‘ರೈಲು ಹೋದ ಮೇಟೆ ಟಿಕೆಟ್ ತೆಗೆದುಕೊಂಡಂತೆ ಸಿದ್ದರಾಮಯ್ಯ ಹೇಳಿಕೆ’ ಎ.ಮಂಜು ವ್ಯಂಗ್ಯ
ಸಿದ್ರಾಮಣ್ಣ ಈಗ ಜೆಡಿಎಸ್ ನಾಯಕರ ಬಗ್ಗೆ ಮಾತನಾಡುತ್ತಿರುವುದು ರೈಲು ಹೋದ ಮೇಟೆ ಟಿಕೆಟ್ ತೆಗೆದುಕೊಂಡಂತೆ ಎಂದು ಮಾಜಿ ಸಚಿವ ಎ. ಮಂಜು ವ್ಯಂಗ್ಯವಾಡಿದರು.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಜೊತೆ ಹೋದ್ರೆ ಏನಾಗುತ್ತೆ ಅಂತಾ ಸಿದ್ರಾಮಣ್ಣನಿಗೆ ಮೊದಲೇ ಹೇಳಿದ್ದೆ. ಈಗ ಅವರಿಗೆ ಅರ್ಥ ಆಗಿದೆ, ನಾನೇನು ಹೇಳಿದ್ದೆ ಅಂತಾ. ರೇವಣ್ಣನ ಮಾತು ಕೇಳಿಕೊಂಡು ಅರಕಲಗೂಡಿನಲ್ಲೇ ಬಂದು ನನ್ನ ಬಗ್ಗೆ ಏಕವಚನ ಪ್ರಯೋಗಿಸಿದ್ದರು. ಸಿದ್ರಾಮಣ್ಣನಿಗೆ ಈಗ ಅದು ತಪ್ಪು ಎಂಬುದು ಅರ್ಥವಾಗಿದೆ. ಅದೇ ನನಗೆ ಸಂತೋಷ. ಸಿದ್ರಾಮಣ್ಣ ಈಗ ಮಾತನಾಡುತ್ತಿರೋದು ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಂಡಂತೆ. ಆಗ ಮಾತನಾಡಿ ಪ್ರಯೋಜನ ಇಲ್ಲ. ಸಿದ್ರಾಮಣ್ಣ ಅಥವಾ ಕಾಂಗ್ರೆಸ್ ಇಬ್ಬರಿಗೂ ಈಗ ಅರ್ಥವಾಗಿದೆ ದೇವೇಗೌಡರ ಕುಟುಂಬ ಏನೂ ಅಂತ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ತಮ್ಮ ಸಿದ್ಧಾಂತ ಬಲಿಕೊಟ್ಟಿರಲಿಲ್ಲ. ಹೈಕಮಾಂಡ್ ಆದೇಶದಿಂದಾಗಿ ಸುಮ್ಮನಿದ್ದರಷ್ಟೆ. ದೇವೇಗೌಡರ ಕುಟುಂಬದ ಬಗ್ಗೆ ಸಿದ್ರಾಮಣ್ಣನಿಗೆ ಗೊತ್ತಿತ್ತು. ದೇವೇಗೌಡರು ಯಾವತ್ತು ಅವರ ಮಗನನ್ನು ಮುಖ್ಯಮಂತ್ರಿ ಮಾಡಿಲ್ಲ, ಒಂದು ಬಾರಿ ಬಿಜೆಪಿ ಕುಮಾರಸ್ವಾಮಿರನ್ನು ಸಿಎಂ ಮಾಡಿತು. ಇನ್ನೊಮ್ಮೆ ಕಾಂಗ್ರೆಸ್ ಹೈಕಮಾಂಡ್ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿತು. ಆದ್ರೆ ಸಿಎಂ ಆದವರು ಹೇಗೆ ಇರಬೇಕು ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ಅದು ಬಿಟ್ಟು ಏಕಾಂಗಿ ನಿರ್ಧಾರ ತಗೊಂಡು ಎಲ್ಲರ ಅಸಮಾಧಾನಕ್ಕೆ ಕಾರಣರಾದರು. ಈಗ ಅತೃಪ್ತರು ಅಂತ ಇರೋರೆಲ್ಲ ಅವರಿಗೆ ಬೇಜಾರಾಗಿ ಬಂದಿರೋರು. ಅತೃಪ್ತರ ನಡೆಯೇ ತಿಳಿಸುತ್ತದೆ ಕುಮಾರಸ್ವಾಮಿ ಆಡಳಿತ ಹೇಗಿತ್ತು ಅಂತ ಎಂದು ವ್ಯಂಗ್ಯವಾಡಿದರು.
ದೇವೇಗೌಡರಿಗೆ ಅವರ ಕುಟುಂಬಸ್ಥರು ಮಾತ್ರ ರಾಜಕೀಯದಲ್ಲಿ ಇರಬೇಕು ಅನ್ನೋದೇ ಉದ್ದೇಶ. ಈಗ 17 ಕ್ಷೇತ್ರಗಳ ಉಪಚುನಾವಣೆಯಲ್ಲಿ ನೋಡಿ ಅವರ ಕುಟುಂಬದ ಎಷ್ಟುಜನರಿಗೆ ಟಿಕೆಟ್ ಕೊಡ್ತಾರೆ ಅಂತ ಎಂದರು.