ಕಾಂಗ್ರೆಸ್ಗೆ ಕೈಕೊಟ್ಟು ಬಿಜೆಪಿ ಸೇರಿದ ನಟಿ ಖುಷ್ಬೂ ವಿರುದ್ಧ 30 ಠಾಣೆಗಳಲ್ಲಿ ದೂರು ದಾಖಲು
ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ನಟಿ ಖುಷ್ಬೂ ಅವರ ವಿರುದ್ಧ 30 ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.
ಕಾಂಗ್ರೆಸ್ನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ತುಳಿಯಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಬೌದ್ಧಿಕವಾಗಿ ದುರ್ಬಲ ಪಕ್ಷ ಎಂದು ಆರೋಪಿಸಿರುವ ಖುಷ್ಬು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಸಿದ್ದಾರೆ. ಅವರ ಹೇಳಿಕೆ ವಿರುದ್ಧ ದೂರು ದಾಖಲಿಸಲಾಗಿದೆ.
ಖುಷ್ಬೂ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ ಅಂಗವಿಕಲರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ದೂರು ದಾಖಲು ಮಾಡಿದೆ.
ಚೆನ್ನೈ, ಕಾಂಜಿಪುರಂ, ಚೆಂಗಲ್ಪೇಟೆ, ಮಧುರೈ, ಕೊಯಮತ್ತೂರು, ತಿರುಪುರ್ ಸೇರಿದಂತೆ 30 ಠಾಣೆಗಳಲ್ಲಿ ದೂರು ದಾಖಲು ಮಾಡಿರುವುದಾಗಿ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆಯ ಕಾರ್ಯದರ್ಶಿ ಮುರಳೀಧರನ್ ಹೇಳಿದ್ದಾರೆ. ಅವುಗಳಲ್ಲಿ ಒಂದು ದೂರನ್ನು ನೇರವಾಗಿ ಚೆನ್ನೈ ಪೊಲೀಸ್ ಕಮಿಷನರ್ ಕಚೇರಿಯಲ್ಲೇ ದಾಖಲು ಮಾಡಲಾಗಿದೆ.
ನಟಿ ಖುಷ್ಬೂ ಅವರು ಓರ್ವ ರಾಜಕಾರಣಿಯಾಗಿದ್ದು, ಅವರಿಗೆ ಅವರ ವಿರೋಧಿಗಳನ್ನು ಅಥವಾ ಎದುರಾಳಿಗಳನ್ನು ಟೀಕಿಸುವ ಹಕ್ಕಿದೆ. ಆದರೆ ಅವರು ಯಾರನ್ನೋ ಟೀಕಿಸುವ ಭರದಲ್ಲಿ ಅಂಗವಿಕಲರನ್ನು ಹೀಗಳೆಯುವ ಹಕ್ಕು ಇಲ್ಲ. ಅವರು ಮಾಡಿರುವ ಪದ ಬಳಕೆಗಳು ಅಂಗವಿಕಲರ ಮಾನಸಿಕ ಸ್ಥೈರ್ಯ ಕುಸಿಯುವಂತಿದೆ. ಅಂಗವಿಕಲರನ್ನು ನಕಾರಾತ್ಮಕವಾಗಿ ನೋಡುವ ಆಂತಕವಿದೆ. ಇದು ನಿಜಕ್ಕೂ ಸಹಿಸಲು ಅಸಾಧ್ಯ. ಇಂತಹ ಕೃತ್ಯಗಳನ್ನು ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ಖಂಡಿಸುತ್ತದೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇದು ಮತ್ತೊಬ್ಬರಿಗೆ ಮಾದರಿಯಾಗಬೇಕು ಎಂದು ಮುರಳೀಧರನ್ ಅವರು ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಪ್ರಾಮಾಣಿಕವಾಗಿ ದುಡಿಯುವವರನ್ನು ತುಳಿಯಲಾಗುತ್ತಿದೆ: ನಟಿ ಖುಷ್ಬೂ ಸುಂದರ್