ಫ್ಯಾಕ್ಟ್‌ಚೆಕ್: ಕೇರಳದ ಮುಸ್ಲಿಮರು RSS ಕಾರ್ಯಕರ್ತನ ಕುತ್ತಿಗೆ ಕೊಯ್ಯುತ್ತಿರುವ ವಿಡಿಯೋದ ವಾಸ್ತವವೇನು?

‘ಕೇರಳದ ಮುಸ್ಲಿಮರು RSS ಕಾರ್ಯಕರ್ತನ ಕತ್ತನ್ನು ಕೊಯ್ಯುತ್ತಿರುವ ದೃಶ್ಯ’ ಎಂದು ಪ್ರತಿಪಾದಿಸಿ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 50 ಸೆಕೆಂಡ್‌ ಇರುವ ವೈರಲ್ ವಿಡಿಯೊದಲ್ಲಿ, ಯುವಕನೊಬ್ಬನ ಮೇಲೆ ಮುಸ್ಲಿಮರ ಗುಂಪೊಂದು ದಾಳಿ ಮಾಡಿ ಎಳೆದುಕೊಂಡು ಹೋಗುತ್ತದೆ. ನಂತರ ಅದೇ ವಿಡಿಯೊ ಮುಂದುವರಿದಂತೆ, ಶರ್ಟ್‌ ಬಿಚ್ಚಿರುವ ಯುವಕನೊಬ್ಬನನ್ನು ಮಲಗಿಸಿ ಆತನ ಕತ್ತನ್ನು ಕೊಯ್ಯುತ್ತಿರುವ ಭಯಾನಕ ದೃಶ್ಯವಿದೆ.

ಈ ಭಯಾನಕ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುಖ್ಯವಾಗಿ ವಾಟ್ಸಪ್‌‌ನಲ್ಲಿ ಇದು ಹರಿದಾಡುತ್ತಿದ್ದು, ಅದರ ಶಿರ್ಷಿಕೆ ಕೆಳಗಿನಂತಿದೆ.

RSS ಕಾರ್ಯಕರ್ತನನ್ನು ಮಸೀದಿಗೆ ಕರೆದೊಯ್ದು ತಲೆ ಕಡಿದ ಕೇರಳದ ಮುಸಲ್ಮಾನರು ಬಹುಸಂಖ್ಯಾತರಾದರೆ ಇಡೀ ದೇಶವೇ ಹೀಗೆ, ನ್ಯಾಯಾಲಯ, ಸಂವಿಧಾನ, ಪೋಲೀಸ್ ಯಾವುದೂ ನಿಮ್ಮನ್ನು ರಕ್ಷಿಸುವುದಿಲ್ಲ, ನಿಮ್ಮ ಆಸ್ತಿ ನಿಮ್ಮನ್ನು ರಕ್ಷಿಸುವುದಿಲ್ಲ. ನಿಮ್ಮ ಕರ್ಮ.. ಈ ಸಂಗತಿಗಳನ್ನು ನೋಡಿ, ನಮಗೆ ದೇಶದಲ್ಲಿ ಹಿಂದೂ ವೋಟ್ ಬ್ಯಾಂಕ್ ಬೇಕು, ಇಲ್ಲದಿದ್ದರೆ ಇಲ್ಲಿ ತೋರಿಸಿದಂತೆ ಅಥವಾ ಅಫ್ಘಾನಿಸ್ತಾನದಲ್ಲಿನ ಹಿಂದೂಗಳಂತೆ ಸಾಯುತ್ತೇವೆ..’

ವಾಟ್ಸಪ್ ಮಾತ್ರವಲ್ಲದೆ ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲೂ ಈ ವಿಡಿಯೊ ಹರಿದಾಡಿದೆ. ಅದನ್ನು ಇಲ್ಲಿ ನೋಡಬಹುದು. (ಎಚ್ಚರಿಕೆ: ವಿಡಿಯೊ ಭಯಾನಕವಾಗಿದೆ). ಫೇಸ್‌ಬುಕ್‌ನಲ್ಲೂ ಈ ವಿಡಿಯೊದ ಶೀರ್ಷಿಕೆ ಅಪ್ಲೋಡ್ ಆಗಿದ್ದು, ಅದನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್

ವಾಸ್ತವದಲ್ಲಿ ಈ ವಿಡಿಯೊವನ್ನು ಎರಡು ಬೇರೆ ಬೇರೆ ವಿಡಿಯೋಗಳನ್ನು ಸೇರಿಸಿ ಮಾಡಲಾಗಿದೆ. ಮೊದಲ ಭಾಗದಲ್ಲಿ ಜನರ ಗುಂಪೊಂದು ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನ ಮೇಲೆ ದಾಳಿ ಮಾಡುತ್ತದೆ. ಅದರಲ್ಲಿ ಸುದರ್ಶನ್ ನ್ಯೂಸ್‌ನ ಲೋಗೊ ಕಾಣಬಹುದು. ವಿಡಿಯೊದ ಎರಡನೇ ಭಾಗದಲ್ಲಿ ಅರೆ ಬೆತ್ತಲೆಯಾಗಿರುವ, ಬಾಯಿಗೆ ಬಟ್ಟೆ ತುರುಕಲ್ಪಟ್ಟ, ನೀಲಿ ಬಣ್ಣದ ಪ್ಯಾಂಟ್‌ಗೆ ಬೆಲ್ಟ್‌ ಧರಿಸಿರುವ ಯುವಕನ ಕುತ್ತಿಗೆಯನ್ನು ಕೊಯ್ಯಲಾಗುತ್ತದೆ. ಈ ದೃಶ್ಯವಂತೂ ಅಮಾನವೀಯವಾಗಿದ್ದು, ನೋಡಿದವರನ್ನು ಬೆಚ್ಚಿ ಬೀಳಿಸುಂತಿದೆ. ಎರಡು ಬೇರೆ ಬೇರೆ ವಿಡಿಯೊವನ್ನು ಸೇರಿಸಿ ಎಡಿಟ್ ಮಾಡುವ ಮೂಲಕ ಎರಡು ಒಂದೇ ದೃಶ್ಯದತಂತೆ ಕಾಣುತ್ತದೆ. ಆದರೆ ಇವು ಬೇರೆ ಬೇರೆ ಸಂದರ್ಭದ ವಿಡಿಯೊ ಆಗಿವೆ. ಹಾಗಾಗಿ ಈ ಎರಡು ವಿಡಿಯೋಗಳನ್ನು ಬೇರೆ ಬೇರೆಯಾಗಿ ಪರಿಶೀಲಿಸೋಣ.

ವಿಡಿಯೋದ ಮೊದಲನೇ ಭಾಗ

ಮೊದಲನೇ ಭಾಗದಲ್ಲಿ ನಾಲ್ಕೈದು ಜನ ಗುಂಪು ಯುವಕನ ಮೇಲೆ ದಾಳಿ ಮಾಡಿ, ಆತನನ್ನು ಎಳೆದೊಯ್ಯುತ್ತದೆ. ಈ ವಿಡಿಯೊವನ್ನು ಗೂಗಲ್ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಕೆಲವು ಟ್ವೀಟ್‌ಗಳು ಲಭ್ಯವಾಗಿದ್ದು. ಈ ಟ್ವೀಟ್‌ ಆಧಾರದಲ್ಲಿ ಮತ್ತಷ್ಟು ಸರ್ಚ್ ಮಾಡಿದಾಗ, ಈ ಘಟನೆಯ ಬಗ್ಗೆ ವರದಿ ಮಾಡಿರುವ ಪತ್ರಿಕಾ ವರದಿಗಳು ಲಭ್ಯವಾಗಿವೆ.

ಅಮರ್‌‌ ಉಜಾಲ’ ಪತ್ರಿಕೆಯು 2021 ಮೇ 5ನೇ ತಾರೀಕಿನಂದು ವರದಿ ಮಾಡಿದೆ. ವರದಿಯ ಪ್ರಕಾರ, “ಲೈನ್‌ಮ್ಯಾನ್‌ನನ್ನು ಒತ್ತೆಯಾಳಾಗಿ ಇಟ್ಟುಕೊಂಡು ಹಲ್ಲೆ” ಎಂದು ವರದಿ ಮಾಡಿದೆ. ಈ ವರದಿಯ ಪ್ರಕಾರ, “ಮುಜಫರ್‌ನಗರ, ಭೋಪಾ ಗ್ರಾಮದ ಸಿಕ್ರಿಯಲ್ಲಿ ವಿದ್ಯುತ್‌ ದೋಷವನ್ನು ಸರಿಪಡಿಸಲು ಬಂದ ಲೈನ್‌ಮ್ಯಾನ್‌ನನ್ನು ಗ್ರಾಮಸ್ಥರು ಥಳಿಸಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಲೈನ್‌ಮ್ಯಾನ್‌ ಅಲ್ಲಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಘಟನೆಯಲ್ಲಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ” ಎಂದು ವರದಿಯಾಗಿದೆ.

ಅಮರ್‌ ಉಜಾಲಾ ಪತ್ರಿಕೆಯ ಸುದ್ದಿ
ಅಮರ್‌ ಉಜಾಲಾ ಪತ್ರಿಕೆಯ ಸುದ್ದಿ

ಜೊತೆಗೆ ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ವ್ಯಕ್ತಿಗಳಿಗೆ ಮುಜಾಫರ್‌ ನಗರ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರ ಪ್ರಕಾರ, “ಭೋಪಾ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ 07 ಜನರನ್ನು ಪ್ರಕರಣದಲ್ಲಿ ಹೆಸರಿಸಲಾಗಿದೆ. ಜೊತೆಗೆ 10-12 ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 10 ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ” ಎಂದು ಮೇ ತಿಂಗಳ 5 ರಂದು ನೀಡಿದ್ದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ. https://twitter.com/Brijeshyadav945/status/1389822216817180679?ref_src=twsrc%5Etfw%7Ctwcamp%5Etweetembed%7Ctwterm%5E1389937283499888647%7Ctwgr%5Ebfbceddcd02825776f0643b9a171ccfee53f2f4f%7Ctwcon%5Es2_&ref_url=https%3A%2F%2Fnaanugauri.com%2Fin-kerala-the-lie-is-spreading-as-a-video-that-kills-an-rss-worker%2F

ವಿಡಿಯೋದ ಎರಡನೇ ಭಾಗ

ವಿಡಿಯೋದ ಎರಡನೇ ಭಾಗದಲ್ಲಿ ಭಯಾನಕ ದೃಶ್ಯವಿದ್ದು, ಅರೆ ಬೆತ್ತಲೆಯಾಗಿರುವ, ಬಾಯಿಗೆ ಬಟ್ಟೆ ತುರುಕಲ್ಪಟ್ಟ, ನೀಲಿ ಬಣ್ಣದ ಪ್ಯಾಂಟ್‌ಗೆ ಬೆಲ್ಟ್‌ ಧರಿಸಿರುವ ಯುವಕನ್ನು ಕುತ್ತಿಗೆಯನ್ನು ಕೊಯ್ಯಲಾಗುತ್ತದೆ. ಈ ದೃಶ್ಯವಂತೂ ಅಮಾನವೀಯವಾಗಿದ್ದು, ನೋಡಲು ಸಾಧ್ಯವಿಲ್ಲದಂತಿದೆ. ಈ ಚಿತ್ರವನ್ನೂ ಗೂಗಲ್ ರಿವರ್ಸ್ ಸರ್ಚ್ ಮಾಡಿದ್ದೇವೆ. ಈ ವೇಳೆ ನಮಗೆ ಆಸ್ಟ್ರೇಲಿಯಾದ ಸುದ್ದಿ ವೆಬ್‌‌ ಪೋರ್ಟಾಲ್‌ ಆಗಿರುವ news.com.auನಲ್ಲಿ 2018ರ ಫೆಬ್ರವರಿ ತಿಂಗಳ 6ರಂದು ಮಾಡಿರುವ ಸುದ್ದಿ ಲಭ್ಯವಾಗಿದೆ.

ವರದಿ ಪ್ರಕಾರ, “ಈ ಘಟನೆಯು ದಕ್ಷಿಣ ಅಮೆರಿಕಾದ ದೇಶವಾದ ವೆನೆಜುವೆಲಾದಲ್ಲಿ ನಡೆದಿದೆ. ವಿಡಿಯೋದಲ್ಲಿ, ಹದಿಹರೆಯದ ಬಾಲಕನನ್ನು ಮಾದಕ ದ್ರವ್ಯ ಮಾಫಿಯಾವು ಕತ್ತು ಕೊಯ್ದು ಕೊಂದಿದೆ. ಬಾಲಕನು ಮಾದಕ ದ್ರವ್ಯ ಮಾಫಿಯಾದ ವಿರೋಧಿ ಗುಂಪಿನವನಾಗಿದ್ದರಿಂದ, ಆತನನ್ನು ಅಪಹರಿಸಿ ಅಜ್ಞಾತ ಸ್ಥಳದಲ್ಲಿ ಕತ್ತು ಕೊಯ್ದು ಕೊಂದಿತು. ಈ ವಿಡಿಯೊವನ್ನು ಆರೋಪಿ ಗುಂಪೇ ಚಿತ್ರೀಕರಿಸಿ, ದೃಶ್ಯಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದೆ”

ಈ ಘಟನೆಯನ್ನು ‘ಮೈಲ್‌ ಆನ್‌ಲೈನ್‌’ ಸುದ್ದಿ ಪೋರ್ಟಲ್‌ ಕೂಡಾ ವರದಿ ಮಾಡಿದೆ. ಈ ಪತ್ರಿಕೆಯ ವರದಿಯ ಪ್ರಕಾರ, ಬಾಲಕನು 13 ವರ್ಷದವನಾಗಿದ್ದು, ಆತನ ಕತ್ತನ್ನು ಕೊಯ್ಯುವ ಮೊದಲು ಕಿವಿಯನ್ನು ಕೂಡಾ ಕತ್ತರಿಸಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾರೆ, ವೈರಲ್‌ ಆಗಿರುವ ವಿಡಿಯೊವನ್ನು ಎರಡು ಘಟನೆಗಳ ದೃಶ್ಯಗಳನ್ನು ಸೇರಿಸಿ ಮಾಡಲಾಗಿದೆ. ಮೊದಲನೇ ಘಟನೆಯು 2021ರ ಮೇ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ನಡೆದಿದ್ದರೆ, ಎರಡನೇ ಘಟನೆ 2018 ರ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಅಮೆರಿಕಾದ ವೆನೆಜುವಾಲದಲ್ಲಿ ನಡೆದಿದೆ. ಈ ಎರಡು ವಿಡಿಯೊಗೂ, ಕೇರಳಕ್ಕೂ, RSS ಗೂ ಯಾವುದೇ ಸಂಬಂಧವಿಲ್ಲ. ಎರಡು ಬೇರೆ ಬೇರೆ ಸಂಬಂಧವಿಲ್ಲ ವಿಡಿಯೋಗಳನ್ನು ಸೇರಿಸಿ ಕೇರಳದ RSS  ಮತ್ತು ಮುಸ್ಲಿಂರನ್ನು ಉಲ್ಲೇಖಿಸಿ ಸುಳ್ಳು ಕೋಮು  ದ್ವೇಷದ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗಿದೆ.ಅಲ್ಲದೆ ಈ ದೃಶ್ಯಾವಳಿಗಳು ಕಳೆದ ಎರಡು ಮೂರು ವರ್ಷಗಳಿಂದಲೂ ಇದೇ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಬಾಪು ಅಮ್ಮೆಂಬಳ
ವರದಿಗಾರರು, ನಾನು ಗೌರಿ ವೆಬ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪಠಾಣ್ ಚಿತ್ರದ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights