Fact check: “ಬುರ್ಖಾ ಸುಡಲು ಹೋಗಿ ಬೆಂಕಿಗೆ ಆಹುತಿಯಾದ RSS ಮಹಿಳೆ” ಎಂಬ ಸುದ್ದಿ ನಿಜವೆ?
ಓವರ್ ಹೆಡ್ ಟ್ಯಾಂಕ್ವೊಂದರ ಮೇಲೆ ನಿಂತ ಮಹಿಳೆಯರ ಗುಂಪೊಂದು ಬಟ್ಟೆಯ ತುಂಡನ್ನು ಸುಟ್ಟುಹಾಕುವ 1:12 ನಿಮಿಷದ ವಿಡಿಯೊವೊಂದು ಎಲ್ಲಡೆ ವೈರಲ್ ಆಗುತ್ತಿದ್ದು ಬುರ್ಖಾವನ್ನು ಸುಡುವ ವೇಳೆ ಮಹಿಳೆಯೊಬ್ಬರು ಬೆಂಕಿಗೆ ಆಹುತಿಯಾಗಿದ್ದಾರೆ ಎಂದು ವಾಟ್ಸಾಪ್ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
हिजाब को फना करने निकले थे खुद फना हो रहे है#Hijab #हिजाब_से_दर्द_क्यों pic.twitter.com/sz1X0B9Ldp
— #AllahuAkbar (@AzqaanSheikh) February 7, 2022
ವೈರಲ್ ವೀಡಿಯೊದಲ್ಲಿರುವ ಆಡಿಯೋ ಉರ್ದು ಭಾಷೆಯಲಿದ್ದು, ಬುರ್ಖಾವನ್ನು ಸುಡಲು ಪ್ರಯತ್ನಿಸುತ್ತಿರುವ ಈ ಮಹಿಳೆಯರು RSSನ ಸದಸ್ಯರಾಗಿದ್ದಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಬುರ್ಖಾವನ್ನು ಸುಡುವ ವೇಳೆ ಆ ಬೆಂಕಿ ಒಬ್ಬ ಮಹಿಳೆಗೆ ವ್ಯಾಪಿಸುತ್ತದೆ. ಹಾಗಾಗಿ ಇದನ್ನು ದೇವರ ದೈವಿಕ ಹಸ್ತಕ್ಷೇಪ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಆದರೆ ಈ ಘಟನೆಯನ್ನು ಯಾವುದೇ ಮಾಧ್ಯಮವು ವರದಿ ಮಾಡಿಲ್ಲ ಮತ್ತು ಘಟನೆಯ ಬಗ್ಗೆ ಜಾಗೃತಿ ಮೂಡಿಸಲು ಗುಂಪುಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಬೇಕು ಎಂದು ಆಡಿಯೊದಲ್ಲಿ ತಿಳಿಸಲಾಗಿದೆ.
ಕೆಲ ದಿನಗಳಿಂದ ಕರ್ನಾಟಕದ ಕೆಲವು ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಹೇರಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯರು ಇದನ್ನು ಪ್ರಶ್ನಿಸಿ ಪ್ರತಿಭಟಿಸಿದ್ದರು. ನಂತರ ಇದಕ್ಕೆ ಪ್ರತಿಯಾಗಿ ಹಲವಾರು ಬಲಪಂಥೀಯ ಸಂಘಟನೆಗಳೊಂದಿಗೆ ಸೇರಿಕೊಂಡ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಶಾಲೆಗೆ ಬಂದಿದ್ದ ಪರಿಣಾಮ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಸದರಿ ವಿಡಿಯೋ ವೈರಲ್ ಆಗುತ್ತಿದೆ. ಹಾಗಾಗಿ ವೈರಲ್ ವಿಡಿಯೋದಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ವೈರಲ್ ಆಗುತ್ತಿರುವ ವಿಡಿಯೊ ಸುಮಾರು 2014 ರಿಂದಲೂ ಫೇಸ್ಬುಕ್ನಲ್ಲಿ ಲಭ್ಯವಿದೆ. ಆದರೆ ವಿಡಿಯೊ ಹಿಂಸಾತ್ಮಕವಾಗಿರುವುದರಿಂದ ಫೇಸ್ಬುಕ್ ವೀಡಿಯೊದ ಪೂರ್ವವೀಕ್ಷಣೆಯನ್ನು ನಿರ್ಬಂಧಿಸಿದೆ. ವೀಡಿಯೊದಲ್ಲಿನ ವಾಯ್ಸ್-ಓವರ್ ಕೂಡ ತೆಗೆಯಲಾಗಿದೆ. (ಕೆಳಗಿನ ಫೋಟೋದಲ್ಲಿ ನೋಡಬಹುದು)
Googleನಲ್ಲಿ ಕೀವರ್ಡ್ ಸರ್ಚ್ ಮಾಡಿದಾಗ ಫೆಬ್ರವರಿ 2010ರಲ್ಲಿ ಪ್ರಕಟವಾದ ವರದಿ ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಲಭ್ಯವಾಗಿದೆ. ವರದಿಯ ಪ್ರಕಾರ, ಈ ಮಹಿಳೆಯರ ಗುಂಪು ಪಂಜಾಬ್ ಸರ್ಕಾರದ ವಿರುದ್ಧ ಪ್ರತಿಭಟಿಸುವ ಶಿಕ್ಷಕಿಯಾಗಿದ್ದಾರೆ. ಕೋರ್ಸ್ಗೆ ಪ್ರವೇಶದ ನಂತರ ಪ್ರಾಥಮಿಕ ಶಿಕ್ಷಕರ ತರಬೇತಿ (ಇಟಿಟಿ) ಅಡಿಯಲ್ಲಿ ಪದವಿಗಳನ್ನು ನೀಡಬೇಕೆಂದು ಒತ್ತಾಯಿಸಿದ್ದರು. ಅವರಲ್ಲಿ ಐವರು ಸೀಮೆಎಣ್ಣೆಯೊಂದಿಗೆ 100 ಅಡಿ ಎತ್ತರದ ನೀರಿನ ಟ್ಯಾಂಕ್ ಮೇಲೆ ಹತ್ತಿ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.
ಘಟನೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರತಿಭಟನಾ ನಿರತ ಶಿಕ್ಷಕಿಗೆ ಬೆಂಕಿಯನ್ನು ಹಚ್ಚಿಕೊಳ್ಳುವ ಉದ್ದೇಶವೇನು ಇರಲಿಲ್ಲ, ಆದರೆ ಪೊಲೀಸರು ಪ್ರತಿಭಟನೆಯನ್ನು ಹತ್ತಿಕಲು ಪ್ರಯತ್ನಿಸಿಲು ಮುಂದಾದಾಗ ಕಿರಣಜಿತ್ (27) ಎಂಬ ಶಿಕ್ಷಕಿ ಬೆಂಕಿಹಚ್ಚಿಕೊಳ್ಳಲು ಪ್ರಚೋದಿಸಿತು. ಕಿರಣಜಿತ್ ಫರೀದ್ಕೋಟ್ ಜಿಲ್ಲೆಯ ನಿವಾಸಿಯಾಗಿದ್ದು, ಬೆಂಕಿಯಿಂದ ಆಕೆಯನ್ನು ರಕ್ಷಿಸುವ ವೇಳೆಗೆ ಶೇಕಡಾ 90 ರಷ್ಟು ಸುಟ್ಟಹೋಗಿದ್ದರು.
ಬೆಂಕಿ ತಗುಲಿದ ಶಿಕ್ಷಕಿಯನ್ನು ಹತ್ತಿರದ ಲೂಧಿಯಾನದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ತೀರಿಕೊಂಡರು ಎಂದು ಎನ್ಡಿಟಿವಿ ವರದಿ ಮಾಡಿದೆ.
ಆದ್ದರಿಂದ, “ಬುರ್ಖಾವನ್ನು ಸುಡಲು ಯತ್ನಿಸಿದ RSS ಮಹಿಳೆಗೆ ಬೆಂಕಿ ತಗುಲಿದೆ. ಇದು ಅವರಿಗೆ ದೇವರು ಕಲಿಸಿದ ಪಾಠ” ಎಂದು ಆರೋಪಿಸಿ ವೈರಲ್ ಮಾಡಿದ್ದ ವಿಡಿಯೊ ಸುಳ್ಳಾಗಿದೆ. ಸುಮಾರು 10 ವರ್ಷಗಳಿಗೂ ಹಿಂದೆ ನಡೆದ ಘಟನೆಯ ಹಳೆಯ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನು ಓದಿರಿ: Fact check: ನಿಜಗುಣಾನಂದ ಸ್ವಾಮಿ ಹೆಸರಿನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಬರಹ ವೈರಲ್