FACT CHECK | ಕುತುಬ್ ಮಿನಾರ್ ನಿರ್ಮಿಸಿದ್ದು ಮೊಘಲರಲ್ಲವೇ ? ಇತಿಹಾಸವನ್ನು ತಿರುಚಲಾಗಿದೆಯೇ?
“ ಕುತುಬ್ ಮಿನಾರ್ ನಿರ್ಮಿಸಿದ್ದು ಮೊಘಲರು ಅಂತಾ ಇತಿಹಾಸದಲ್ಲಿ ಬರೆಯಲಾಗಿತ್ತು !! ಆದ್ರೆ ಅಲ್ಲಿ ಇರುವ ಕಬ್ಬಿಣದ ಕಂಬದ ಮೇಲೆ ಯಾರ ಹೆಸರಿದೆ ಎಂದೂ ಸ್ವಲ್ಪ ಜೂಮ್ ಮಾಡಿ ನೋಡಿದರೆ ನೈಜ ಸತ್ಯ ಸಂಗತಿ ತಿಳಿಯಲಿದೆ. ಇದು 1500 ವರ್ಷಗಳ ಹಿಂದಿನ ವರಾಹಮಿಹಿರನ ಕಾಲದ ವಿಷ್ಣು ಸ್ಥಂಭ.. ನಮ್ಮ ದೇಶದ ಇತಿಹಾಸವನ್ನು ಬರೆದ ಇತಿಹಾಸ ತಜ್ಞರ ಕಣ್ಣುಗಳಿಗೆ ಇದು ಕಾಣಲಿಲ್ಲ ಕಣ್ಣು ಕುರುಡಾಗುವಷ್ಟು ಮೊಘಲರು ಎಂಜಲು ತಿನ್ನಿಸಿರಬೇಕು ಡೋಂಗಿ ಇತಿಹಾಸ ತಜ್ಞರಿಗೆ ಯಾರೋ ಸ್ಥಾಪಿಸಿದ ಪರಂಪರೆಯನ್ನು ತಮ್ಮದು ಎಂದೂ ಇಲ್ಲಿವರೆಗೆ ಹೇಳಿಕೊಂಡ ನಕಲಿಗಳಿಗೆ ನಾಚಿಕೆಯಾಗಬೇಕು.” ಎಂಬ ಸಂದೇಶವೊಂದು ವಾಟ್ಸಾಪ್ನಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಕುತುಬ್ ಮಿನಾರ್ ಪ್ರದೇಶದಲ್ಲಿ ಇರುವ ಕಬ್ಬಿಣದ ಸ್ತಂಭದಲ್ಲಿ ಹಿಂದೂ ಹೆಸರುಗಳಿವೆ ಇದರಿಂದ ಸತ್ಯ ತಿಳಿಯುತ್ತದೆ ಎಂಬಂತೆ ಕಂಬವೊಂದರ ಫೋಟೋವನ್ನು ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಸರ್ಚ್ ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಚಿತ್ರಗಳನ್ನು ಸಂಗ್ರಹಿಸುವ ಹಲವು ವೆಬ್ಸೈಟ್ಗಳಲ್ಲಿ ಈ ಚಿತ್ರ ಇರುವುದು ಕಂಡುಬಂದಿದೆ.
ಫ್ಲಿಕ್ಕರ್ ನಲ್ಲಿ ಅಕ್ಟೋಬರ್ 19, 2009ರಂದು ಡೇವಿಡ್ ರಾಸ್ ಎಂಬವರು ಅಪ್ ಲೋಡ್ ಮಾಡಿರುವ ಚಿತ್ರ ಲಭ್ಯವಾಗಿದೆ. ಇದರಲ್ಲಿ ಐರನ್ ಪಿಲ್ಲರ್ ಭರತ್ ಪುರ ಫೋರ್ಟ್, ಭರತ್ ಪುರ ಇಂಡಿಯಾ ಎಂದು ಬರೆದಿದ್ದಾರೆ. ಈ ಫೊಟೊ ಮತ್ತು ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಫೊಟೋವನ್ನು ನೋಡಿದಾಗ ಎರಡೂ ಒಂದೇ ರೀತಿಯಾಗಿರುವುದು ಕಂಡುಬಂದಿದೆ.
Iron Pillar from Bharatpur Fort (Iron fort) in Rajasthan was constructed by Jat rulers of Bharatpur. Jat kingdom reached its zenith under Maharaja SurajMal (1707–1763) who built numerous forts & palaces across the kingdom & Lohagarh fort is one of strongest.#HistoryEncyclopedia pic.twitter.com/AUM4VCGRId
— History Encyclopedia (@History_Mystery) November 3, 2021
ಇದರ ಆಧಾರದಲ್ಲಿ ನಾವು ಇನ್ನಷ್ಟು ಶೋಧ ನಡೆಸಿದ್ದೇವೆ. ಈ ವೇಳೆ ಹಿಸ್ಟರಿ ಎನ್ಸೈಕ್ಲೋಪೀಡಿಯಾ ನವೆಂಬರ್ 3, 2021ರಂದು ಮಾಡಿರುವ ಟ್ವೀಟ್ ಲಭ್ಯವಾಗಿದೆ. ಇದರಲ್ಲಿ “ರಾಜಸ್ಥಾನದ ಭರತ್ಪುರ ಕೋಟೆಯಲ್ಲಿ (ಕಬ್ಬಿಣದ ಕೋಟೆ) ಕಬ್ಬಿಣದ ಕಂಬವನ್ನು ಭರತ್ಪುರದ ಜಾಟ್ ಆಡಳಿತಗಾರರು ನಿರ್ಮಿಸಿದ್ದಾರೆ. ಮಹಾರಾಜ ಸೂರಜ್ ಮಾಲ್ (1707-1763) ರ ಅಡಿಯಲ್ಲಿ ಜಾಟ್ ಸಾಮ್ರಾಜ್ಯವು ತನ್ನ ಉತ್ತುಂಗವನ್ನು ತಲುಪಿತು, ಅವರು ಸಾಮ್ರಾಜ್ಯದಾದ್ಯಂತ ಹಲವಾರು ಕೋಟೆಗಳು ಮತ್ತು ಅರಮನೆಗಳನ್ನು ನಿರ್ಮಿಸಿದರು ಮತ್ತು ಲೋಹಗಢ್ ಕೋಟೆಯು ಪ್ರಬಲವಾಗಿದೆ.” ಎಂದಿದೆ.
ಇದಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 25, 2021ರಂದು ದೈನಿಕ್ ಭಾಸ್ಕರ್ ಮಾಡಿರುವ ಫೇಸ್ಬುಕ್ ಪೋಸ್ಟ್ ಕೂಡ ಲಭ್ಯವಾಗಿದೆ. ಇದರಲ್ಲಿ ಲೋಹಸ್ತಂಭದಲ್ಲಿ ಬರೆದಿರುವ ರಾಜರ ಹೆಸರುಗಳ ಬಗ್ಗೆಯೂ ವಿವರಗಳನ್ನು ನೀಡಲಾಗಿದೆ.
ಭರತ್ ಪುರದ ಲೋಹಸ್ತಂಭದ ಬಗ್ಗೆ ನವೆಂಬರ್ 26, 2018ರ ನೇಹಾ ವೀಡಿಯೋ ಫಿಲ್ಮ್ ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. “ಜವಾಹರ್ ಬುರ್ಜ್ ಭಾರತ್ಪುರವನ್ನು ಮಹಾರಾಜ ಸೂರಜ್ ಮಾಲ್ ನಿರ್ಮಿಸಿದನು (A.D. 1756-63) ಆದರೆ ಅದರ ಮೇಲಿನ ರಚನೆಗಳನ್ನು (A.D. 1764-68) ಮಹಾರಾಜ ಜವಾಹರ್ ಸಿಂಗ್ ಅವರು ದೆಹಲಿಯ ವಿಜಯದ ಸ್ಮಾರಕದಲ್ಲಿ ರಚಿಸಿದರು” ಎಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕುತುಬ್ ಮಿನಾರ್ ನಿರ್ಮಿಸಿದ್ದು ಮೊಘಲರಲ್ಲ ಎಂದು ರಾಜಸ್ಥಾನದ ಕಬ್ಬಿಣದ ಕಂಬದ ಫೋಟೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ವಾಸ್ತವವಾಗಿ ಫೋಟೊದಲ್ಲಿರುವ ಸ್ತಂಭವು ಕುತುಬ್ ಮಿನಾರ್ ಅಲ್ಲ ಬದಲಿಗೆ ರಾಜಸ್ಥಾನದ ಭರತ್ ಪುರದ ಜವಾಹರ್ ಭುರ್ಜ್ ಎಂಬ ಲೋಹಸ್ತಂಭದ್ದಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಕೃಪೆ : ನ್ಯೂಸ್ ಚೆಕ್ಕರ್
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಶ್ಚಿಮ ಬಂಗಾಳದಲ್ಲಿ ಶಾಲಾ ಬಾಲಕಿಗೆ ಚಾಕುವಿನಿಂದ ಇರಿದ ವ್ಯಕ್ತಿ ಮುಸ್ಲಿಮನಲ್ಲ! ಮತ್ತ್ಯಾರು ?