ಮಂದಿರ, ಮಸೀದಿ, ಚರ್ಚ್ ಎಲ್ಲವೂ ಒಂದೇ; ಕಾನೂನು ಎಲ್ಲರಿಗೂ ಅನ್ವಯ: ಯಡಿಯೂರಪ್ಪ
“ಎಲ್ಲರಿಗೂ ಒಂದೇ ಕಾನೂನು. ದೇವಸ್ಥಾನ, ಚರ್ಚ್, ಮಸೀದಿ ಎಲ್ಲವೂ ಒಂದೇ” ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ 56ನೇ ಪುಣ್ಯತಿಥಿ ಅಂಗವಾಗಿ ಇಂದು ವಿಧಾನಸೌಧದ ಆವರಣದಲ್ಲಿರುವ ನೆಹರೂ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಯಡಿಯೂರಪ್ಪ ಗೌರವ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ದೇವಸ್ಥಾನ ತೆರೆಯಲು ಅವಕಾಶ ನೀಡುವುದೆಂದರೇ ಮಸೀದಿ ಮತ್ತು ಚರ್ಚ್ಗಳನ್ನೂ ಕೂಡ ತೆರೆಯಬಹುದು ಎಂದರ್ಥ. ರಾಜ್ಯ ಸರ್ಕಾರ ದೇವಸ್ಥಾನ, ಚರ್ಚ್, ಮಸೀದಿ ಎಲ್ಲವೂ ತೆರೆಯಲು ಅನುಮತಿ ನೀಡಿದೆ. ಇದಕ್ಕೆ ಯಾವುದೇ ಆತಂಕ, ಅಭ್ಯಂತರ, ಅಡ್ಡಿಯಿಲ್ಲ. ಎಲ್ಲದಕ್ಕೂ ಕೇಂದ್ರ ಸರ್ಕಾರದಿಂದ ಅನುಮತಿ ಬೇಕಾಗಿದೆ. ಹೀಗಾಗಿ ಮಾಲ್ ಓಪನ್ ಮಾಡಲು ಅನುಮತಿ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಕೇಂದ್ರದ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಾವು ಕೊರೊನಾ ಸೋಂಕಿನ ಜತೆ ಬದುಕಬೇಕಾಗಿದೆ. ಹೊರಗಿನ ರಾಜ್ಯಗಳಿಂದ ಜನ ಬರುತ್ತಿದ್ದಾರೆ. ಎಲ್ಲರಿಗೂ ಉಳಿಯಲು ವ್ಯವಸ್ಥೆ ಮಾಡಬೇಕಿದೆ. ಅವರ ವಸತಿಗೆ ಸಮಸ್ಯೆಯಾಗಿದೆ. ಇದರ ಬಗ್ಗೆಯೂ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಗಮನ ಸೆಳೆಯಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಎಲ್ಲದಕ್ಕೂ ಪರಿಹಾರ ನೀಡಲಾಗಿದೆ. ಘೋಷಣೆ ಆಗಿರುವ ಕಾರ್ಯಕ್ರಮಗಳಿಗೆ ಹಂತಹಂತವಾಗಿ ಹಣ ಬಿಡುಗಡೆ ಮಾಡಲಾಗ್ತಿದೆ. ಇನ್ಯಾವುದು ಘೋಷಣೆ ಮಾಡುವುದಿಲ್ಲ. ಶಕ್ತಿಮೀರಿ ದೇವರು ಮೆಚ್ಚುವಂತ ಕೆಲಸ ಮಾಡಿದ್ದೇವೆ. ಆದರೂ, ನಾವು ಘೋಷಣೆ ಮಾಡಿರೋ ಯೋಜನೆಗಳು ಜನರಿಗೆ ಇನ್ನು ರೀಚ್ ಆಗಿಲ್ಲ ಎಂಬ ದೂರು ಬರುತ್ತಲೇ ಇದೆ. ಘೋಷಣೆ ಮಾಡಿದ ಪರಿಹಾರ ಜನರಿಗೆ ತಲುಪುತ್ತಿದ್ದೆ. ಇದರಲ್ಲಿ ಯಾವುದೇ ತೊಂದರೆ ಆಗಿಲ್ಲ. ಹಂತ ಹಂತವಾಗಿ ಪರಿಹಾರ ಬಿಡುಗಡೆ ಮಾಡ್ತಿದ್ದೇವೆ. ಹಣಕಾಸು ಬಿಡುಗಡೆ ಮಾಡಿ ಕೆಲಸ ಪ್ರಾರಂಭ ಮಾಡಿದ್ದೇವೆ. ಬಹುತೇಕ ಜೂನ್ನಿಂದ ಎಲ್ಲದಕ್ಕೂ ಕೇಂದ್ರ ಅವಕಾಶ ಕಲ್ಪಿಸಬಹುದು ಎಂದಿದ್ದಾರೆ.