ದೇಶದ ಕಾರ್ಮಿಕರ ರೈಲು ಪ್ರಯಾಣದರವನ್ನು ಕಾಂಗ್ರೆಸ್ ಭರಿಸುತ್ತದೆ: ಸೋನಿಯಾ ಗಾಂಧಿ
ತಮ್ಮ ರಾಜ್ಯಗಳಿಂದ ಅನ್ಯ ರಾಜ್ಯಗಳಿಗೆ ಉದ್ಯೋಗ ಹರಸಿ ಬಂದಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ಸ್ವಂತ ರಾಜ್ಯಗಳಿಗೆ ತಲುಪಲು ರೈಲು ಪ್ರಯಾಣ ದರವನ್ನು ಕಾಂಗ್ರೆಸ್ ಭರಿಸುತ್ತದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಕಾರ್ಮಿಕರು ತಮ್ಮ ರಾಜ್ಯಗಳಿಗೆ ತಲುಪಲು ರೈಲು ಸಂಚಾರಕ್ಕೆ ಅವಕಾಶ ಕೊಟ್ಟಿರುವ ಕೇಂದ್ರ ಸರ್ಕಾರ, ಕಾರ್ಮಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ದರ ವಿಧಿಸಿದೆ. ಸರ್ಕಾರದ ಈ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ದೇಶದಾದ್ಯಂತ ಕಾರ್ಮಿಕರ ಟಿಕೆಟ್ ದರವನ್ನು ಕಾಂಗ್ರೆಸ್ ಭರಿಸಲಿದೆ ಎಂದು ಘೋಷಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು “ಟ್ರಂಪ್ ಭೇಟಿಯ ವೇಳೆ ಗುಜರಾತ್ನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ 100 ಕೋಟಿ ಖರ್ಚು ಮಾಡಲಾಗಿದೆ. ಅಲ್ಲದೇ ಪಿಎಂ-ಕೇರ್ಸ್ ನಿಧಿಗೆ ರೈಲ್ವೆ ಇಲಾಖೆಯು 151 ಕೋಟಿ ರೂ ಕೊಡುಗೆ ನೀಡಿದೆ. ಇಷ್ಟೆಲ್ಲಾ ಇದ್ದರೂ ಕೇಂದ್ರ ಸರ್ಕಾರವು ಕಾರ್ಮಿಕರಿಂದ ಹಣ ವಸೂಲಿ ಮಾಡುತ್ತಿರುವುದು ಸರಿಯಲ್ಲ. ಹಾಗಾಗಿ “ನಮ್ಮ ಆರ್ಥಿಕತೆಯ ಬೆನ್ನೆಲುಬು” ಮತ್ತು “ನಮ್ಮ ರಾಷ್ಟ್ರದ ಬೆಳವಣಿಗೆಯ ರಾಯಭಾರಿಗಳಾದ ಕಾರ್ಮಿಕರ ರೈಲುದರವನ್ನು ಕಾಂಗ್ರೆಸ್ ಪಾವತಿಸಲಿದೆ ಎಂದಿದ್ದಾರೆ.
ಇದು ನಮ್ಮ ಸಹಚರರ ಸೇವೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ವಿನಮ್ರ ಕೊಡುಗೆಯಾಗಿದೆ ಮತ್ತು ಅವರೊಂದಿಗೆ ಒಗ್ಗಟ್ಟಿನಿಂದ ಹೆಗಲಿಗೆ ಹೆಗಲಾಗಿ ನಿಲ್ಲುವುದು ನಮ್ಮ ಕರ್ತವ್ಯ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.
“ವಿದೇಶದಲ್ಲಿ ಸಿಲುಕಿರುವ ನಮ್ಮ ನಾಗರಿಕರಿಗೆ ಉಚಿತ ವಿಮಾನ ಪ್ರಯಾಣವನ್ನು ಏರ್ಪಡಿಸುವ ಮೂಲಕ ನಮ್ಮ ಸರ್ಕಾರವು ತನ್ನ ಜವಾಬ್ದಾರಿಯನ್ನು ಮೆರೆದಿದೆ. ಆದರೆ ನಮ್ಮದೇ ರಾಷ್ಟ್ರದಲ್ಲಿರುವ ಕಾರ್ಮಿಕರಿಗೆ ಅದೇ ಸೌಜನ್ಯ ಏಕೆ ತೋರಿಸಲಾಗುವುದಿಲ್ಲ” ಎಂದು ಸೋನಿಯಾ ಗಾಂಧಿ ತಮ್ಮ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಕೇಂದ್ರವು ಲಾಕ್ ಡೌನ್ ಘೋಷಿಸುವ ಮುನ್ನ ಯಾವುದೇ ನೋಟಿಸ್ ನೀಡಿರಲಿಲ್ಲ. ಕೇವಲ ನಾಲ್ಕು ಗಂಟೆ ಸಮಯ ಕೊಟ್ಟು ಲಾಕ್ಡೌನ್ ಘೋಷಿಸಲಾಯಿತು. ಆದ್ದರಿಂದ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರಿಗೆ ತಮ್ಮ ಮನೆಗಳಿಗೆ ಮರಳಲು ಅವಕಾಶ ನಿರಾಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
“1947ರ ವಿಭಜನೆಯ ನಂತರ, ಭಾರತವು ಇಂತಹ ಬೃಹತ್ ಮಾನವ ವೆಚ್ಚದೊಂದಿಗೆ ಒಂದು ದುರಂತಕ್ಕೆ ಸಾಕ್ಷಿಯಾಯಿತು, ಏಕೆಂದರೆ ಸಾವಿರಾರು ವಲಸೆ ಕಾರ್ಮಿಕರು ಮತ್ತು ಕಾರ್ಮಿಕರು ಆಹಾರವಿಲ್ಲದೆ, ಸಾರಿಗೆಯಿಲ್ಲದೆ, ಔಷಧಿಯಿಲ್ಲದೆ ಕಾಲ್ನಡಿಗೆಯಲ್ಲಿ ನೂರಾರು ಕಿಲೋಮೀಟರ್ ನಡೆದು ಮನೆಗೆ ತೆರಳಬೇಕಾಯಿತು. ಅವರ ಕುಟುಂಬ ಮತ್ತು ಪ್ರೀತಿಪಾತ್ರರಲ್ಲಿಗೆ ಮರಳುವ ಬಯಕೆಯನ್ನು ಹೊರತುಪಡಿಸಿ, ಅವರಲ್ಲಿ ಏನೇನೂ ಉಳಿದಿರಲ್ಲಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇಂದಿಗೂ, ಲಕ್ಷಾಂತರ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರು ದೇಶದ ವಿವಿಧ ಭಾಗಗಳಲ್ಲಿ ಸಿಕ್ಕಿಕೊಂಡು ನರಳುತ್ತಿದ್ದಾರೆ. ಅವರ ಮನೆ ಮತ್ತು ಕುಟುಂಬಗಳಿಗೆ ಮರಳಲು ಬಯಸಿದರೂ ಅವರ ಬಳಿ ಹಣವಿಲ್ಲ. ಸರ್ಕಾರ ಉಚಿತ ಸಾರಿಗೆ ಒದಗಿಸಿಲ್ಲ. ಬಿಕ್ಕಟ್ಟಿನ ಈ ಸಮಯದಲ್ಲಿ ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವಾಲಯವು ರೈಲು ಟಿಕೆಟ್ಗಾಗಿ ಶುಲ್ಕ ವಿಧಿಸುತ್ತಿರುವುದು ಗೊಂದಲದ ಸಂಗತಿಯಾಗಿದೆ ಎಂದಿದ್ದಾರೆ.
“ಆದ್ದರಿಂದ, ಪ್ರತಿ ರಾಷ್ಟ್ರೀಯ ಕಾರ್ಮಿಕ ಕಾಂಗ್ರೆಸ್ ಸಮಿತಿಯು ಪ್ರತಿ ನಿರ್ಗತಿಕ ಕಾರ್ಮಿಕ ಮತ್ತು ವಲಸೆ ಕಾರ್ಮಿಕರ ರೈಲು ಪ್ರಯಾಣದ ವೆಚ್ಚವನ್ನು ಪ್ರತಿ ಪ್ರದೇಶ ಕಾಂಗ್ರೆಸ್ ಸಮಿತಿಯು ಭರಿಸಲಿದೆ ಮತ್ತು ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ” ಎಂದು ಅವರು ಹೇಳಿದ್ದಾರೆ.
ಇದೇ ರೀತಿಯಾಗಿ ಕರ್ನಾಟಕದಲ್ಲಿಯೂ ಸಹ ಇಲ್ಲಿನ ಬಿಜೆಪಿ ಸರ್ಕಾರ ರಾಜ್ಯದೊಳಗಿನ ಬಸ್ ಸಾರಿಗೆಗೆ ಮೂರು ಪಟ್ಟು ಬಸ್ ದರ ವಿಧಿಸಿತ್ತು. ಇದನ್ನು ಖಂಡಿಸಿ ಕಾಂಗ್ರೆಸ್ ಪಕ್ಷವು ಉಚಿತ ಪ್ರಯಾಣ ಒದಗಿಸಿ ಎಂದು ಒಂದು ಕೋಟಿ ರೂ ನೆರವು ಘೋಷಿಸಿತ್ತು. ನಂತರ ಎಚ್ಚೆತ್ತ ಸರ್ಕಾರ ಮೂರು ದಿನಗಳ ಕಾಲ ಉಚಿತ ಪ್ರಯಾಣ ಎಂದು ಘೋಷಿಸಿದೆ.