ಭಗ್ನ ಪ್ರೇಮಿಯಿಂದ ಮದುವೆ ಮನೆಯಲ್ಲೇ ಗುಂಡಿನ ದಾಳಿ : ಪೊಲೀಸರ ಸಮ್ಮುಖದಲ್ಲಿ ನೆರವೇರಿದ ಮದ್ವೆ!
ಟೀಚರ್ ಹಿಂದೆ ಬಿದ್ದ ಭಗ್ನ ಪ್ರೇಮಿಯೊಬ್ಬ ಮದುವೆ ಮನೆಯಲ್ಲಿ ಗುಂಡಿನ ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅವರ್ಸಾ ಗ್ರಾಮದಲ್ಲಿ ನಡೆದಿದೆ.
ಗುಂಡು ಹಾರಿಸಿದ ವ್ಯಕ್ತಿ ವಜ್ರಳ್ಳಿ ಗ್ರಾಮದ ರೌಡಿ ಶೀಟರ್ ರಾಜೇಶ್ ಗಣಪತಿ ಗಾಂವಕರ್ ಎಂದು ಹೇಳಲಾಗಿದ್ದು, ಮದುವೆ ಮನೆಯಲ್ಲಿ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಇಂದು ಬೆಳ್ಳಂಬೆಳಿಗ್ಗೆ ಮದುವೆ ಮಂಟಪದಲ್ಲಿ ಪಟಾಕಿ ಹೊಡೆದಂತೆ ಸದ್ದು ಕೇಳಿ ಬಂದಿದ್ದು, ಗಾಬರಿಯಾದ ಮದುವೆ ಮನೆ ಮಂದಿ ಹೊರಗೆ ಬಂದು ನೋಡಿದಾಗ ಗುಂಡು ಹಾರಿಸಿರುವುದು ತಿಳಿದುಬಂದಿದೆ. ಅದೃಷ್ಟವಶಾತ್ ಯಾರೂ ಹೊರಗೆ ಬದರ ಕಾರಣ ಯಾರಿಗೂ ಅಪಾಯವಾಗಿಲ್ಲ. ಇನ್ನು ಆತ ಹೊಡೆದ ಗುಂಡು ಮನೆಯ ಕಿಟಕಿ ಭಾಗದಲ್ಲಿ ತಾಗಿದೆ.
ಸಕ್ಕಲ ಬ್ಯಾಣ ಎಂಬ ಊರಿನಲ್ಲಿ ವಧುವಿನ ಚಿಕ್ಕಮ್ಮನ ಮನೆಯಲ್ಲಿ ಮದುವೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಬಂದ ರೌಡಿ ರಾಜೇಶ್ ಗುಂಡು ಹಾರಿಸಿದ್ದಾನೆ. ಈ ಹಿಂದೆ ಅರಣ್ಯ ಅಧಿಕಾರಿಗಳಿಗೂ ಗುಂಡು ಹಾರಿಸಿದ್ದ ರಾಜೇಶ್ ಯುವತಿಯ ಹಿಂದೆ ಬಿದ್ದಿದ್ದನು. ಪ್ರೀತಿಸಲು ಪೀಡಿಸುತ್ತಿದ್ದ ರಾಜೇಶ್ ಯುವತಿ ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾಗುವುದನ್ನ ಸಹಿಸದೇ ಗುಂಡು ಹಾರಿಸಿದ್ದಾನೆ.
ಗುಂಡಿನ ದಾಳಿಯಿಂದ ಹೆದರಿದ ಕುಟುಂಬಕ್ಕೆ ಪೊಲೀಸ್ ಭದ್ರತೆ ನೀಡಲಾಗಿದ್ದು, ಮದುವೆ ಮಂಟಪದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ವಿವಾಹ ನೆರವೇರಿದೆ. ಗುಂಡಿನ ದಾಳಿಯಲ್ಲಿ ಯಾರಿಗೂ ಕೂಡ ಅಪಾಯವಾಗಿಲ್ಲ.