ಹಿರಿಯ ವಕೀಲರಿಗೆ ಕಚ್ಚಿದ 2 ಜರ್ಮನ್ ಶೇಪರ್ಡ್ಗಳಿಗೆ ಮರಣ ದಂಡನೆ ಶಿಕ್ಷೆ..!
ಎರಡು ನಾಯಿಗಳು ಹಿರಿಯ ವಕೀಲರಿಗೆ ಕಚ್ಚಿ ತಮ್ಮ ಮಾಲಿಕನನ್ನು ಪೇಚಿಗೆ ಸಿಲುಕಿಸಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ನಾಯಿ ಕಚ್ಚಿದ್ದಕ್ಕೆ ವಕೀಲರು ನಾಯಿ ಮಾಲೀಕರನ್ನು ನ್ಯಾಯಾಲಯಕ್ಕೆ ಎಳೆದಿದ್ದಾರೆ.
ಕಳೆದ ತಿಂಗಳು ಕರಾಚಿಯ ಡಿಫೆನ್ಸ್ ಹೌಸಿಂಗ್ ಅಥಾರಿಟಿ ಪ್ರದೇಶದಲ್ಲಿ ಬೆಳಗ್ಗಿನ ವಾಕಿಂಗ್ ವೇಳೆ ಹಿರಿಯ ವಕೀಲ ಮಿರ್ಜಾ ಅಖ್ತರ್ ಅಲಿ ಅವರ ಮೇಲೆ ಅದೇ ಪ್ರದೇಶದ ನಿವಾಸಿ ಹುಮಾಯುನ್ ಖಾನ್ ಅವರ ಎರಡು ಜರ್ಮನ್ ಶೇಪರ್ಡ್ ಶ್ವಾನಗಳು ದಾಳಿ ಮಾಡಿದ್ದವು. ನಾಯಿ ದಾಳಿಯಿಂದ ತೀವ್ರ ಗಾಯಗೊಂಡ ವಕೀಲರು ನಾಯಿ ಮಾಲೀಕರ ಮೇಲೆ ದೂರು ದಾಖಲಿಸಿದ್ದಾರೆ. ಈ ಘಟನೆ ಈಗ ಶ್ವಾನಗಳ `ಮರಣ ದಂಡನೆ’ ಶಿಕ್ಷೆಯ ತನಕ ಮುಟ್ಟಿದೆ. ಗಾಯಗೊಂಡಿರುವ ವಕೀಲ ಮತ್ತು ಶ್ವಾನದ ಮಾಲಿಕರ ನಡುವೆ ನಡೆದ ಒಪ್ಪಂದದಲ್ಲಿ ಇಂತಹದ್ದೊಂದು ನಿರ್ಧಾರಕ್ಕೆ ಬರಲಾಗಿದೆ.
ಈ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಜೊತೆಗೆ, ಇದು ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿಯೂ ಹರಿದಾಡಿತ್ತು. ಅಲ್ಲದೆ, ಇದು ಬಹುತೇಕ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ವಿಶೇಷ ತಳಿಗಳ ಶ್ವಾನಗಳನ್ನು ಯಾವುದೇ ಸೂಕ್ತ ತರಬೇತಿ ಇಲ್ಲದೆ ಜನವಸತಿ ಪ್ರದೇಶಗಳಲ್ಲಿ ಇಟ್ಟುಕೊಳ್ಳುವ ಮಾಲಿಕರ ಅಭ್ಯಾಸವನ್ನು ಹಲವರು ಟೀಕಿಸಿದ್ದರು.
VIOLENT #DOGATTACK IN #DHA PHASE 7, STREET NUMBER 14. #KARACHI.#PAKISTAN PIC.TWITTER.COM/TXFHQ6TIQL
— ASAD ZAMAN 🇵🇰 (@ASADWEB) JUNE 27, 2021
ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರುವ ನಿರ್ಧಾರಕ್ಕೂ ಇವರು ಬಂದಿದ್ದರು. ಆದರೆ, ಇದಾದ ಬಳಿಕ ಮನಸ್ಸು ಬದಲಾಯಿಸಿದ ಅಖ್ತರ್ ನ್ಯಾಯಾಲಯದ ಆಚೆಗೆ ಸಂಧಾನದ ಮೂಲಕ ಇದನ್ನು ಪರಿಹರಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದರು. ಜೊತೆಗೆ, ಕೆಲ ಷರತ್ತುಗಳೊಂದಿಗೆ ಶ್ವಾನಗಳ ಮಾಲಿಕ ಹುಮಾಯುನ್ರನ್ನು ಕ್ಷಮಿಸುವುದಾಗಿ ಇವರು ಹೇಳಿದ್ದರು.
ಆದರೆ ವ್ಯಗ್ರವಾದ ನಾಯಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ರೀತಿಯ ಚರ್ಚೆಗಳಿಗೆ ಆಸ್ಪದ ಮಾಡಿಕೊಟ್ಟಿದೆ. ನಿಜಕ್ಕೂ ಮನುಷ್ಯನ ತರಬೇತಿಯಿಂದ ನಾಯಿಗಳು ಸೌಮ್ಯವಾಗಿ ವರ್ತಿಸುತ್ತವೆಯೇ ? ಮೂಲದಲ್ಲಿ ಅವಕ್ಕೆ ಮಾಲಿಕನ ನಿರ್ದೇಶನ ಅರ್ಥ ಮಾಡಿಕೊಂಡು ಪಾಲಿಸುವ ಸಾಮರ್ಥ್ಯ ಇದೆಯೇ ಇಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ.