ಮೈಸೂರು JDSನಲ್ಲಿ ಭುಗಿಲೆದ್ದ ಆಕ್ರೋಶ; ಜಿ.ಟಿ ದೇವೇಗೌಡರನ್ನು ಉಚ್ಛಾಟಿಸುವಂತೆ ಒತ್ತಾಯ!
ಮೈಸೂರು ಮೇಯರ್ ಚುನಾವಣೆಯಲ್ಲಿ ಮತದಾನ ಮಾಡದೇ ದೂರ ಉಳಿದ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಮತ್ತು ವಿಧಾನ ಪರಿಷತ್ ಸದಸ್ಯರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಇಲ್ಲವಾದರೆ, ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಜೆಡಿಎಸ್ನ ಹಲವಾರು ನಾಯಕರು ಬೆದರಿಕೆ ಒಡ್ಡಿದ್ದಾರೆ.
ಬಿಜೆಪಿ ಪರ ಒಲವು ವ್ಯಕ್ತಪಡಿಸುವ ಮೂಲಕ ಜಿ.ಟಿ.ದೇವೇಗೌಡ ಊಟ ಮಾಡಿದ ಮನೆಗೆ ದ್ರೋಹ ಎಸಗಿದ್ದಾರೆ. ಇವರು ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಗೆದ್ದು ಬರುವ ಮೂಲಕ ಸಾಮರ್ಥ್ಯ ಸಾಬೀತುಪಡಿಸಲಿ ಎಂದು ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಚೆಲುವೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಬೀರಿಹುಂಡಿ ಬಸವಣ್ಣ ಹಾಗೂ ಬೆಳವಾಡಿ ಶಿವಮೂರ್ತಿ ಅವರು ಒತ್ತಾಯಿಸಿದ್ದಾರೆ.
ಜಿ.ಟಿ ದೇವೇಗೌಡ ಅವರನ್ನು ತಂದೆಯ ಸಮಾನರಾಗಿ ಭಾವಿಸಿದ್ದೆ. ಆದರೆ, ಅವರು ನನಗೇ ದ್ರೋಹ ಮಾಡಿದರು. ಮತ ಹಾಕಲು ಬರುತ್ತೇನೆ ಎಂದು ಭರವಸೆ ನೀಡಿದ್ದ ಅವರು ಕೊನೆ ಗಳಿಗೆಯಲ್ಲಿ ಕೈಕೊಟ್ಟರು ಎಂದು ಮಾದೇಗೌಡ ಬೇಸರ ವ್ಯಕ್ತಪಡಿಸಿದರು.
ಮೇಯರ್ ಚುನಾವಣೆಯಲ್ಲಿ ಮತ ಹಾಕದ ಮೇಲೆ ಅವರು ಪಕ್ಷದಲ್ಲಿದ್ದಾರೆ ಎಂದು ನಾವು ಭಾವಿಸಿಲ್ಲ. ಜಿ.ಟಿ ದೇವೇಗೌಡ ಅವರಿಗೆ ಮರ್ಯಾದೆ ಇದ್ದರೆ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬೆಳವಾಡಿ ಶಿವಮೂರ್ತಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಸಿಡಿದ ತನ್ವೀರ್; ಅಮಾನತಿಗೂ ಸಿದ್ದ ಎಂದ ಕಾಂಗ್ರೆಸ್ ಶಾಸಕ!