ಫ್ಯಾಕ್ಟ್ಚೆಕ್ : ಕೇರಳ ಸರಣಿ ಬಾಂಬ್ ಸ್ಪೋಟ : ಮುಸ್ಲಿಂ ಸಮುದಾಯದ ವಿರುದ್ದ ಸುಳ್ಳು ಆರೋಪ ಮಾಡಿದ ನಿವೃತ್ತ IPS ಅಧಿಕಾರಿ ಭಾಸ್ಕರ್ ರಾವ್
ಕೇರಳದ ಎರ್ನಾಕುಲಂ ಜಿಲ್ಲೆಯ ಕಳಮಶ್ಶೇರಿ ಎಂಬಲ್ಲಿ ಭಾನುವಾರ ಬೆಳಿಗ್ಗೆ ಯೆಹೋವನ ಪ್ರಾರ್ಥನಾ ಸಭೆ ವೇಳೆ ಸಂಭವಿಸಿದ ಭೀಕರ ಸ್ಪೋಟಕ್ಕೆ ಸಂಬಂಧಿಸಿದಂತೆ ನಿವೃತ್ತ IPS ಅಧಿಕಾರಿ, ಬಿಜೆಪಿ ನಾಯಕ ಭಾಸ್ಕರ್ ರಾವ್ X ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
“ದೇಶದಲ್ಲಿ ಬಾಂಬ್ ಸ್ಫೋಟಗಳಿಗೆ ದೀರ್ಘ ವಿರಾಮವಿತ್ತು. ಕಾಂಗ್ರೆಸ್ ಮತ್ತು ಸಿಪಿಎಂನಿಂದ ದಶಕಗಳ ಕಾಲದ ಒಲೈಕೆಯ ಮತಬ್ಯಾಂಕ್ ರಾಜಕಾರಣವು ಮುಸ್ಲಿಮರನ್ನು ಅವಿದ್ಯಾವಂತರನ್ನಾಗಿ, ಹಿಂದುಳಿದವರನ್ನಾಗಿ ಮತ್ತು ಅಪರಾಧಿಗಳನ್ನಾಗಿ ಮಾಡಿದೆ. ಪರಿಣಾಮವಾಗಿ ಭಯೋತ್ಪಾದನೆಯನ್ನು ನಾವು ಮನೆಬಾಗಿಲಿಗೆ ಆಹ್ವಾನಿಸಿದ್ದೇವೆ. ಈ ಜನರು ಮುಖ್ಯವಾಹಿನಿಗೆ ಬರಲು ಯಾವಾಗ ಯೋಚಿಸುತ್ತಾರೆ.?” ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
There was a long lull in Bomb blasts in the country; Do more and more appeasement and bring Terror into your City, Neighbourhood and to your Door Step. Misplaced vote bank politics of decades by Congress and CPM have kept Muslims uneducated, backward and criminalising them……
— Bhaskar Rao (@Nimmabhaskar22) October 29, 2023
ಈ ಪೋಸ್ಟ್ ನಲ್ಲಿ ಬೆಂಗಳೂರಿನ ನಿವೃತ್ತ ಪೊಲೀಸ್ ಕಮಿಶನರ್ ಆಗಿದ್ದ ಭಾಸ್ಕರ್ ರಾವ್, ಕಲಮಶ್ಶೇರಿ ಸ್ಪೋಟಕ್ಕೆ ಮುಸ್ಲಿಮರೇ ಕಾರಣ ಎಂದು ಪರೋಕ್ಷವಾಗಿ ಬಿಂಬಿಸಲು ಹೊರಟಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಯಾಕೆಂದರೆ ಈ ಸ್ಪೋಟಕ್ಕೆ ನಾನೇ ಕಾರಣ ಎಂದು ಡೊಮಿನಿಕ್ ಮಾರ್ಟಿನ್ ಎಂಬಾತ ಫೇಸ್ ಬುಕ್ ಲೈವ್ ನಲ್ಲಿ ವೀಡಿಯೊ ಮೂಲಕ ಹೇಳಿದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.
ಮಾರ್ಟಿನ್ ಏನು ಹೇಳಿದ್ದಾನೆ?
ಹಲೋ, ನನ್ನ ಹೆಸರು ಮಾರ್ಟಿನ್. ಕೇರಳದ ಕಳಮಶ್ಶೇರಿಯಲ್ಲಿರುವ ಕನ್ವೆನ್ಸನ್ ಸೆಂಟರ್ನಲ್ಲಿ ಯಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯಲ್ಲಿ ಬಾಂಬ್ ಸ್ಫೋಟ ಘಟನೆಗೆ ಬಗ್ಗೆ ನಿಮಗೆ ಸುದ್ದಿ ಸಿಕ್ಕಿರಬಹುದು. ಅಲ್ಲಿ ಏನು ನಡೆದಿದೆ ಎಂಬ ಬಗ್ಗೆ ನನಗೆ ಖಚಿತವಾಗಿ ತಿಳಿದಿಲ್ಲ. ಘಟನೆ ನಡೆದಿದೆ, ಏನಾದರೂ ಸಂಭವಿಸಿದೆ ಎಂಬುದು ಖಚಿತ . ಆ ಘಟನೆಯ ಸಂಪೂರ್ಣ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ.
#WATCH | On the blast at Zamra International Convention & Exhibition Centre, Kalamassery, Kerala ADGP (law and order) MR Ajith Kumar, says "One person has surrendered in Kodakra Police Station, in Thrissur Rural, claiming that he has done it. His name is Dominic Martin and he… pic.twitter.com/q59H7TaQC7
— ANI (@ANI) October 29, 2023
ಯಹೋವನ ಸಾಕ್ಷಿಗಳ ಗುಂಪಿನಲ್ಲಿ ನಾನು ಕಳೆದ 16 ವರ್ಷಗಳಿಂದ ಗುರುತಿಸಿಕೊಂಡಿದ್ದೆ. ಆದರೆ ಕಳೆದ ಆರು ವರ್ಷಗಳ ಹಿಂದೆ ಈ ಪಂಗಡವು ತಪ್ಪಾದ ಪಂಗಡವೆಂದು ನನಗೆ ಅರಿವಾಯಿತು. ನೀವು ಬೋಧಿಸುತ್ತಿರುವ ವಿಚಾರಗಳು ತಪ್ಪು ಎಂದು ಸಂಬಂಧಪಟ್ಟವರಲ್ಲಿ ತಿಳಿಸಿದೆ. ಆದರೆ ಅವರು ಅದಕ್ಕೆ ಮನ್ನಣೆ ನೀಡಲಿಲ್ಲ. ಇವರು ಈ ದೇಶದಲ್ಲಿದ್ದುಕೊಂಡು ಈ ದೇಶದ ಜನರೊಂದಿಗೆ ಬೆರೆಯಬಾರದು, ಅವರು ವೇಶ್ಯೆಯಂತೆ, ಅವರೊಂದಿಗೆ ವ್ಯವಹರಿಸಬಾರದು ಎಂದು ಬೋಧಿಸುತ್ತಾರೆ ಎಂದು ಆರೋಪಿಸಿದ್ದಾನೆ.
4 ವರ್ಷದ ಮಗುವಿಗೂ ಇವರು ನಿನ್ನ ಸ್ನೇಹಿತ ನೀಡಿದ ಚಾಕೊಲೇಟ್ ತಿನ್ನಬಾರದೆಂದು ಕಲಿಸಿಕೊಡುತ್ತಾರೆ. ಇದು ಯಾವ ರೀತಿಯ ಬೋಧನೆ. ಆ ಮಗುವಿನ ಮನಸ್ಥಿತಿ ಹೇಗಿರಬೇಡ. ನಾಲ್ಕು ವರ್ಷದಿಂದಲೇ ಮಕ್ಕಳ ಮನಸ್ಸಿನಲ್ಲಿ ದ್ವೇಷ ಬಿತ್ತುತ್ತಿದ್ದಾರೆ. ಸರ್ಕಾರಿ ಸೇವೆಗೆ ಸೇರಬಾರದು, ದೇಶ ಭಕ್ತಿ ಗೀತೆ ಹಾಡಬಾರದು, ಸೇನೆಗೆ ಸೇರಬಾರದು, ಮತದಾನ ಮಾಡಬಾರದು ಎಂದು ಕಲಿಸಿಕೊಡುತ್ತಾರೆ. ಇಂತಹ ಬೋಧನೆ ಮಾಡುವವರಿಗೆ ಇನ್ನು ಏನು ಮಾಡಬೇಕು. ಭೂಮಿಯಲ್ಲಿ ಎಲ್ಲರೂ ನಾಶವಾಗುತ್ತಾರೆ, ಯಹೋವನ ಸಾಕ್ಷಿಗಳ ಗುಂಪು ಮಾತ್ರ ಬದುಕುಳಿಯುತ್ತಾರೆ ಎಂದು ಬೋಧಿಸುತ್ತಾರೆ. ಇವರು ಜನರ ನಾಶವನ್ನು ಬಯಸುತ್ತಾರೆ. ಇವರನ್ನು ಇನ್ನು ಏನು ಮಾಡಬೇಕು? ಈ ಪಂಗಡವು ತಪ್ಪು ಪಂಗಡ. ಹಾಗಾಗಿ, ಬಹಳ ಯೋಚಿಸಿ ಬಾಂಬ್ ಇಡುವ ತೀರ್ಮಾನ ಮಾಡಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.
ಘಟನೆಯ ಸಂಪೂರ್ಣ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತಿದ್ದೇನೆ. ಪೊಲೀಸರಿಗೆ ಶರಣಾಗುತ್ತೇನೆ. ಬಾಂಬ್ ತಯಾರಿಸುವ ವಿಡಿಯೋವನ್ನು ಯಾರೂ ಕೂಡ ಜನರಿಗೆ ತೋರಿಸಬಾರದು. ಜನಸಾಮಾನ್ಯನಿಗೆ ಬಾಂಬ್ ತಯಾರಿಸುವ ಅರಿವು ಬಂದುಬಿಟ್ಟರೆ ದೊಡ್ಡ ಅಪಾಯವಾಗಬಹುದು ಎಂದು ಬಾಂಬ್ ಸ್ಫೋಟ ನಡೆಸಿರುವ ಹೊಣೆ ಹೊತ್ತುಕೊಂಡಿರುವ ಡೊಮಿನಿಕ್ ಮಾರ್ಟಿನ್ ಹೇಳಿಕೊಂಡಿದ್ದಾನೆ.
ಭಾಸ್ಕರ್ ರಾವ್ ವಿರುದ್ದ ಆಕ್ರೋಶ :
ನಿವೃತ್ತ IPS ಅಧಿಕಾರಿಗೆ ಭಾಸ್ಕರ್ ರಾವ್ X ನಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ವಿರುದ್ದ ಮಾಡಿದ ಟ್ವೀಟ್ಗೆ ಟೀಕೆಗಳು ವ್ಯಕ್ತವಾಗಿದ್ದು ಒಂದು ಜವಬ್ದಾರಿಯುತ ಸ್ಥಾನದಲ್ಲಿ ಇದ್ದು ಇಂತಹ ಬೇಜವಬ್ದಾರಿ ಟ್ವೀಟ್ ಮಾಡುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಅಲ್ಕೆಮಿಸ್ಟ್ ಎಂಬವರು ಸದ್ಯಕ್ಕೆ ಅಪರಾಧಿಯನ್ನು ಪೆಂಟೆಕೋಸ್ಟಲ್ ನಂಬಿಕೆಯ ವಿರೋಧಿ ಎಂದು ಗುರುತಿಸಲಾಗಿದೆ. ದಯವಿಟ್ಟು ಈ ಹಂತದಲ್ಲಿ ಮಸಾಲಾ ಸೇರಿಸಬೇಡಿ. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ನಿಮ್ಮ ಸ್ವಂತ ಪಕ್ಷದ ಬಣ್ಣಗಳು ಕೂಡ ತುಷ್ಟೀಕರಣವನ್ನು ಅಭ್ಯಾಸ ಮಾಡುತ್ತವೆ. ಮತಾಂಧ ಭಯೋತ್ಪಾದಕರಿಗೆ ಧರ್ಮವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಜಲಿ ಎನ್ನುವ ಬಳಕೆದಾರರು, ದಯವಿಟ್ಟು ಸುಮ್ಮನಿರಿ ಸರ್, ನಿಮ್ಮಂತಹ ಬೇಜವಾಬ್ದಾರಿ ಜನರು ಧರ್ಮ, ರಾಜಕೀಯ, ಜನಾಂಗ ಮತ್ತು ನಿಮಗೆ ಮನವರಿಕೆಯಾಗುವ ಎಲ್ಲದರ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ಚುನಾವಣೆಯಲ್ಲಿ 10,000 ಮತಗಳನ್ನು ಗಳಿಸಲು ಸಾಧ್ಯವಾಗದ ಜನರು ಸಾರ್ವಜನಿಕ ಜೀವನವನ್ನು ತ್ಯಜಿಸುವ ಬಗ್ಗೆ ಯೋಚಿಸಬೇಕು ಎಂದು ಭಾಸ್ಕರ್ ರಾವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಕೇರಳದ ಎರ್ನಾಕುಲಂ ಜಿಲ್ಲೆಯ ಕಳಮಶ್ಶೇರಿ ಪ್ರಾರ್ಥನಾ ಸಭೆಯಲ್ಲಿ ನಡೆದ ಸರಣಿ ಸ್ಪೋಟಕ್ಕೆ ಸಂಬಂಧಿಸಿದಂತೆ ಆರೋಪಿ ಡೊಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಅದರ ನಂತರವೂ ಭಾಸ್ಕರ್ ರಾವ್ ತಮ್ಮ ಟ್ವೀಟ್ ಡಿಲೀಟ್ ಮಾಡದೆ ಹಾಗೆ ಬಿಟ್ಟಿರುವುದು ಬೇಜವಬ್ದಾರಿತನದ ಪರಮಾವಧಿ ಎಂಬಂತಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಬುರ್ಖಾ ಧರಿಸಿ ಪ್ರಯಾಣ ಮಾಡು ಎಂದು ಹಿಂದೂ ಮಹಿಳೆಗೆ ಮುಸ್ಲಿಂ ಮಹಿಳೆಯರು ಧಮ್ಕಿ ಹಾಕಿದ್ದು ನಿಜವೇ?