ಸಚಿನ್, ಮಂಗೇಶ್ಕರ್ರಿಂದ ಟ್ವೀಟ್ ಮಾಡಿಸಿದ ಸರ್ಕಾರ, ಅವರ ಮರ್ಯಾದೆ ಕಳೆದಿದೆ: ರಾಜ್ ಠಾಕ್ರೆ
ರೈತ ಪ್ರತಿಭಟನೆಯ ವಿಚಾರದಲ್ಲಿ ಸರ್ಕಾರವನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್, ಲತಾ ಮಂಗೇಶ್ಕರ್ರಂತಹ ಸೆಲೆಬ್ರಟಿಗಳಿಂದ ಟ್ವೀಟ್ ಮಾಡಿಸಿರುವ ಸರ್ಕಾರ, ಅವರ ಗೌರವ, ಮರ್ಯಾದೆ ಹಾಳುಮಾಡಿದೆ ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ(ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ಪ್ರತಿಭಟನೆ ಸರ್ಕಾರದ ನೀತಿಗಳ ವಿರುದ್ಧವೇ ಹೊರತು ದೇಶದ ಹಿತಾಸಕ್ತಿಯ ವಿರುದ್ಧವಾಗಿತ್ತು. ಅದರೆ, ಸರ್ಕಾರ ತನ್ನ ನಿಲುವಿನ ಪರವಾಗಿ ಭಾರತ ರತ್ನ ಪುರಸ್ಕೃತರಾದ ಸಚಿನ್, ಲತಾ ಮಂಗೇಶ್ಕರ್ ಅವರನ್ನು ಬಳಿಸಿಕೊಂಡಿದೆ. ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಸೆಲೆಬ್ರಟಿಗಳಿಂದ ಟ್ವೀಟ್ ಮಾಡಿಸಿ, ಅವರ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದಾಗಿತ್ತು ಎಂದು ಅವರು ಹೇಳಿದ್ದಾರೆ.
ರೈತರು ಪ್ರತಿಭಟನೆ ಮಾಡುತ್ತಿರುವ ಕೃಷಿ ನೀತಿಗಳ ವಿರುದ್ಧವೇ ಹೊರತು ದೇಶದ ವಿರುದ್ಧವಲ್ಲ. ಅಲ್ಲದೆ, ಚೀನಾ, ಪಾಕಿಸ್ಥಾನಕ್ಕೆ ಸಂಬಂಧಿಸಿದ್ದೂ ಅಲ್ಲ. ಇದು ರೈತರ ಹಿತಾಸಕ್ತಿಯ ಹೋರಾಟ. ಆದರೆ, ಸರ್ಕಾರದ ಪರವಾಗಿ ಟ್ವೀಟ್ ಮಾಡಿದ ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಇಂದು ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಆಗುತ್ತಿದ್ದಾರೆ. ಸರ್ಕಾರ ಅವರಿಗೆ ಅವಮಾನ ಮಾಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಚಿನ್ ಭಾರತ ರತ್ನ ಪ್ರಶಸ್ತಿಗೆ ಅರ್ಹರಲ್ಲ: ಆರ್ಜೆಡಿ ನಾಯಕ ಶಿವಾನಂದ್ ತಿವಾರಿ
ರೈತ ಹೋರಾಟವನ್ನು ಬೆಂಬಲಿಸಿ ಅಂತಾರಾಷ್ಟ್ರೀಯ ಸೆಲೆಬ್ರಟಿಗಳು ಟ್ವೀಟ್ ಮಾಡಿದ್ದರು. ಇದರ ವಿರುದ್ಧ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಐಟಿ ಸೆಲ್ ಸೆಲೆಬ್ರಟಿಗಳಿಗೆ ಕಂಟೆಂಟ್ ಕೊಟ್ಟು ಟ್ವೀಟ್ ಮಾಡಿಸಿತ್ತು.
ಸರ್ಕಾರದ ಪರವಾಗಿ ಟ್ವೀಟ್ ಮಾಡಿದ್ದ ಸಚಿನ್ ತೆಂಡೂಲ್ಕರ್, ಭಾರತದ ಸಾರ್ವಭೌಮತೆ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೊರಗಿನ ಶಕ್ತಿಗಳು ಭಾರತದ ಆಂತರಿಕ ವಿಚಾರದಲ್ಲಿ ಪ್ರೇಕ್ಷಕರಾಗಬಹುದೇ ಹೊರತು ಭಾಗಿದಾರರಾಗಲು ಸಾಧ್ಯವಿಲ್ಲ. ಭಾರತೀಯರಿಗೆ ಭಾರತ ಏನು ಎಂದು ಗೊತ್ತಿದೆ, ಭಾರತಕ್ಕೆ ಪೂರಕವಾದ ರೀತಿಯಲ್ಲಿ ನಿರ್ಧರಿಸುತ್ತಾರೆ. ಇಲ್ಲಿ ಭಾರತೀಯರಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಇರೋಣ, ಸುಳ್ಳು ಪ್ರಚಾರಗಳಿಗೆ ಬಲಿಯಾಗುವುದು ಬೇಡ ಎಂದು ಹೇಳಿದ್ದರು.
ಸಚಿನ್ ಸೇರಿದಂತೆ ಹಲವರು ಸರ್ಕಾರವನ್ನು ಸಮರ್ಥಿಸಿಕೊಂಡಿದ್ದು, ಅವರ ವಿರುದ್ದ ನೆಟ್ಟಿಗರು ಟ್ರೋಲ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: BJPಗೆ ಬಹಿರಂಗ ಎಚ್ಚರಿಕೆ: ಗ್ರಾಮಕ್ಕೆ ಪ್ರವೇಶಿಸಿದರೆ ನಿಮ್ಮ ಜೀವಕ್ಕೆ ನೀವೇ ಜವಾಬ್ದಾರರು!