‘ನನ್ನ ಹೇಳಿಕೆಗಳಿಗೆ ಈಗಲೂ ಬದ್ಧಳಾಗಿದ್ದೇನೆ’ ಸಿಡಿ ಸಂತ್ರಸ್ತೆಯಿಂದ ಮತ್ತೊಂದು ವಿಡಿಯೋ..!
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಸಂತ್ರಸ್ತೆ ಮತ್ತೆ ವಿಡಿಯೋ ಬಿಡುಗಡೆ ಮಾಡಿದ್ದಾಳೆ. ನಿನ್ನೆಯಷ್ಟೇ ಸಿಡಿ ಯುವತಿ ಯು ಟರ್ನ್ ಹೊಡೆದಿದ್ದಾಳೆ ಎನ್ನುವ ಸುಳ್ಳು ಹೇಳಿಕೆಗಳು ಹರಿದಾಡುತ್ತಿತ್ತು. ಅದಕ್ಕೆ ಸ್ಪಷ್ಟನೆ ಕೊಟ್ಟ ಯುವತಿ ” ತಾನು ತನ್ನ ಹೇಳಿಕೆ ಮೇಲೆ ಬದ್ಧಳಾಗಿದ್ದೇನೆ” ಎಂದಿದ್ದಾಳೆ.
ಇಂದು ಸಿಡಿ ಯುವತಿ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದಾಳೆ. ವಿಡಿಯೋದಲ್ಲಿ, “ನಾನು ಎಸ್ಐಟಿ ಮುಂದೆ ಹೋಗಿದ್ದು ನಿಜ. ಆದರೆ ಯಾವುದೇ ಹೇಳಿಕೆ ಕೊಟ್ಟಿಲ್ಲ. ಕೆಲವು ದಾಖಲೆಗಳನ್ನು ಕೊಡಗು ಹೋಗಿದ್ದೆ” ಎಂದು ಸ್ಪಷ್ಟನೆ ಕೊಟ್ಟಿದ್ದಾಳೆ.
ಜೊತೆಗೆ “ನನ್ನ ಹೇಳಿಕೆಗಳಿಗೆ ಈಗಲೂ ಬದ್ಧಳಾಗಿದ್ದೇನೆ. ನನ್ನ ಮರು ಹೇಳಿಕೆ ಸುದ್ದಿಗಳೆಲ್ಲ ಸುಳ್ಳು. ನಾನು ಯೂ ಟರ್ನ್ ಹೊಡೆದಿಲ್ಲ” ಎಂದು ವಿಡಿಯೋ ಮೂಲಕ ಯುವತಿ ಹೇಳಿಕೆ ನೀಡಿದ್ದಾಳೆ. ಮಾತ್ರವಲ್ಲದೇ ಯುವತಿ ಪರ ವಕೀಲರಾದ ಜಗದೀಶ್ ಹಾಗೂ ಸೂರ್ಯ ಮುಕುಂದರಾಜ್ ಕೂಡ ಇದೇ ಹೇಳಿಕೆಯನ್ನು ಕೊಟ್ಟಿದ್ದಾರೆ.
“ನಾನು ಎಸ್ಐಟಿ ಮುಂದೆ ಕೆಲವು ಸಾಕ್ಷ್ಯಗಳನ್ನು ನೀಡಲು ಹೋಗಿದ್ದೆ. ಆದರೆ, ವಾಪಸ್ ಬಂದು ನೋಡಿದರೆ ಹೇಳಿಕೆ ಬದಲಾಯಿಸಲಿದ್ದೇನೆ ಎಂದು ವರದಿಗಳು ಬರುತ್ತಿವೆ. ನಾನು ಲಿಖಿತವಾಗಿ ಯಾವುದೇ ಸಹಿ ಮಾಡಿ ಹೇಳಿಕೆ ಕೊಟ್ಟಿಲ್ಲ” ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.
“ನನ್ನನ್ನು ಮತ್ತು ನನಗೆ ಸಂಬಂಧಿಸಿದವರನ್ನು ಎಸ್ಐಟಿ ವಿಚಾರಣೆ ನಡೆಸಿದಂತೆ ಆರೋಪಿ ರಮೇಶ್ ಜಾರಕಿಹೊಳಿ ಮತ್ತು ಅವರಿಗೆ ಸಂಬಂಧಿಸಿದವರನ್ನು ವಿಚಾರಣೆ ನಡೆಸಬೇಕು ಎಂದು ಕೇಳಿಕೊಳ್ಳುತ್ತೇನೆ” ಎಂದು ಸಿಡಿ ಸಂತ್ರಸ್ತೆ ಹೇಳಿದ್ದಾಳೆ.