ದೆಹಲಿ ಪ್ರತಿಭಟನೆಗೆ ಟ್ರ್ಯಾಕ್ಟರನಲ್ಲಿ ತೆರಳುತ್ತಿದ್ದ ರೈತನನ್ನು ನದಿಯಲ್ಲಿ ಬೆನ್ನಟ್ಟಿದ್ರಾ ಪೋಲೀಸರು..?
ದೆಹಲಿಯಲ್ಲಿ ರೈತರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಸಾಕಷ್ಟು ವಿಚಾರಗಳು ಬಯಲಾಗುತ್ತಿದ್ದಂತೆ ಇತ್ತ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ. ಪೊಲೀಸ್ ಸ್ಕಾರ್ಪಿಯೋ ಟ್ರ್ಯಾಕ್ಟರ್ ಅನ್ನು ಬೆನ್ನಟ್ಟುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನವರಿ 26 ರಂದು ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಭಾಗವಹಿಸಲು ಹೊರಟಿದ್ದ ರೈತನೊಬ್ಬನನ್ನು ಉತ್ತರ ಪ್ರದೇಶ ಪೊಲೀಸರು ಬೆನ್ನಟ್ಟಿರುವುದನ್ನು ಈ ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು, “ಯುಪಿ ಪೋಲಿಸ್ ರಿಪಬ್ಲಿಕ್ ದಿನದ ಮೆರವಣಿಗೆಗೆ ಹೋಗುತ್ತಿರುವ ರೈತನ ಟ್ರಾಕ್ಟರ್ ಅನ್ನು ಬೆನ್ನಟ್ಟಿದ್ದಾರೆ. ಟ್ರಾಕ್ಟರ್ ಚಾಲಕ ರೈತ ” ಎಂದು ಬರೆಯಲಾಗಿದೆ.
ಪೋಲೀಸರು ಬೆನ್ನಟ್ಟಿದ್ದರಿಂದ ಟ್ರ್ಯಾಕ್ಟರ್ನಲ್ಲಿದ್ದ ವ್ಯಕ್ತಿ ನದಿಯಲ್ಲಿ ಮತ್ತು ದಂಡೆಯ ಮೇಲೆ ಅಪಾಯಕಾರಿಯಾಗಿ ಟ್ರ್ಯಾಕ್ಟರ್ ಓಡಿಸುತ್ತಾನೆ. ವೀಡಿಯೊದ ಕೊನೆಯಲ್ಲಿ ವ್ಯಕ್ತಿ ತನ್ನ ಟ್ರ್ಯಾಕ್ಟರ್ ಅನ್ನು ಆಳವಾದ ನದಿಯೊಳಗೆ ಓಡಿಸುತ್ತಾನೆ. ಸಿಟ್ಟಾದ ಪೊಲೀಸರು ಸ್ಕಾರ್ಪಿಯೋದಿಂದ ಹೊರಬಂದು ಟ್ರ್ಯಾಕ್ಟರ್ ನದಿಯ ಇನ್ನೊಂದು ತುದಿಯನ್ನು ತಲುಪುವುದನ್ನು ಅಸಹಾಯಕರಾಗಿ ನೋಡುವುದು ವೀಡಿಯೋದಲ್ಲಿದೆ.
ಆದರೆ ದೆಹಲಿಯಲ್ಲಿ ನಡೆದ ಟ್ರಾಕ್ಟರ್ ರ್ಯಾಲಿಗೂ ಈ ವಿಡಿಯೋಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ತನಿಖೆಯಿಂದ ಬಯಲಾಗಿದೆ. ಈ ಘಟನೆ ಜನವರಿ 20 ರಂದು ನಡೆದಿದ್ದು, ಉತ್ತರಾಖಂಡ ಪೊಲೀಸರು ಗಣಿಗಾರಿಕೆ ಮಾಫಿಯಾದಲ್ಲಿ ಬಾಗಿಯಾಗಿದ್ದ ವ್ಯಕ್ತಿಯನ್ನು ಬೆನ್ನಟ್ಟಿದ್ದ ವೇಳೆ ಈ ವೀಡಿಯೋ ಸೆರೆಹಿಡಿಯಲಾಗಿದೆ.
ಈ ಘಟನೆಯ ಬಗ್ಗೆ ಜನವರಿ 22 ರಂದು “ಝೀ ನ್ಯೂಸ್” ವರದಿಯನ್ನು ಪ್ರಕಟಿಸಿತ್ತು. ಮಾತ್ರವಲ್ಲದೇ “ಜನವರಿ 20 ರಂದು ಉತ್ತರಾಖಂಡದ ಉದಮ್ ಸಿಂಗ್ ಜಿಲ್ಲೆಯ ಬಾಜ್ಪುರದಲ್ಲಿ ಚೇಸ್ ನಡೆದಿದ್ದು ನಿಜ. ನಾವು ವೈರಲ್ ವೀಡಿಯೊವನ್ನು ಉತ್ತರಾಖಂಡ ಪೊಲೀಸ್ ವಕ್ತಾರರಿಗೆ ಕಳುಹಿಸಿದ್ದೇವೆ. ವೈರಲ್ ವಿಡಿಯೋದಲ್ಲಿ ನೋಡಿದ ಟ್ರ್ಯಾಕ್ಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅವರು ನಮಗೆ ತಿಳಿಸಿದ್ದಾರೆ” ಎಂದು ಇಂಡಿಯಾ ಟುಡೇನ ಸ್ಥಳೀಯ ವರದಿಗಾರ ದೃಢಪಡಿಸಿದ್ದಾರೆ.
ಆದ್ದರಿಂದ, ಜನವರಿ 26 ರ ಟ್ರಾಕ್ಟರ್ ರ್ಯಾಲಿಯಲ್ಲಿ ಭಾಗವಹಿಸಲು ದೆಹಲಿಗೆ ತೆರಳುತ್ತಿದ್ದ ರೈತನೊಬ್ಬನನ್ನು ಪೋಲೀಸರು ಬೆನ್ನಟ್ಟಿಲ್ಲ. ಬದಲಿಗೆ ಉತ್ತರಖಂಡ ಪೊಲೀಸರು ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ವ್ಯಕ್ತಿಯನ್ನು ಬೆನ್ನಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿದೆ.