ಯರಿಗೆ ಅನ್ವಯವಾಗೋದೇ ಇಲ್ಲ. ಅದರಲ್ಲೂ ವೈದ್ಯರ ಸೇವೆಗೆ ನಾವೆಲ್ಲರೂ ತಲೆ ಬಾಗಲೇಬೇಕು.
ಕೊರೊನಾ ಹರಡುವ ಭೀತಿಯಿಂದ ಇಡೀ ವಿಶ್ವವೇ ಲಾಕ್ ಡೌನ್ ಆಗಿದೆ. ಮನೆ ಬಿಟ್ಟು ಹೊರಬಂದರೆ ಸಾಕು ದೇಹ ಹೊಕ್ಕುವ ಭೀತಿ ಹುಟ್ಟಿಸಿರುವ ಕೊರೊನಾಕ್ಕೆ ಮನುಕುಲವೇ ತಲೆ ಬಾಗಿದೆ. ಹೀಗಿರುವಾಗ ಆಸ್ಪತ್ರೆಗೆ ಬರುವ ಯಾವ ರೋಗಿಗೆ ಕೊರೊನಾ ಸೋಂಕು ಇದಿಯೋ..? ಯಾರಿಗೆ ಇಲ್ಲವೂ..? ಇದ್ಯಾವುದು ಗೊತ್ತಿಲ್ಲ. ಆದರೂ ಜನರ ಪ್ರಾಣ ಕಾಪಾಡುವಲ್ಲಿ ವೈದ್ಯ ಲೋಕ ಶ್ರಮ ಪಡುತ್ತಿದೆ. ಇಂತಹ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಧೈರ್ಯ ತುಂಬುವ ದೃಷ್ಟಿಯಿಂದ ದೆಹಲಿಯ ಸಿಎಂ ಅರವಿಂದ ಕೇಜ್ರಿವಾಲ್ ಹೊಸ ಯೋಜನೆಯನ್ನು ರೂಪಿಸಿದ್ದಾರೆ.
ಎಸ್… ಕೊರೊನಾ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಸಿಬ್ಬಂದಿಗಳು ಸೋಂಕಿನಿಂದ ಮಡಿದರೆ ಅಂಥವರಿಗೆ 1 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ದೆಹಲಿ ಸಿಎಂ ಘೋಷಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಅರವಿಂದ್ ಕೇಜ್ರಿವಾಲ್, ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಮತ್ತು ಆರೋಗ್ಯ ಸೇವೆ ಮಾಡುವ ಸಿಬ್ಬಂದಿಗೆ ಮೊದಲು ಸೋಂಕು ತಗಲುವ ಸಾಧ್ಯತೆ ಇದೆ. ಇದರಿಂದ ಜೀವಕ್ಕೆ ಅಪಾಯವಿದೆ ಎಂದು ಹಲವರಲ್ಲಿ ಆತಂಕ ಇದೆ. ಇಂತವರಿಗೆ ಧೈರ್ಯ ತುಂಬುವ ಸಲುವಾಗಿ ಒಂದು ವೇಳೆ ಆರೋಗ್ಯ ಸೇವೆಯಲ್ಲಿ ಯಾರಾದರೂ ಮಡಿದರೇ ದೆಹಲಿ ಸರ್ಕಾರ 1 ಕೋಟಿ. ರೂ ಪರಿಹಾರ ನೀಡಲಿದೆ ಎಂದು ಪ್ರಕಟಿಸಿದ್ದಾರೆ.
ಭಾರತದಲ್ಲಿ ಲಾಕ್ ಡೌನ್ ಆದ ಪರಿಣಾಮ ಕೊರೊನಾ ಭೀತಿ ಕೊಂಚ ಮಟ್ಟಿಗೆ ಕಡಿಮೆಯಾಗಿದೆ ಎಂದೇಳಲಾಗುತ್ತದೆ. ಆದರೆ ದೆಹಲಿಯಲ್ಲಿ ನಡೆದ ಧಾರ್ಮಿಕ ಸಛೆಯಲ್ಲಿ ಪಾಲ್ಗೊಂಡಿದ್ದ 2000 ಜನರಲ್ಲಿ 10 ಜನ ಕೊರೊನಾದಿಂದ ಸಾವನ್ನಪ್ಪಿದ್ದು ಸದ್ಯ ದೇಶದಲ್ಲಿ ಆತಂಕ ಹೆಚ್ಚಿಸಿದೆ.
ಈಗಾಗಲೇ ಸೋಂಕಿತರಿಗೆ ಚಿಕಿತ್ಸೆ ನೀಡಿದ ಕೆಲ ವೈದ್ಯರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಇದರಿಂದ ವೈದ್ಯಕೀಯ ಸಿಬ್ಬಂದಿಯೋ ಆತಂಕಕ್ಕೀಡಾಗಿದ್ದಾರೆ. ಇವರಿಗೆ ಧೈರ್ಯ ತುಂಬಲು ಕೇಜ್ರಿವಾಲ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಕೊರೋನಾ ಪೀಡಿತರ ಸಂಖ್ಯೆ 1,637ಕ್ಕೆ ಏರಿಕೆಯಾಗಿದ್ದು ಈ ಪೈಕಿ 133 ಮಂದಿ ಗುಣಮುಖರಾಗಿದ್ದಾರೆ. ಮೃತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.