ಮೆಟ್ರೋ ಕಾಮಗಾರಿ ವೇಳೆ ಮಣ್ಣು ಕುಸಿತ : ಆತಂಕದಲ್ಲಿ ಮನೆ ಮಾಲೀಕ..!
ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ವೇಳೆ ಮಣ್ಣು ಕುಸಿತ ಉಂಟಾಗಿದ್ದು ಮನೆ ಮಾಲೀಕ ಆತಂಕಗೊಂಡಿದ್ದಾರೆ.
ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಟ್ರ್ಯಾನಿ ರಸ್ತೆಯಲ್ಲಿದ್ದ ಬಾವಿಯೊಂದನ್ನು ಮುಚ್ಚಲಾಗಿತ್ತು. ಆದರೆ ಈಗ ಏಕಾಏಕಿ ಬಾವಿಕುಸಿದಿದ್ದು, ಸುಮಾರು 30 ಅಡಿ ಮಣ್ಣು ಕುಸಿದಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನಿನ್ನೆ ರಾತ್ರಿ ಮೆಟ್ರೋ ಕಾಮಗಾರಿಯಿಂದಾಗಿ ಆಳವಾಗಿ ಮಣ್ಣು ಕುಸಿದಿದ್ದು ಬಿಎಂಆರ್ ಸಿಎಲ್ ನನ್ನು ಮನೆ ಮಾಲೀಕ ಮುಬೀನ್ ದೂರಿದ್ದಾರೆ. ನಿನ್ನೆ ರಾತ್ರಿ ಮಷೀನ್ ಕೆಲಸ ಮಾಡುವ ವೇಳೆ ವೈಬ್ರೇಷನ್ ಆಗಿದೆ. 30 ಅಡಿ ಆಳಕ್ಕೆ ಮಣ್ಣು ಕುಸಿದು ಬಿದ್ದಿದೆ. ಇದರಿಂದ ಬೆಚ್ಚಿ ಬಿದ್ದ ಮನೆ ಮಾಲೀಕ ಮುಬೀನ್ ಕಟ್ಟಡದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಬಾಯಿಯನ್ನು ಕಾಂಕ್ರಿಟ್ ಹಾಕಿ ಮುಚ್ಚಿಸಲಾಗುವುದು ಎಂದು ಬಿಎಂಆರ್ ಸಿಎಲ್ ಭರವಸೆ ನೀಡಿದೆ. ಆದರೆ ಮನೆ ಮಾಲೀಕ ಮತ್ತೆ ಮಣ್ಣು ಕುಸಿಯುವ ಆತಂಕವನ್ನು ಹೊರಹಾಕಿದ್ದಾರೆ. ಹೀಗಾಗಿ ಈ ಸ್ಥಳ ತಮಗೆ ಬೇಡ. ಬಿಎಂಆರ್ ಸಿಎಲ್ ಈ ಸ್ಥಳವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಬೆಳಿಗ್ಗೆಯಿಂದ ಬಿಎಂಆರ್ ಸಿಎಲ್ 2 ಲೋಡ್ ಮಣ್ಣಿನಿಂದ ಬಾವಿಯನ್ನು ಮುಚ್ಚಲು ಪ್ರಯತ್ನಿಸಿದೆ. ಆದರೆ ಬಾವಿಯನ್ನು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗಿಲ್ಲ. ಒಂದುವೇಳೆ ಮುಚ್ಚಿದರೂ ಮತ್ತೆ ಆಳಕ್ಕೆ ಮಣ್ಣು ಕುಸಿಯುವ ಆತಂಕವಿದ್ದು ಮನೆ ಮಾಲೀಕ ಸ್ಥಳವನ್ನೇ ಖರೀದಿ ಮಾಡುವಂತೆ ಒತ್ತಾಯಿಸಿದ್ದಾರೆ.