ಮಲೇಷ್ಯಾ ಸರ್ಕಾರ ಪತನ; ಪ್ರಧಾನಿ ಮುಹ್ಯಿದ್ದೀನ್ ಯಾಸಿನ್ ರಾಜೀನಾಮೆ!
ಮಲೇಷ್ಯಾದ ಪ್ರಧಾನ ಮಂತ್ರಿ ಮುಹ್ಯಿದ್ದೀನ್ ಯಾಸಿನ್ ನೇತೃತ್ವದ ಮಂತ್ರಿಮಂಡಲವು ರಾಜನಿಗೆ ರಾಜೀನಾಮೆ ಸಲ್ಲಿಸಿದೆ ಎಂದು ವಿಜ್ಞಾನ ಸಚಿವ ಖೈರಿ ಜಮಾಲುದ್ದೀನ್ ಸೋಮವಾರ ಹೇಳಿದ್ದಾರೆ.
ರಾಜಕೀಯ ಬಹುಮತ ಕಳೆದುಕೊಂಡ ಪರಿಣಾಮ ಕ್ಯಾಬಿನೆಟ್ ವಿಸರ್ಜಿಸಲಾಗಿದೆ. ಸೋಮವಾರ ಪ್ರಧಾನಿ ಮುಹ್ಯಿದ್ದೀನ್ ಅವರು ಅರಮನೆಗೆ ತೆರಳಿ ರಾಜನಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಖೈರಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕ್ಯಾಬಿನೆಟ್ ವಿಸರ್ಜನೆಯ ಬಗ್ಗೆ ದಢೀಕರಣಕ್ಕಾಗಿ ಸೋಮವಾರ ರಾಯಿಟರ್ಸ್ ಪ್ರಧಾನಿ ಕಚೇರಿಯನ್ನು ಸಂಪರ್ಕಿಸಿದ್ದು, ಮುಹ್ಯಿದ್ದೀನ್ ಅವರ ಕಚೇರಿ ಪ್ರತಿಕ್ರಿಯೆ ನೀಡಿಲ್ಲ.
ಮುಹ್ಯಿದ್ದೀನ್ ಅವರ ಮೈತ್ರಿ ಸರ್ಕಾರ 17 ತಿಂಗಳುಗಳನ್ನು ಪೂರೈಸಿದೆ. ಆದರೆ, ಕೆಲವು ತಿಂಗಳುಗಳಿಂದ ಮೈತ್ರಿಯಲ್ಲಿ ಒಳ ಜಗಳಗಳು ಭುಗಿಲೆದ್ದಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ದುರ್ಬಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮುಹ್ಯಿದ್ದೀನ್ ರಾಜೀನಾಮೆ ನೀಡಿದ್ದು, ಇದರೊಂದಿಗೆ ಮೈತ್ರಿ ಗದ್ದಲ ಅಂತ್ಯಗೊಂಡಿದೆ.
ಇದನ್ನೂ ಓದಿ: ಹೊತ್ತಿಉರಿದ ದಕ್ಷಿಣ ಆಫ್ರಿಕಾ; ದೇಶಕ್ಕೆ ಶತಕೋಟಿ ನಷ್ಟ: ಅಧ್ಯಕ್ಷ ಸಿರಿಲ್ ರಾಮಾಫೋಸಾ
ಕೊರೊನಾ ಸೋಂಕು ವ್ಯಾಪಿಸಿರುವ ಈ ಸಂದರ್ಭದಲ್ಲಿ ಮುಹ್ಯಿದ್ದೀನ್ ಅವರ ರಾಜೀನಾಮೆ ಮಲೇಷ್ಯಾದಲ್ಲಿ ಆತಂಕವನ್ನು ಸೃಷ್ಟಿಸುವ ಸಾಧ್ಯತೆ ಇದೆ. ಏಕೆಂದರೆ, ಕೊರೊನಾ ಪ್ರಕರಣಗಳನ್ನು ನಿಯಂತ್ರಿಸಲು ಮತ್ತು ಸಾಂಕ್ರಾಮಿಕದಿಂದ ಕುಸಿಯುತ್ತಿರುವ ಆರ್ಥಿಕತೆಯನ್ನು ಸುಧಾರಿಸಲು ಈಗ ಮಲೇಷ್ಯಾದಲ್ಲಿ ಯಾವುದೇ ಉತ್ತರಾಧಿಕಾರಿ ಇಲ್ಲದಂತಾಗಿದೆ.
ಮಲೇಷಿಯಾದ ರಿಂಗಿಟ್ ಕರೆನ್ಸಿ ಇತ್ತೀಚೆಗೆ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಮತ್ತು ಷೇರು ಮಾರುಕಟ್ಟೆಯೂ ಅಲುಗಾಡುತ್ತಿದೆ.
ಸಂಸತ್ತಿನಲ್ಲಿ ಯಾರಿಗೂ ಸ್ಪಷ್ಟ ಬಹುಮತವಿಲ್ಲದ ಕಾರಣ ಅಥವಾ ಸಾಂಕ್ರಾಮಿಕ ಸಮಯದಲ್ಲಿ ಚುನಾವಣೆಗಳನ್ನು ನಡೆಸಬಹುದೇ ಎಂಬ ಗೊಂದಲದ ಕಾರಣದಿಂದ ಮುಂದಿನ ಸರ್ಕಾರವನ್ನು ಯಾರು ರಚಿಸಬಹುದು ಎಂಬುದು ತಕ್ಷಣವೇ ಸ್ಪಷ್ಟವಾಗಲಾರದು.
ಆಡಳಿತದ ನಿರ್ಧಾರವು ಸಾಂವಿಧಾನಿಕ ರಾಜ ಕಿಂಗ್ ಅಲ್-ಸುಲ್ತಾನ್ ಅಬ್ದುಲ್ಲಾ ಅವರ ಸುಪರ್ದಿಗೆ ಹೋಗುವ ಸಾಧ್ಯತೆಯಿದೆ. ಅವರು ಬಹುಮತವನ್ನು ಯಾರಿಗೆ ನೀಡಬಹುದು ಎಂಬುದರ ಆಧಾರದ ಮೇಲೆ ಚುನಾಯಿತ ಶಾಸಕರಲ್ಲಿ ಒಬ್ಬರನ್ನು ಪ್ರಧಾನಿಯಾಗಿ ನೇಮಿಸಬಹುದು.
ಇದನ್ನೂ ಓದಿ: 15 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರ ಪಟ್ಟಿ ಕೇಳಿದ ತಾಲಿಬಾನ್; ಮದುವೆಗೆ ಒತ್ತಾಯ!
ಕೆಲವು ವಾರಗಳಿಂದ ತಾವು ರಾಜೀನಾಮೆ ನೀಡುವುದನ್ನು ನಿರಾಕರಿಸಿದ ಮುಹ್ಯಿದ್ದಿನ್, ಸೋಮವಾರ ರಾಜನಿಗೆ ರಾಜೀನಾಮೆ ಸಲ್ಲಿಸುವುದಾಗಿ ಪಕ್ಷದ ಸದಸ್ಯರಿಗೆ ಮಾಹಿತಿ ನೀಡಿದ್ದರು ಎಂದು ಪ್ರಧಾನ ಮಂತ್ರಿ ಇಲಾಖೆಯ ಮಂತ್ರಿ ಮೊಹ್ಮದ್ ರೆಡ್ಜುವಾನ್ ಎಂಡಿ ಯೂಸೋಫ್ ಹೇಳಿದ್ದಾರೆ ಎಂದು ಸುದ್ದಿ ಪೋರ್ಟಲ್ ಮಲೇಷಿಯಾಕಿನಿ ಭಾನುವಾರ ವರದಿ ಮಾಡಿತ್ತು.
ಪ್ರಧಾನ ಮಂತ್ರಿ ಸೋಮವಾರ ಬೆಳಿಗ್ಗೆ ವಿಶೇಷ ಕ್ಯಾಬಿನೆಟ್ ಸಭೆ ಕರೆದಿದ್ದಾರೆ ಎಂದು ರಾಜ್ಯ ಸುದ್ದಿ ಸಂಸ್ಥೆ ಬರ್ನಾಮಾ ವರದಿ ಮಾಡಿದೆ. ರಾಯಿಟರ್ಸ್ ಪತ್ರಕರ್ತರು ಮುಹಿದ್ದೀನ್ ರಾಷ್ಟ್ರೀಯ ಅರಮನೆಗೆ ಬಂದಿರುವುದನ್ನು ಗಮನಿಸಿದ್ದಾರೆ.
‘ಗ್ರಾಂಡ್ ಓಲ್ಡ್ ಪಾರ್ಟಿ’ಯ ಮುಹಾಯಿದ್ದೀನ್ ಅವರು 2020 ರ ಮಾರ್ಚ್ನಲ್ಲಿ ಅಧಿಕಾರ ಸ್ವೀಕರಿಸಿದಾಗಿನಿಂದ ಆಡಳಿತದ ಮೇಲೆ ಹಿಡಿತವು ಅನಿಶ್ಚಿತವಾಗಿತ್ತು. ಕೆಲವು ಯುನೈಟೆಡ್ ಮಲೆಸ್ ನ್ಯಾಷನಲ್ ಆರ್ಗನೈಸೇಶನ್ (UMNO) ಶಾಸಕರು ಪ್ರಧಾನಿಗೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಅಡಳಿತ ಅಸ್ಥಿರಗೊಂಡಿತ್ತು.
ಕೆಲವು ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಕೈಬಿಡುವುದು ಸೇರಿದಂತೆ ಕೆಲವು ಬೇಡಿಕೆಗಳನ್ನು ಪೂರೈಸಲು ತಾವು ನಿರಾಕರಿಸಿದ್ದರಿಂದ ಈ ಬಿಕ್ಕಟ್ಟು ಎದುರಾಯಿತು ಎಂದು ಮುಹಿದ್ದೀನ್ ಹೇಳಿದ್ದರು.
ಮಾಜಿ ಪ್ರಧಾನಿ ನಜೀಬ್ ರಜಾಕ್ ಮತ್ತು UMNO ಪಕ್ಷದ ಅಧ್ಯಕ್ಷ ಅಹ್ಮದ್ ಜಹಿದ್ ಹಮೀದಿ ಸೇರಿದಂತೆ ಕೆಲವು ರಾಜಕಾರಣಿಗಳು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರು ಈ ತಿಂಗಳು ಮುಹಿದ್ದೀನ್ ಗೆ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಕಾಬೂಲ್ ಪ್ರವೇಶಿಸಿದ ತಾಲಿಬಾನ್; ಆಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ರಾಜೀನಾಮೆ; ತಾಲಿಬಾನ್ ಕಮಾಂಡರ್ ನೂತನ ಅಧ್ಯಕ್ಷ!