ರಾಜ್ಯದಲ್ಲಿ ಇದೇ ಮೊದಲು: ಪುನೀತ್ ಅವರ ಕಣ್ಣುಗಳನ್ನು ಇಬ್ಬರಿಗಲ್ಲ, ನಾಲ್ವರಿಗೆ ದಾನ ಮಾಡಲಾಗಿದೆ!

ಕನ್ನಡದ ಖ್ಯಾತ ನಟ, ಚಂದನವನದ ರಾಜಕುಮಾರ ಪುನೀತ್ ರಾಜ್‌ಕುಮಾರ್ ಅವರ ಕಣ್ಣುಗಳನ್ನು ನಾಲ್ವರಿಗೆ ಅಳವಡಿಸಲಾಗಿದೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಭುಜಂಗ್ ಶೆಟ್ಟಿ ತಿಳಿಸಿದ್ದಾರೆ.

“ಯುವ ವಯಸ್ಸಿನಲ್ಲಿಯೇ ಹಠಾತ್ತನೆ ಸಾವನ್ನಪ್ಪಿದ ಪುನೀತ್‌, ತಮ್ಮ ತಂದೆ ಡಾ. ರಾಜ್‌ಕುಮಾರ್ ಮತ್ತು ತಾಯಿ ಪಾರ್ವತಮ್ಮ ಅವರ ಹಾದಿಯಲ್ಲಿಯೇ ತಮ್ಮ ನೇತ್ರಗಳನ್ನು ದಾನಮಾಡಿದ್ದಾರೆ. 2006ರಲ್ಲಿ ರಾಜ್‌ಕುಮಾರ್ ನೇತ್ರದಾನ ಮಾಡಿದ್ದರು ಮತ್ತು 2017 ರಲ್ಲಿ ಪಾರ್ವತಮ್ಮ ಅವರೂ ನೇತ್ರದಾನ ಮಾಡಿದ್ದರು.

ನಾವು ಶುಕ್ರವಾರ ಅಪ್ಪು ಅವರ ಕಣ್ಣುಗಳನ್ನು ಶಸ್ತ್ರಚಿಕಿತ್ಸೆಯಿಂದ ಸಂಗ್ರಹಿಸಿದೆವು. ನಂತರ, ಶುಕ್ರವಾರ ಮತ್ತು ಶನಿವಾರ ಅವರ ಕಣ್ಣುಗಳನ್ನು ಕಸಿ ಮಾಡುವ ಮೂಲಕ ನಾಲ್ವರಿಗೆ ಅಳವಡಿಸಲಾಯಿತು ಎಂದು ಡಾ ಶೆಟ್ಟಿ ಹೇಳಿದ್ದಾರೆ.

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಒಂದೇ ಬಾರಿಗೆ ಈ ತಂತ್ರವನ್ನು ಅನುಸರಿಸಿ, ನಾಲ್ವರಿಗೆ ನೇತ್ರದಾನ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಸಂಭಾವನೆ ಪಡೆಯದೇ ಪುನೀತ್‌ ಅಭಿನಯಿಸಿದ್ದ ಸಾಲು ಸಾಲು ಜಾಹೀರಾತುಗಳು!

ಪ್ರತಿ ಕಣ್ಣಿನ ಕಾರ್ನಿಯಾವನ್ನು ಅರ್ಧದಷ್ಟು ಕತ್ತರಿಸಿ, ಮುಂಭಾಗದ ಭಾಗವನ್ನು ಒಬ್ಬ ಫಲಾನುಭವಿಗೆ ಮತ್ತು ಎರಡನೇ ಭಾಗವನ್ನು ಇನ್ನೊಬ್ಬರಿಗೆ ನೀಡಲಾಗಿದೆ. ಸರಿಯಾದ ಫಲಾನುಭವಿಗಳನ್ನು ಹುಡುಕುವುದು ಯಾವಾಗಲೂ ಸವಾಲಾಗಿರುತ್ತದೆ. ಏಕೆಂದರೆ ಅವರು ಆ ಕಣ್ಣುಗಳನ್ನು ಅಥವಾ ಕಣ್ಣಿನ ಭಾಗವನ್ನು ಪಡೆಯಲು ಅರ್ಹರಾಗಿರಬೇಕು. ಆದರೆ ಈ ಬಾರಿ ಎಲ್ಲವೂ ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

“ಕಣ್ಣುಗಳು ಸುಸ್ಥಿತಿಯಲ್ಲಿದ್ದರೆ ನಾಲ್ಕು ಜನರಿಗೆ ದಾನ ಮಾಡಬಹುದು. ಎಲ್ಲಾ ಫಲಾನುಭವಿಗಳ ಕಣ್ಣುಗಳೂ ಈಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಪುನೀತ್‌ ಅವರ ಕಣ್ಣಿನ ಬಿಳಿಭಾಗವನ್ನೂ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಅದರಿಂದ ಲಿಂಬಲ್ ಸೆಲ್‌ಗಳನ್ನು ಬೆಳೆಸಿ ರೋಗಿಗೆ ಬಳಸಬಹುದು” ಎಂದು ಡಾ. ಶೆಟ್ಟಿ ವಿವರಿಸಿದ್ದಾರೆ.

ಇದನ್ನೂ ಓದಿ: ಅರ್ಧಕ್ಕೆ ಉಳಿದುಹೋಗಿವೆ ಪುನೀತ್‌ ನಟನೆಯ ಸಾಲು ಸಾಲು ಸಿನಿಮಾಗಳು

ಫಲಾನುಭವಿಗಳ ನಿರೀಕ್ಷಣಾ ಪಟ್ಟಿ ಸಿದ್ಧವಾಗಿತ್ತು. ಮತ್ತೊಬ್ಬ ಸೂಕ್ತ ಫಲಾನುಭವಿಯನ್ನು ಮಿಂಟೋ ಕಣ್ಣಿನ ಆಸ್ಪತ್ರೆಯಿಂದ ಸಹಾಯ ಪಡೆದು ಗುರುತಿಸಲಾಯಿತು. ಇವರೆಲ್ಲರೂ ಕರ್ನಾಟಕ ಮೂಲದ ಯುವಕರೇ ಆಗಿದ್ದು, ಐವರು ವೈದ್ಯರ ತಂಡದಿಂದ ಕಸಿ ಮಾಡಲಾಗಿದೆ ಎಂದು ಡಾ.ರಾಜ್‌ಕುಮಾರ್‌ ನೇತ್ರ ಬ್ಯಾಂಕ್‌ನ ವೈದ್ಯಕೀಯ ನಿರ್ದೇಶಕ ಡಾ.ಯತೀಶ್‌ ಶಿವಣ್ಣ ಹೇಳಿದ್ದಾರೆ.

“ಪುನೀತ್‌ ಅವರ ಬಹುಮುಖ ವ್ಯಕ್ತಿತ್ವವನ್ನು ಗುರುತಿಸಲು ನಾವು ನಿರ್ದಿಷ್ಟವಾಗಿ ಅವರ ಕಣ್ಣುಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಬಯಸಿದ್ದೆವು. ಕಣ್ಣು ಕಸಿ ಕಾರ್ಯವು ಬೆಳಿಗ್ಗೆ 11.30ಕ್ಕೆ ಪ್ರಾರಂಭವಾಗಿ ಸಂಜೆ 5.30ರವರೆಗೆ ನಡೆಯಿತು. ಇದು ಸೂಕ್ಷ್ಮ ಶಸ್ತ್ರಚಿಕಿತ್ಸೆಯಾಗಿದ್ದರೂ, ಇದನ್ನು ಬೇಗನೆ ಮಾಡಲಾಯಿತು. ಆದ್ದರಿಂದ, ಜನರು ಇದರ ಸದುಪಯೋಗ ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಟ ಸಾರ್ವಭೌಮ, ಕನ್ನಡಿಗರ ಯುವರತ್ನ ಪುನೀತ್ ರಾಜಕುಮಾರ್ ನಡೆದು ಬಂದ ಹಾದಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights