ಸುಟ್ಟಗಾಯದ ಮೇಲೆ ಬರೆ ಎಳೆಯುತ್ತಿದೆ ಸರ್ಕಾರ; ಬಿತ್ತನೆ ಬೀಜಗಳ ಬೆಲೆ ಏರಿಕೆ
ಕೊರೋನಾ ಲಾಕ್ಡೌನ್ನಿಂದಾಗಿ ರೈತರು ಬೆಳೆದ ಬೆಳೆಗಳು ಮಾರುಕಟ್ಟೆ ಸೇರದೇ, ಬೀದಿಗಳಲ್ಲಿ ಕಸವಾಗಿ ಕೊಳೆತು ಹೋದವು. ತಿಂಗಳುಗಳ ಕಾಲ ಬೆವರಿಳಿಸಿ ದುಡಿದ ರೈತನ ಶ್ರಮ ಬೀದಿಯಲ್ಲಿ ವ್ಯರ್ಥವಾಗಿ, ರೈತರು ನಷ್ಟದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಬೆಳೆದ ಬೆಳೆಯ ಬಂಡವಾಳವೂ ಸಿಗದೇ ಕಂಗಾಲಾಗಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರ ರೈತರ ಗಾಯದ ಮೇಲೆ ಬರೆ ಎಳೆಯಲು ಮುಂದಾಗಿದೆ.
ಕಳೆದ ಬಾರಿ 1,250 ರೂ. ಇದ್ದ ಒಂದು ಕ್ವಿಂಟಾಲ್ ಇದ್ದ ಆಲೂಗಡ್ಡೆ ಬಿತ್ತನೆ ಬೀಜದ ಬೆಲೆಯೀಗ ದಿಢೀರ್ ಏರಿಕೆಯಾಗಿದೆ. 1,250ರಿಂದ ಸುಮಾರು ಒಂದು ಸಾವಿರ ಹೆಚ್ಚು ಅಂದರೆ 2,250 ರೂ. ಏರಿಕೆ ಕಂಡಿದೆ.
ಹಾಸನ ಜಿಲ್ಲೆಯ ಪ್ರಮುಖ ಬೆಳೆ ಆಲೂಗಡ್ಡೆ. ಕಳೆದ 10 ವರ್ಷಗಳ ಹಿಂದೆ 1ಲಕ್ಷದ 35 ಸಾವಿರ ಎಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿತ್ತು. ಈ ಬಾರಿ ಕೇವಲ 20 ರಿಂದ 25 ಸಾವಿರ ಎಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿದೆ. ಕಳೆದ ಬಾರಿ ದಿನಕ್ಕೆ 130 ಲಾರಿಯಷ್ಟು ಆಲೂಗೆಡ್ಡೆ ವ್ಯಾಪಾರವಾಗುತ್ತಿತ್ತು. ಈ ಬಾರಿ ಕೇವಲ ದಿನಕ್ಕೆ 30 ರಿಂದ 35 ಲಾರಿ ಆಲೂಗಡ್ಡೆ ಮಾರಾಟವಾಗುತ್ತಿದೆ. ಹೀಗಾಗಿ ಕಳೆದ ಬಾರಿಯ ದರವನ್ನೇ ನಿಗದಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ರೈತರ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಕೊರೋನಾ ವೈರಸ್ ಲಾಕ್ಡೌನ್ ಕಾರಣದಿಂದ ರಾಜ್ಯದ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್, ಜೆಡಿಎಸ್ ಮತ್ತು ರೈತ ಸಂಘಗಳ ಪ್ರತಿನಿಧಿಗಳು ಸಭೆ ಸೇರಿ ಚರ್ಚೆ ನಡೆಸಿದ್ದರು. ಹಲವು ವಿಷಯಗಳ ಕುರಿತು ಚರ್ಚೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಕುರಿತು ಸಭೆಯ ಅಂತ್ಯಕ್ಕೆ ತೀರ್ಮಾನ ಕೈಗೊಳ್ಳಲಾಯಿತು.
ಇನ್ನು, ಕೊರೋನಾ ದೇಶದ ಜನ ಜೀವನದ ಮೇಲೆ ಬಾರಿ ಪರಿಣಾಮ ಬೀರುತ್ತಿದೆ. ಲಾಕ್ ಡೌನ್ ನಿಂದಾಗಿ ಸಮಸ್ಯೆಗಳ ಉದ್ಬವಿಸುತ್ತಲೇ ಇವೆ. ಅದರಲ್ಲೂ ರೈತಾಪಿ ವರ್ಗಕ್ಕೆ ಕಷ್ಟಗಳ ಮೇಲೆ ಕಷ್ಟಗಳು ಬರುತ್ತಲೇ ಇವೆ. ಎಲ್ಲಾ ಬೆಳೆಗಾರರ ಪರಿಸ್ಥಿತಿ ಹೇಳ ತೀರದಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.