ಆರೋಗ್ಯಾಧಿಕಾರಿ ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿದ್ರೂ ಸಹಾಯ ಮಾಡದ ಶಾಸಕ…!
ರಸ್ತೆ ಅಪಘಾತದಲ್ಲಿ ಆರೋಗ್ಯಾಧಿಕಾರಿಯೊಬ್ಬರು ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿದ್ರೂ ಸಹಾಯ ಮಾಡದ ಶಾಸಕನ ವಿರುದ್ಧ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ಕೊರೊನಾ ಡ್ಯೂಟಿ ಮುಗಿಸಿ ಬರುತ್ತಿದ್ದಾಗ ಹಿರಿಯ ಆರೋಗ್ಯಾಧಿಕಾರಿ ಡಾ.ರಮೇಶ್ ಕುಮಾರ್ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಅರ್ಧಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಒದ್ದಾಟ ನಡೆಸಿದ ಕೊರೊನಾ ವಾರಿಯರ್ ರಮೇಶ್ ಕುಮಾರ್ ಸಹಾಯಕ್ಕೆ ತರೀಕೆರೆ ಶಾಸಕ ಡಿ.ಎಸ್ ಸುರೇಶ್ ಮುಂದಾಗಲಿಲ್ಲ.
ರಮೇಶ್ ನೋವಿನಿಂದ ಬಳಲುತ್ತಿದ್ದರು ಶಾಸಕ ಡಿ.ಎಸ್ ಸುರೇಶ್ ಮಾತ್ರ ಕಾರಿನಿಂದ ಕೆಳಗಿಳಿಯಲೇ ಇಲ್ಲ. ಶಾಸಕ ಸುರೇಶ್ ನಡೆಗೆ ಸ್ಥಳದಲ್ಲಿಯೇ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ. ಸ್ಥಳೀಯರೇ ಅಪಘಾತಕ್ಕೊಳಗಾದ ಆರೋಗ್ಯಾಧಿಕಾರಿ ಸಹಾಯಕ್ಕೆ ಮುಂದಾಗಿದ್ದಾರೆ. ಕೊನೆಗೆ ಅಂಬುಲೆನ್ಸ್ ಬರುವಷ್ಟರಲ್ಲಿ ರಮೇಶ್ ಕುಮಾರ್ ಸಾವನ್ನಪ್ಪಿದ್ದರು. ಪ್ರಾಣ ಹೋಗ್ತಿದ್ರೂ ಮಾನವೀಯತೆ ತೋರದ ಶಾಸಕರ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ.
ಒಂದು ವೇಳೆ ಅಂಬುಲೆನ್ಸ್ ಬರುವ ಮುನ್ನವೇ ಶಾಸಕರು ತಮ್ಮ ಕಾರಿನಲ್ಲೇ ಆರೋಗ್ಯಾಧಿಕಾರಿಯನ್ನು ಆಶ್ಪತ್ರೆಗೆ ದಾಖಲಿಸಿದ್ದರೆ ರಮೇಶ್ ಪ್ರಾಣ ಉಳಿಸಬಹುದಿತ್ತು. ಆದರೆ ಶಾಸಕರು ಏನಾಗಿದೆ ಅನ್ನೋ ವಿಚಾರಣೆಗಾಗಿಯೂ ಕಾರಿನಿಂದ ಕೆಳಗಿಳಿಯಲಿಲ್ಲ. ಕಣ್ಮುಂದೆ ಪ್ರಾಣ ಹೋಗುತ್ತಿದ್ದರೂ ಗಮನಿಸಿದ ಶಾಸಕ ಜನಸಾಮಾನ್ಯರ ಬಗ್ಗೆ ಯಾವ ಕಾಳಜಿ ತೋರಿಸುತ್ತಾರೆ? ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.