ಸಿ.ಪಿ ಯೋಗೇಶ್ವರ್ಗೆ ಮಂತ್ರಿಗಿರಿ ನೀಡದಂತೆ ಬಿಎಸ್ವೈ ಆಪ್ತರ ಲಾಬಿ!
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಒಂದು ವರ್ಷವೇ ಕಳೆದರೂ, ಸಚಿವ ಸಂಪುಟ ಸರ್ಕಸ್ ಮಾತ್ರ ನಡೆಯುತ್ತಲೇ ಇದೆ. ಸಿಎಂ ಯಡಿಯೂರಪ್ಪ ನಿನ್ನೆ ದೆಹಲಿಗೆ ತೆರಳಿ ಹೈಕಮಾಂಡ್ ಬಾಗಿಲು ತಟ್ಟಿದರೂ ಸಂಪುಟ ವಿಸ್ತರಣೆ ಅನುಮತಿ ದೊರೆತಿಲ್ಲ. ಈ ಮಧ್ಯೆ, ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ಗೆ ಸಚಿವ ಸ್ಥಾನ ನೀಡಬಾರದು ಎಂದು ಬಿಎಸ್ವೈ ಆಪ್ತರು ವಿರೋಧ ವ್ಯಕ್ತಪಡಿಸಿದ್ದಾರೆ.
ಯೋಗೇಶ್ವರ್ ಅವರನ್ನು ಎಂಎಲ್ಸಿ ಸ್ಥಾನಕ್ಕೆ ಆಯ್ಕೆ ಮಾಡಿದಾಗಲೇ, ಅವರಿಗೆ ಸಚಿವ ಸ್ಥಾನ ಫಿಕ್ಸ್ ಎಂದು ಹೇಳಲಾಗಿತ್ತು. ಅದಕ್ಕಾಗಿ ಅವರು ಹೈಕಮಾಂಡ್ ಮಟ್ಟದಲ್ಲೇ ಲಾಬಿ ನಡೆಸುತ್ತಿದ್ದಾರೆ. ಅಲ್ಲದೆ, ಸಿಎಂ ಬಿಎಸ್ವೈ ಹೈಕಮಾಂಡ್ಗೆ ನೀಡಿರುವ ಸಚಿವಾಕಾಂಕ್ಷಿಗಳ ಪಟ್ಟಿಯಲ್ಲಿಯೂ ಯೋಗೇಶ್ವರ್ ಹೆಸರು ಇದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪನವರ ಆಪ್ತ ವಲಯ ಯೋಗೇಶ್ವರ್ಗೆ ಸಚಿವ ಸ್ಥಾನ ನೀಡಬಬಾರದು ಎಂದು ವಿರೋಧ ವ್ಯಕ್ತಡಿಸಿದೆ ಎಂದು ತಿಳಿದು ಬಂದಿದೆ.
ಸಚಿವ ಸಂಪುಟದ ಮಾತುಕತೆ ಮುನ್ನೆಲೆಗೆ ಬರುತ್ತಿದ್ದಂತೆ ಬಿಜೆಪಿ ಶಾಸಕರು ಮತ್ತು ಸಚಿವರ ಓಡಾಟ ಹೆಚ್ಚಾಗಿದೆ. ತಮ್ಮ ತಮ್ಮ ಆಪ್ತ ವಲಯದಲ್ಲಿ ಎಲ್ಲರೂ ಸಭೆಗಳನ್ನು ನಡೆಸುತ್ತಿದ್ದಾರೆ. ಸಚಿವ ಸ್ಥಾನಕ್ಕಾಗಿ ಲಾಬಿಗಳೂ ನಡೆಯುತ್ತಿವೆ. ಆದರೆ, ಏನೇ ಆದರೂ, ರಾಜ್ಯದ ಬಿಜೆಪಿಯ ಜುಟ್ಟು ಹೈಕಮಾಂಡ್ ಕೈಯಲ್ಲಿದ್ದು, ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿರುವುದರಿಂದ, ಯಾರಿಗೆ ಮಂತ್ರಿಗಿರಿ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಸಂಪುಟ ವಿಸ್ತರಣೆಯೋ, ಪುನರ್ರಚನೆಯೋ? ಬಿಎಸ್ವೈಗೆ ತಿಳಿದಿಲ್ಲ ಹೈಕಮಾಂಡ್ ಗುಟ್ಟು!