ಫ್ಯಾಕ್ಟ್‌ಚೆಕ್: ರಾಜಸ್ಥಾನದಲ್ಲಿ ಈದ್ ದಿನ ಮುಸ್ಲಿಮರು ಭಾರತದ ರಾಷ್ಟ್ರ ಧ್ವಜ ತೆಗೆದು ಇಸ್ಲಾಮಿಕ್ ಧ್ವಜ ಹಾರಿಸಿದ್ದು ನಿಜವಲ್ಲ

ಮೇ 3ರ ಮಂಗಳವಾರದಂದು ಈದ್‌ಗೆ ಕೆಲವೇ ಗಂಟೆಗಳ ಮೊದಲು ರಾಜಸ್ಥಾನದ ಜೋಧ್‌ಪುರದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಘರ್ಷಣೆ ನಡೆದಿತ್ತು. ಇದರ ಮಧ್ಯೆ ಜಲೋರಿ ಗೇಟ್‌ನಲ್ಲಿ ಇಸ್ಲಾಮಿಕ್ ಧ್ವಜಗಳು ಹಾರಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮುಸ್ಲಿಮರು ಭಾರತದ ರಾಷ್ಟ್ರಧ್ವಜವನ್ನು ತೆಗೆದು ಇಸ್ಲಾಮಿಕ್ ಧ್ವಜವನ್ನು ಸ್ಥಾಪಿಸಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.


ಅನೇಕರು ವೀಡಿಯೊವನ್ನು ಫೇಸ್‌ಬುಕ್ ಮತ್ತು ವಾಟ್ಸಾಪ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, ಜೋಧ್‌ಪುರದ ಜಲೋರಿ ಗೇಟ್‌ನಲ್ಲಿ ಜನರು ಭಾರತದ ರಾಷ್ಟ್ರಧ್ವಜವನ್ನು ತೆರವುಗೊಳಿಸಿ ಇಸ್ಲಾಮಿಕ್ ಧ್ವಜವನ್ನು ಸ್ಥಾಪಿಸಿದ್ದಾರೆ ಎಂದು ಹೇಳುವ ಯಾವುದೇ ವಿಶ್ವಾಸಾರ್ಹ ವರದಿ ಕಂಡುಬಂದಿಲ್ಲ ಎಂದು ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ವರದಿ ಮಾಡಿದೆ.

ಸ್ವಾತಂತ್ರ್ಯ ಹೋರಾಟಗಾರ ಬಲ್ಮುಕುಂದ್ ಬಿಸ್ಸಾ ಅವರ ಪ್ರತಿಮೆಯ ಸುತ್ತಲು ಇಸ್ಲಾಮಿಕ್ ಧ್ವಜಗಳನ್ನು ಹಾಕಲಾಗಿದೆ. ಇದು ಅಲ್ಲೆ ಇದ್ದ  ಕೆಲ ಬಲಪಂಥಿಯ  ಮತ್ತು ಮುಸ್ಲಿಮರ ನಡುವೆ ವಾಗ್ವಾದ ಕಾರಣವಾಗಿದೆ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ, ಟೈಮ್ಸ್ ಆಫ್ ಇಂಡಿಯಾ ಮತ್ತು ಇತರ ಮಾಧ್ಯಮಗಳು ವರದಿ ಮಾಡಿದೆ.  ಕೆಲ ದಿನಗಳ ಹಿಂದೆ ಪರಶುರಾಮ ಜಯಂತಿಯ ಕಾರಣಕ್ಕೆ ಅಲ್ಲಿ ಕೇಸರಿ ಧ್ವಜವನ್ನು ಹಾಕಲಾಗಿತ್ತು, ನಂತರ ಅವುಗಳನ್ನು ತೆರವುಗೊಳಿಸಿ ಈದ್ ಕಾರಣಕ್ಕೆ ಇಸ್ಲಾಮಿಕ್ ದ್ವಜಗಳನ್ನು ಹಾಕಲಾಗುತ್ತಿತ್ತು.  ಇಸ್ಲಾಮಿಕ್ ಧ್ವಜಗಳನ್ನು ಹಾರಿಸಿದಾಗ, ಕೇಸರಿ ಧ್ವಜವನ್ನು ತೆಗೆದುಹಾಕಲಾಗಿದೆ ಎಂಬ ಸುದ್ದಿ ಹರಡಿದ ನಂತರ ಘರ್ಷಣೆಗಳು ಉಂಟಾಗಿವೆ ಎಂದು ವರದಿಯಾಗಿದೆ.

ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಹವಾ ಸಿಂಗ್ ಘುಮಾರಿಯಾ, ಇಂಡಿಯಾ ಟುಡೆಯೊಂದಿಗೆ ಮಾತನಾಡಿ ಘಟನೆ ಬಗ್ಗೆ ವಿರವರಣೆ ನೀಡಿದ್ದು “ನಮಾಜ್ ಮಾಡುವ ಪ್ರದೇಶದ ಬಳಿ ಪರಶುರಾಮ ದೇವರ ಧ್ವಜಗಳಿದ್ದವು. ಈದ್ ಹಬ್ಬದಂದು ಸ್ಥಳೀಯ ಮುಸ್ಲಿಂ ಸಮುದಾಯದವರು ಧ್ವಜಾರೋಹಣ ಮಾಡುತ್ತಿರುವುದರಿಂದ ಧ್ವಜ ತೆಗೆಯುವ ವಿಚಾರದಲ್ಲಿ ವಾಗ್ವಾದ ನಡೆದಿದೆ. ಪೊಲೀಸರು ಗುಂಪನ್ನು ಚದುರಿಸಲು ಪ್ರಯತ್ನಿಸಿದಾಗ, ಉದ್ವಿಗ್ನತೆ ಉಂಟಾಗಿ ಮತ್ತು ಕಲ್ಲು ತೂರಾಟ ನಡೆಯಿತು” ಎಂದಿದ್ದಾರೆ.

ಭಾರತೀಯ ಜನತಾ ಪಕ್ಷದ ರಾಜಸ್ಥಾನದ ರಾಜ್ಯ ಅಧ್ಯಕ್ಷ ಸತೀಶ್ ಪೂನಿಯಾ ಕೂಡ ಘಟನೆ ಕುರಿತು ಟ್ವೀಟ್‌ ಮಾಡಿದ್ದು ಕೇಸರಿ ಧ್ವಜದ ಬದಲಿಗೆ ಇಸ್ಲಾಮಿಕ್ ಧ್ವಜವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ. ಜೋಧಪುರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಲ್ಮುಕುಂದ್ ಬಿಸ್ಸಾ ಜಿ ಅವರ ಪ್ರತಿಮೆಯ ಮೇಲೆ ಕೇಸರಿ ಧ್ವಜವನ್ನು ಕೆಳಗಿಳಿಸಿ ಇಸ್ಲಾಮಿಕ್ ಧ್ವಜವನ್ನು ಹಾರಿಸಲಾಯಿತು, ಈ ಹಿಂಸಾಚಾರಕ್ಕೆ  ರಾಜ್ಯದ ಕಾಂಗ್ರೆಸ್  ಸರ್ಕಾರದ ನೇರ ಹೊಣೆಯಾಗಿದೆ. ಮುಸ್ಲಿಮರ ತುಷ್ಟೀಕರಣದ ಧೋರಣೆ ಸ್ಪಷ್ಟವಾಗಿ ಕಾಣುತ್ತಿದ್ದು, ಈ ಧೋರಣೆಯೇ ಕಾಂಗ್ರೆಸ್‌ಗೆ ಮುಳುವಾಗಲಿದೆ  ಎಂದು ಪೂನಿಯಾ ಹೇಳಿದ್ದಾರೆ.

 

ಪರಶುರಾಮ ಜಯಂತಿಯ ಮೊದಲು ಬಾಲ್ಮುಕುಂದ್ ಬಿಸ್ಸಾ ಅವರ ಪ್ರತಿಮೆಯ ಪಕ್ಕದಲ್ಲಿ ಮೊದಲೇ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ಅದರ ಹಳೆಯ ಚಿತ್ರಗಳನ್ನು ಹುಡುಕಿದೆವು. ಪ್ರತಿಮೆಯ ಹಲವು ಚಿತ್ರಗಳು ಗೂಗಲ್ ಮ್ಯಾಪ್ ಲಭ್ಯವಿದೆ. ಆದರೆ, ಆ ಜಾಗದಲ್ಲಿ ಭಾರತದ ಧ್ವಜವನ್ನು ಶಾಶ್ವತವಾಗಿ ಹಾರಿಸಲಾಗಿಲ್ಲ.

ಘರ್ಷಣೆಗೆ ಕಾರಣವಾಗಿರುವ ಸ್ಥಳದ ಎರಡು ಚಿತ್ರಗಳು ಲಭ್ಯವಾಗಿದ್ದು ಒಂದನ್ನು 2019 ರಲ್ಲಿ ಕ್ಲಿಕ್ ಮಾಡಲಾಗಿದೆ ಮತ್ತು ಇನ್ನೊಂದು ಏಪ್ರಿಲ್ 2022 ರಲ್ಲಿ ತೆಗೆಯಲಾಗಿದೆ. ಕೆಳಗೆ ನೋಡಬಹುದು. ಜಲೋರಿ ಗೇಟ್‌ನಲ್ಲಿ ಭಾರತದ ರಾಷ್ಟ್ರ ಧ್ವಜವು ಶಾಶ್ವತವಾಗಿ ಹಾರಿಸಲಾಗಿಲ್ಲ ಎಂದು ಇಂಡಿಯಾಟುಡೆ  ಜೋಧ್‌ಪುರ ಬ್ಯೂರೋ ಅದನ್ನು ಖಚಿತಪಡಿಸಿದೆ.

ಘರ್ಷಣೆಗೂ ಮುನ್ನ ನಡೆದ ಸಂಗತಿಗಳು

ಇಂಡಿಯಾ ಟುಡೇ ಜೋಧ್‌ಪುರ ಬ್ಯೂರೋ ವಿವರಿಸಿದಂತೆ ಜೋಧ್‌ಪುರ ಹಿಂಸಾಚಾರದ ಮುನ್ನ ನಡೆದ ಕೆಲ ಸಂಗತಿಗಳನ್ನು ವಿವರಿಸಿದೆ ಅವು ಈ ಕೆಳಗಿನಂತಿದೆ:

ಮೇ 1: ಜಾಲೋರಿ ಗೇಟ್‌ನಲ್ಲಿ ಪರಶುರಾಮ ಜಯಂತಿಯನ್ನು ಆಚರಿಸಲಾಯಿತು.

ಮೇ 2: ಈದ್ ಆಚರಿಸುವವರಿಗೆ ಧ್ವನಿವರ್ಧಕಗಳು ಮತ್ತು ಇಸ್ಲಾಮಿಕ್ ಧ್ವಜಗಳಿಗೆ ಒಂದು ದಿನದ ಅನುಮತಿ ನೀಡಲಾಗಿದೆ.

ಮೇ 2, ಸಂಜೆ 7:00: ಜಲೋರಿ ಗೇಟ್‌ನಲ್ಲಿ ಇಸ್ಲಾಮಿಕ್ ಧ್ವಜಗಳನ್ನು ಹಾರಿಸಲಾಗಿದೆ.

ಮೇ 2, ರಾತ್ರಿ 9:00: ಜಲೋರಿ ಗೇಟ್‌ನಲ್ಲಿ ಪಾಕಿಸ್ತಾನ ಧ್ವಜ ಹಾರಿಸಲಾಗಿದೆ ಎಂಬ ವದಂತಿ ಹರಡಿತು. ಜಲೋರಿ ಗೇಟ್‌ನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ ಎಂದು ಎರಡು ಸ್ಥಳೀಯ ಚಾನೆಲ್‌ಗಳು ವರದಿ ಮಾಡಿವೆ. ಇದನ್ನು ಬರೆಯುವ ಸಮಯದಲ್ಲಿ, ಎರಡೂ ಆರೋಪಗಳನ್ನು ಬೆಂಬಲಿಸಲು ಯಾವುದೇ ಪುರಾವೆ ಇರಲಿಲ್ಲ.

ಮೇ 3, 12:00: ವದಂತಿಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯರು ಜಲೋರಿ ಗೇಟ್‌ನಿಂದ ಧ್ವಜಗಳು ಮತ್ತು ಧ್ವನಿವರ್ಧಕಗಳನ್ನು ತೆಗೆದುಹಾಕಿದರು.

ಮೇ 3, 1:00: ಕೋಮು ಘರ್ಷಣೆಗಳು ಭುಗಿಲೆದ್ದವು ಮತ್ತು ಜನರು ಕಲ್ಲು ತೂರಾಟ ನಡೆಸಿದರು.

ಮೇ 3, 1:30 am: ಪೊಲೀಸರು ಗುಂಪಿನ ಮೇಲೆ ಲಾಠಿ ಚಾರ್ಜ್ ಮಾಡಿದರು ಮತ್ತು ಅಶ್ರುವಾಯು ಕೂಡ ಪ್ರಯೋಗಿಸಿದರು.

ಮೇ 3: ಬೆಳಗ್ಗೆ 8:30: ಕೇಸರಿ ಧ್ವಜ ನಾಪತ್ತೆಯಾಗಿದೆ ಎಂಬ ಸುದ್ದಿ ಎಲ್ಲಡೆ ಹರಡಿ ಮತ್ತಷ್ಟು ಹಿಂಸಾಚಾರ ಭುಗಿಲೆದ್ದಿದೆ. ಈದ್ ನಮಾಜ್ ಮಾಡಲು ಹೊರಟಿದ್ದ ಜೋಲ್ರಿ ಗೇಟ್‌ಗೆ ಆಗಮಿಸಿದ ಮುಸ್ಲಿಮರು ಅಲ್ಲಿ ಇಸ್ಲಾಮಿಕ್ ದ್ವಜದ ಬದಲು ಕೇಸರಿ ಧ್ವಜವನ್ನು ನೋಡಿದ್ದಾರೆ. ಇದು ಮತ್ತಷ್ಟು ಕಲ್ಲು ತೂರಾಟ ಮತ್ತು ವಿಧ್ವಂಸಕ ಕೃತ್ಯಗಳಿಗೆ ಕಾರಣವಾಗಿದೆ.

ಮೇ 3: ಸ್ಥಳೀಯ ಆಡಳಿತವು ಕೇಸರಿ ಧ್ವಜದ ಬದಲಿಗೆ ಭಾರತದ ರಾಷ್ಟ್ರ ಧ್ವಜವನ್ನು ಸ್ಥಾಪಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ ರಾಜಸ್ಥಾನದ ಜಲೋರಿ ಗೇಟ್‌ ಬಳಿ ಮುಸ್ಲಿಮರು ಈದ್ ದಿನದಂದು ಭಾರತದ ರಾಷ್ಟ್ರ ಧ್ವಜ ತೆಗೆದು ಇಸ್ಲಾಮಿಕ್ ಧ್ವಜಗಳನ್ನು ಹಾರಿಸಿದ್ದಾರೆ ಎಂಬುದು ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ದರೋಡೆ ಮತ್ತು ಕೊಲೆಯ ಪ್ರಕರಣವನ್ನು ಮುಸ್ಲಿಮರಿಂದ ಹಿಂದೂಗಳ ಹತ್ಯೆ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights