ಸರ್ಕಾರದ ಬೊಕ್ಕಸ ತುಂಬಿಸಲು ಈ ದೇವಸ್ಥಾನಗಳ ಹುಂಡಿ ಮೇಲೆ ಬಿದ್ದಿದೆ ಸಿಎಂ ಕಣ್ಣು…!
ಕೋವಿಡ್-19 ನಿಂದಾಗಿ ಇಡೀ ರಾಜ್ಯವೇ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಸರ್ಕಾರದ ಬೊಕ್ಕಸ ಬರಿದಾಗಿದ್ದು ಅದನ್ನ ತುಂಬಿಸಲು ದೇವಾಲಯಗಳ ಹುಂಡಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ.
ಹೌದು… ಕೊರೊನಾ ಕರಿ ನೆರಳು ಎಲ್ಲೆಡೆ ಆವರಿಸಿದ್ದು ಸೋಂಕು ಹರಡುವುದನ್ನ ತಡೆಗಟ್ಟಲು ಎಲ್ಲೆಡೆ ಲಾಕ್ ಡೌನ್ ಜಾರಿ ಮಾಡಲಾಗಿದೆ. ಇದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದ್ದು ಇದನ್ನ ನಿಭಾಯಿಸಲು ಸರ್ಕಾರ ಹೊಸ ಯೋಜನೆಯೊಂದನ್ನ ರೂಪಿಸಿದೆ. ನೌಕರರ ಮೇ ತಿಂಗಳ ವೇತನ ನೀಡಿದರೂ ಜೂನ್ನಿಂದ ಎದುರಾಗುವ ಸಂಕಟವನ್ನು ಪರಿಹರಿಸಲು ಚಾಮುಂಡೇಶ್ವರಿ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ಹಲ ದೇವಾಲಯಗಳ ಹುಂಡಿ ಮೇಲೆ ಸರ್ಕಾರ ಕಣ್ಣು ಹಾಕಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಆದಾಯ ಮೂಲಗಳ ಮೇಲೆ ಕಣ್ಣಿಡುವಂತೆ ಪಡೆಯೊಂದನ್ನ ನಿರ್ಮಿಸಿದ್ದಾರೆ ಎನ್ನಲಾಗುತ್ತಿದೆ. ಈ ಪಡೆ ಮುಖ್ಯಮಂತ್ರಿಗಳ ಖಾಸಾ ಪಡೆಯಾಗಿದ್ದು ಅನುದಿನವೂ ಕಾರ್ಯ ನಿರ್ವಹಿಸುತ್ತಿದೆ.
ಇನ್ನೂ ಎ ಮತ್ತು ಬಿ ದರ್ಜೆ ನೌಕರರ ವೇತನ ಹಾಗೂ ಪಿಂಚಣಿಯಲ್ಲಿ ಶೇ.20ರಷ್ಟು ಕಡಿತ ಮಾಡುವುದು ಅನಿವಾರ್ಯ ಎಂದು ಈ ಪಡೆ ಸಲಹೆ ನೀಡಿದೆ. ಇದೇ ರೀತಿ ಖಾಸಗಿಯವರಿಂದ ಯಾವ್ಯಾವ ಹಂತಗಳಲ್ಲಿ ನೆರವು ಪಡೆಯಬಹುದು ಎಂಬುದರ ಬಗ್ಗೆಯೂ ಈ ಪಡೆ ಕುತೂಹಲಕಾರಿ ಸಲಹೆ ನೀಡಿದೆ. ರಾಜ್ಯದ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಯೋಜನೆ ಮತ್ತು ಯೋಜನೇತರ ಬಾಬ್ತಿಗೆ ನೀಡಿರುವ ಗಣನೀಯ ಪ್ರಮಾಣದ ಹಣವನ್ನು ಒದಗಿಸಲು ಸಾಧ್ಯವಾಗದೆ ಇರುವುದರಿಂದ ಆಯಾ ಬಾಬ್ತಿನ ಕೆಲ ಕ್ಷೇತ್ರಗಳಲ್ಲಿ ಖಾಸಗಿಯವರ ನೆರವು ಪಡೆಯುವುದು ಈ ಪಡೆಯ ಪ್ರಸ್ತಾಪವಾಗಿದೆ. ಹೀಗಾಗಿ ದೇವಾಲಯಗಳ ಹುಂಡಿಯ ಮೇಲೆ ನಿಗಾವಹಸಿಲಾಗಿದೆ ಎನ್ನಲಾಗುತ್ತಿದೆ.