ಬೆಂಗಳೂರು ಸರ್ಕಾರ ನಡೆಸೋರ ಆಸ್ತಿಯೇ? ಅವರ ಕಾರುಗಳಷ್ಟೇ ಓಡಾಡಬೇಕೆ? ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ
ಜನವರಿ 26ರಂದು ರೈತರು ನಡೆಸಿದ ಜನಗಣರಾಜ್ಯೋತ್ಸವದ ಭಾಗವಾಗಿ ಬೆಂಗಳೂರಿಗೆ ಹೊರಟಿದ್ದ ಹಲವಾರು ರೈತರನ್ನೂ – ಟ್ರಾಕ್ಟರ್ಗಳನ್ನೂ ಮಾರ್ಗ ಮಧ್ಯದಲ್ಲೇ ಪೊಲೀಸರು ತಡೆದಿದ್ದಾರೆ. ರೈತರನ್ನು ಬೆಂಗಳೂರಿಗೆ ಏಕೆ ಬಿಡಲಿಲ್ಲ? ಇಲ್ಲಿ ಕೇವಲ ಮರ್ಸಿಡಿಸ್ ಬೆಂಜ್, ದೊಡ್ಡ ಕಾರು, ಸಾಹುಕಾರರ ಕಾರುಗಳೇ ಓಡಾಡಬೇಕಾ? ಕೆಂಪೇಗೌಡ ಕಟ್ಟಿದ ಬೆಂಗಳೂರು ರಾಜ್ಯದ ಜನತೆಯ ಆಸ್ತಿ. ಬೆಂಗಳೂರು ಬರೀ ಸರ್ಕಾರ ನಡೆಸೋರ ಆಸ್ತಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದಲ್ಲಿ ಇರುವವರೆಲ್ಲ ರೈತರ ಮಕ್ಕಳಲ್ವಾ? ನಾನು ರೈತರ ಮಗ ಎಂದು ಹಸಿರು ಶಾಲು ಹಾಕಿಕೊಂಡು ಸರ್ಕಾರ ಮಾಡುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದವರು ರೈತರನ್ನು ಬೆಂಗಳೂರಿಗೆ ಬರಲು ಬಿಟ್ಟಿಲ್ಲ. ಬೆಂಗಳೂರಲ್ಲಿ ರೈತರ ಟ್ರ್ಯಾಕ್ಟರ್ ಓಡಾಡಲಿ. ರೈತರು ಬೆಂಗಳೂರಲ್ಲಿ ಪ್ರತಿಭಟನೆ ಮಾಡಲಿ. ಅದರಲ್ಲಿ ಏನು ತಪ್ಪಿದೆ? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ರೈತರು ಕಾನೂನು ಭಂಗ ಮಾಡಿರಲಿಲ್ಲ. ದೆಹಲಿಯಲ್ಲಿಯೇ ಟ್ರಾಕ್ಟರ್ ಪರೇಡ್ ನಡೆಸಲು ಬಿಟ್ಟಿದ್ದಾರೆ. ಇವರು ಯಾಕೆ ಬಿಟ್ಟಿಲ್ಲ. ರೈತರು ಏಕೆ ಒಳಗೆ ಬರಬಾರದು? ಅವರೆಲ್ಲಾ ಇಲ್ಲದೆ ಬೆಂಗಳೂರಲ್ಲಿ ಇವರು ಊಟ ಮಾಡುತ್ತಿದ್ದರಾ? ಎಂದು ಪ್ರಶ್ನಿಸಿದ್ದಾರೆ.