ತಾಯಿ ಮತ್ತು 12 ತಿಂಗಳ ತಂಗಿಯನ್ನು ವೀಲ್ಚೇರ್ನಲ್ಲಿ ತಳ್ಳಿಕೊಂಡು 350 ಕಿ.ಮೀ ಸಂಚರಿಸಿದ ಬಾಲಕ!
ಲಾಕ್ಡೌನ್ನಿಂದಾಗಿ ಲಕ್ಷಾಂತರ ಕಾರ್ಮಿಕರು ಬೀದಿ ಪಾಲಾಗಿ ನಡೆದು ತಮ್ಮೂರು ತಲುಪಿದ ಬೆನ್ನಲ್ಲೇ, 10 ವರ್ಷದ ಬಾಲಕನೋರ್ವ ತನ್ನ ಅಂಗವಿಕಲ ತಾಯಿ ಹಾಗೂ ಒಂದು ವರ್ಷದ ತಂಗಿಯನ್ನು ವ್ಹೀಲ್ ಚೇರ್ ನಲ್ಲಿ ಕೂರಿಸಿಕೊಂಡು ಕಾಲ್ನಡಿಗೆಯಲ್ಲಿ ಹೈದರಾಬಾದ್ನಿಂದ ಬೆಂಗಳೂರಗೆ ಪಯಣ ಆರಂಭಿಸಿ 350 ಕಿ.ಮೀ ಸಂಚರಿಸಿದ್ದಾನೆ!
ಶಾರೂಖ್ ಎಂಬ 10 ವರ್ಷದ ಬಾಲಕ ತನ್ನ ತಾಯಿ ಕುಳಿತಿದ್ದ ವ್ಹೀಲ್ ಚೇರ್ ತಳ್ಳಿಕೊಂಡು ತಂಗಿಯನ್ನು ಎತ್ತಿಕೊಂಡು ಬೆಂಗಳೂರಿನಲ್ಲಿರುವ ತನ್ನ ಇತರ ಮೂವರು ಸಹೋದರ/ಸಹೋದರಿಯರ ಜೊತೆಗೂಡಲು ಹೈದರಾಬಾದ್ ನಿಂದ ಕಾಲ್ನಡಿಗೆಯಲ್ಲಿ ಬರುತ್ತಿರುವ ವಿಷಯ ಕರ್ನೂಲ್ ಬಳಿ ಓರ್ವ ಸಬ್ ಇನ್ಸ್ಪೆಕ್ಟರ್ ಟಿ ನರೇಂದ್ರ ಕುಮಾರ್ ರೆಡ್ಡಿ ಅವರಿಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ. ಆ ವೇಳೆಗಾಗಲೆ ಬಾಲಕ ಹೈದರಾಬಾದ್ ನಿಂದ 350 ಕಿ.ಮೀ ದೂರದಲ್ಲಿರುವ ಕರ್ನೂಲು ತಲುಪಿದ್ದ. ಬಾಲಕ ಶಾರೂಖ್ ನ ಪಾಡನ್ನು ಗಮನಿಸಿದ ಪೊಲೀಸ್ ಅಧಿಕಾರಿ, ದ್ರೋಣಾಚಲಂ ಸೇವಾ ಸಮಿತಿಯ ಸಹಾಯದಿಂದ ಬೆಂಗಳೂರಿಗೆ ತಲುಪಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
“ಶಾರೂಖ್ ನ ತಾಯಿ ಹಸೀನಾ ಉತ್ತರ ಪ್ರದೇಶದವರು. ಆಕೆ ಗಂಡನನ್ನು ಕಳೆದುಕೊಂಡ ಬಳಿಕ ತನ್ನ 5 ಮಕ್ಕಳೊಂದಿಗೆ ಹೈದರಾಬಾದ್ ಗೆ ಬಂದು ಜೀವನ ನಡೆಸುತ್ತಿದ್ದರು. ಲಾಕ್ ಡೌನ್ ಘೋಷಣೆಯಾಗುವುದಕ್ಕೂ ಮುನ್ನ ಆಕೆಯ 3 ಮಕ್ಕಳು ಪರಿಚಯಸ್ಥರೊಬ್ಬರು ಬೆಂಗಳೂರಿನ ಆಶ್ರಮವೊಂದಕ್ಕೆ ಕರೆದುಕೊಂಡುಹೋಗಿ ಬಿಟ್ಟಿದ್ದರು. ಕೆಲವು ದಿನಗಳ ನಂತರ ಹಸೀನಾ ಅವರೂ ಉಳಿದ ಇಬ್ಬರು ಮಕ್ಕಳೊಂದಿಗೆ ಅಲ್ಲಿಗೆ ಹೋಗುವವರಿದ್ದರು. ಆದರೆ ಲಾಕ್ ಡೌನ್ ಪರಿಣಾಮ ಹೈದರಾಬಾದ್ ನಲ್ಲೇ ಸಿಲುಕಿಕೊಂಡರು. ಆದರೆ ಕೆಲವು ದಿನಗಳ ನಂತರ ಬೆಂಗಳೂರಿನಲ್ಲಿರುವ ತನ್ನ ಮೂವರು ಮಕ್ಕಳ ಜೊತೆಗೂಡಲು ಕಾತುರದಿಂದ ಕಾಯುತ್ತಿದ್ದರು. ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ ಹಣವೂ ಇಲ್ಲದೇ ಶಾರೂಖ್ ಆತನ ತಂಗಿ, ಆತನ ತಾಯಿ ಹಸೀನ ಅವರು ಕಾಲ್ನಡಿಗೆಯಲ್ಲೇ ಬೆಂಗಳೂರಿಗೆ ಹೊರಟಿದ್ದರು” ಎಂದು ನರೇಂದ್ರ ಕುಮಾರ್ ತಿಳಿಸಿದ್ದಾರೆ.
ಈ ಕುಟುಂಬವನ್ನು ಬೆಂಗಳೂರಿಗೆ ತಲುಪಿಸಿದ ದ್ರೋಣಾಚಲಂ ಸೇವಾ ಸಮಿತಿಯ ಯುವಕರಿಗೆ ಅವರು ಧನ್ಯವಾದ ತಿಳಿಸಿದ್ದಾರೆ.