2024ರ ಚುನಾವಣೆಯಲ್ಲಿ ಕಾಂಗ್ರೆಸ್ ಬಲ 25ಕ್ಕೆ ಕುಸಿಯದಿರಲಿ: ಕಾಳಜಿಯಿಂದ ಪತ್ರ ಬರೆದಿದ್ದೇವೆ ಎಂಬ ಭಿನ್ನಮತೀಯರು!
2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಲವು ಈಗಿರುವ 52ರಿಂದ 25ಕ್ಕೆ ಕುಸಿಯದಿರಲಿ ಎಂಬ ಕಾಳಜಿಯಿಂದಾಗಿ ನಾಯಕತ್ವದ ಬದಲಾವಣೆಯಾಗಬೇಕು ಎಂದು ನಾವು ಪತ್ರ ಬರೆದಿದ್ದೇವೆ ಎಂದು ಕಾಂಗ್ರೆಸ್ ನಾಯಕತ್ವದಲ್ಲಿ ಭಿನ್ನಾಭಿಪ್ರಾಯ ಹೊಂದಿರುವ 23 ಹಿರಿಯ ನಾಯಕರು ಹೇಳಿದ್ದಾರೆ.
ಪಕ್ಷದಲ್ಲಿ ನಮಗೆ ದೊಡ್ಡ ಹುದ್ದೆ ಬೇಕು ಎಂಬ ಆಕಾಂಕ್ಷೆ ನಮಗಿಲ್ಲ. ನಾವು ಪಕ್ಷ ವಿರೋಧಿಗಳೂ ಅಲ್ಲ. ದೇಶಾದ್ಯಂತ ಕಾಂಗ್ರೆಸ್ ವರ್ಚಸ್ಸು ಇಳಿಯುತ್ತಿರುವ ಸಂದರ್ಭದಲ್ಲಿ ಪಕ್ಷವನ್ನು ಗಟ್ಟಿಗೊಳಿಸಬೇಕಿದೆ. ಮುಂದಿನ 2024ರ ಚುನಾವಣೆಯಲ್ಲಿ 272 ಸ್ಥಾನ ಗೆಲ್ಲುವುದು ನಮ್ಮ ಗುರಿ ಅದಕ್ಕಾಗಿ ಪಕ್ಷದಲ್ಲಿ ಮೂಲಭೂತ ಬದಲಾವಣೆಗಳನ್ನು ನಾವು ಬಯಸಿದ್ದೇವೆ ಎಂದು ಪತ್ರ ಬರೆದ ಹಿರಿಯ ನಾಯಕರು ತಿಳಿಸಿದ್ದಾರೆ.
ಕುಟುಂಬ ರಾಜಕಾರಣದ ಓಲೈಕೆಯನ್ನು ಬದಿಗಿಟ್ಟು ಪಕ್ಷವನ್ನು ಮುನ್ನಡೆಸಬೇಕಾಗಿದೆ. ಪಕ್ಷದ ಅಧ್ಯಕ್ಷರನ್ನು ಚುನಾವಣೆಯ ಮೂಲಕ ಆರಿಸಬೇಕು. ಅಧ್ಯಕ್ಷ ಚುನಾವಣೆಗೆ ಗಾಂಧಿ ಕುಟುಂಬದ ಸದಸ್ಯರು ಸ್ಪರ್ಧಿಸಿದರೆ ಅವರ ವಿರುದ್ಧ ತಾವು ಪೈಪೋಟಿ ನೀಡುವುದಾಗಿ ಭಿನ್ನಮತೀಯರ ಗುಂಪು ಹೇಳಿದೆ.
”ನಾವು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವುದು ಕೆಲವರಿಗೆ ದೊಡ್ಡ ಆಘಾತ ಉಂಟು ಮಾಡಿದೆ. ಆದರೆ ನಮ್ಮ ಅಭಿಪ್ರಾಯ ಸರಿಯಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ನ 23 ಹಿರಿಯ ನಾಯಕರ ಗುಂಪು ನಾಯಕತ್ವ ಬದಲಾವಣೆಗಾಗಿ ಕೋರಿ ಸೋನಿಯಾಗಾಂಧಿ ಅವರಿಗೆ ಪತ್ರ ಬರೆದಿದ್ದರು. ಈ ನಡುವೆ ಸೋನಿಯಾಗಾಂಧಿ ಅವರು ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಹಿರಿಯ ನಾಯಕರ ಪತ್ರದ ನಂತರ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಮುಂದಿನ ಪೂರ್ಣಕಾಲಿಕ ಅಧ್ಯಕ್ಷರ ನೇಮಕವಾಗುವವರೆಗೂ ಆರು ತಿಂಗಳ ಕಾಲಾವಧಿಗೆ ಸೋನಿಯಾ ಗಾಂಧಿ ಅವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ಗಡಿ ಸಮಸ್ಯೆ: ರಾಜತಾಂತ್ರಿಕ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವುದು ಅಗತ್ಯ: ಜೈಶಂಕರ್