ಕೇರಳಕ್ಕೆ BJP ಪ್ರಣಾಳಿಕೆ: ವರ್ಷಕ್ಕೆ 06 ಉಚಿತ LPG ಸಿಲಿಂಡರ್; ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಭರವಸೆ!
ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಕೇಸರಿ ಪಕ್ಷದ ಆಡಳಿತದಲ್ಲಿಯೇ ಇಂಧನ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಕೇರಳ ವಿಧಾನಸಭಾ ಚುನಾವಣೆ ಎದುರಾಗಿದ್ದು, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕೇರಳ ಜನರಿಗೆ ವರ್ಷಕ್ಕೆ 06 ಎಲ್ಪಿಜಿ ಸಿಲಿಂಡರ್ಗಳನ್ನು ಉಚಿತವಾಗಿ ನೀಡುವುದಾಗಿ ಆಶ್ವಾಸನೆ ನೀಡಿದೆ.
ತಿರುವನಂತಪುರದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, “ಮೋದಿ ಜೊತೆ ಹೊಸ ಕೇರಳ” ಎಂಬ ಶೀರ್ಷಿಕೆಯೊಂದಿಗೆ ಹಲವಾರು ಯೋಜನೆಗಳ ಭರವಸೆಯನ್ನು ಘೋಷಿಸಿದ್ದಾರೆ.
ಕೇರಳದಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದರೆ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬಗಳಿಗೆ ಪ್ರತಿ ವರ್ಷವೂ 06 ಎಲ್ಪಿಚಿ ಸಿಲಿಂಡರ್ಗಳನ್ನು ಉಚಿತವಾಗಿ ನೀಡಲಾಗುವುದು. ಕಲ್ಯಾಣ ಪಿಂಚಿಣಿಯನ್ನು 3,500 ರೂಗೆ ಏರಿಸುತ್ತೇವೆ ಎಂದು ಭರವಸೆ ನೀಡಿದೆ.
ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್. ಕುಟುಂಬದ ಒಬ್ಬರಿಗೆ ಉದ್ಯೋಗ, ಭೂಮಿ ಇರದ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳಿಗೆ ಭೂಮಿಯನ್ನೂ ನೀಡಲಾಗುವುದು ಎಂದು ಕೇಸರಿ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ಅಲ್ಲದೆ, ಶಬರಿಮಲೆ ಆಚರಣೆಯನ್ನು ರಕ್ಷಿಸಲಾಗುವುದು. ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತರುತ್ತೇವೆ ಎಂದು ಬಿಜೆಪಿ ಹೇಳಿದೆ.
ಕೇರಳದಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
Read Also: ಕೇರಳ ಚುನಾವಣೆ: LDF ವಿರುದ್ದ ಕಾಂಗ್ರೆಸ್-BJP ಒಳಮೈತ್ರಿ? CPI(M) ಗಂಭೀರ ಆರೋಪದ ಹಿಂದಿವೆ ಹಲವು ಪ್ರಶ್ನೆಗಳು!