ಹೊತ್ತಿ ಉರಿಯುತ್ತಿದೆ ದಕ್ಷಿಣ ಆಫ್ರಿಕಾ; 70 ಭಾರತೀಯರು ಸೇರಿ 220 ಜನರ ಹತ್ಯೆ!
ಭ್ರಷ್ಟಾಚಾರದ ಆರೋಪ ಹೊತ್ತಿರುವ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರನ್ನು ಬಂಧಿಸಲಾಗಿದ್ದು, ಅವರ ಬಂಧನದ ನಂತರ ದಕ್ಷಿಣ ಆಫ್ರಿಕಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ಹಿಂಸಾಚಾರದಲ್ಲಿ ಸುಮಾರು 70 ಭಾರತೀಯರು ಸೇರಿದಂತೆ 220 ಜನರು ಸಾವನ್ನಪ್ಪಿದ್ದಾರೆ.
ಭ್ರಷ್ಟಾಚಾರ ಆರೋಪದಡಿ ವಿಚಾರಣೆಗೆ ಹಾಜಗಾರಲು ವಿಫಲರಾದ ಜೂಮಾ ಅವರನ್ನು ನ್ಯಾಯಾಂಗ ನಿಂದನೆ ಅಡಿಯಲ್ಲಿ ಬಂಧಿಸುವಂಥೆ ಅಲ್ಲಿನ ಉನ್ನತ ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿತ್ತು. ಕೋರ್ಟ್ ಸೂಚನೆಯಂತೆ ಜೂಮಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಬಂಧನವನ್ನು ಖಂಡಿಸಿ ಆರಂಭವಾದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, 6ನೇ ದಿನವೂ ಹಿಂಸಾಚಾರ ಭುಗಿಲೆದ್ದಿದೆ.
ಇಡೀ ದೇಶಾದ್ಯಂತ ಮನೆಯಿಂದ ಹೊರಬರಲಾರದಂತಹ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು, ಜನ ಊಟ-ತಿಂಡಿಯಿಲ್ಲದೆ ಕಂಗಾಲಾಗಿದ್ದಾರೆ. ಕೊರೊನಾ ಸಮಯದಲ್ಲಿ ಉದ್ಭವಿಸಿರುವ ಹಿಂಸಾಚಾರದಿಂದ ಸೂಕ್ತ ಚಿಕಿತ್ಸೆಯನ್ನೂ ಪಡೆಯಲಾಗದೇ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ದೆಹಲಿ ಹಿಂಸಾಚಾರ ಭಾಷಣ: ಅಗತ್ಯ ಬಿದ್ದರೆ ಈಗಲೂ ಹಾಗೇ ಮಾಡುತ್ತೇವೆ: ಬಿಜೆಪಿ ನಾಯಕ ಕಪಿಲ್ ಮಿಶ್ರಾ
ರಾಜಕೀಯ ಪ್ರಚೋದನೆಗೆ ಒಳಗಾದ ಗುಂಪು ಮಾರಕಾಸ್ತ್ರಗಳಿಂದ ಹೆಲ್ಲೆಗಳನ್ನು ನಡೆಸುತ್ತಿದ್ದು, ಕಳೆದ ಆರು ದಿನಗಳಿಂದ ಇದೂವರೆಗೂ 70 ಭಾರತೀಯರು ಸೇರಿದಂತೆ 220 ಜನರನ್ನು ಹತ್ಯೆ ಮಾಡಲಾಗಿದೆ. ಅಲ್ಲದೆ, ಸುಮಾರು 78 ಔಷಧಿ ಅಂಗಡಿಗಳು, ಸುಮಾರು 300ಕ್ಕೂ ಹೆಚ್ಚು ಸೂಪರ್ ಮಾರುಕಟ್ಟೆಗಳನ್ನು ನಾಶಪಡಿಸಲಾಗಿದೆ.
ಪೆಟ್ರೋಲ್ ಬಾಂಬ್ಗಳನ್ನು ಎಸೆಯುವುದು, ಗುಂಡು ಹಾರಿಸುವುದು, ಮಾರಕಾಯುಧಗಳಿಂದ ಕಗ್ಗೊಲೆ ಮಾಡುವುದು, ಏಕಾಏಕಿ ನುಗ್ಗಿ ಲೂಟಿ ಮಾಡಲಾಗುತ್ತಿದೆ. ರಸ್ತೆಗಳು ಬಂದ್ ಆಗಿವೆ. ಸಂಕಷ್ಟದಲ್ಲಿ ಸಿಲುಕಿರುವವರಿಗೆ ಆಹಾರವನ್ನೂ, ಮಕ್ಕಳಿಗೆ ಹಾಲನ್ನೂ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ವೈದ್ಯರಾದ ಶ್ರೀನಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ ಭುಗಿಲೆದ್ದ ಹಿಂಸಾಚಾರ : 10 ಮಂದಿ ಸಾವು- 490 ಜನರ ಬಂಧನ!