ಯೋಗಿ ನಿಮ್ಮ ಚರ್ಮ ಸುಲಿದು ಗೋಡೆಗೆ ಅಂಟಿಸುತ್ತಾರೆ; ಬಿಜೆಪಿಯಿಂದ ರೈತರಿಗೆ ಬಹಿರಂಗ ಬೆದರಿಕೆ!
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ದ ಕಳೆದ ಎಂಟು ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ರೈತ ಹೋರಾಟವನ್ನು ಮುಂದಿನ ವರ್ಷ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೂ ವಿಸ್ತರಿಸಲು ರೈತರು ನಿರ್ಧರಿಸಿದ್ದಾರೆ. ಹೀಗಾಗಿ, ರೈತರನ್ನು ಬೆದರಿಸಿರುವ ಉತ್ತರ ಪ್ರದೇಶದ ಬಿಜೆಪಿಗರು, ಯೋಗಿ ನಿಮ್ಮ ಚರ್ಮವನ್ನು ಸುಲಿಯುತ್ತಾರೆ ಎಂದು ಬಹಿರಂಗವಾಗಿ ರೈತರಿಗೆ ಬೆದರಿಕೆ ಹಾಕಿದ್ದಾರೆ.
ಉತ್ತರ ಪ್ರದೇಶ ಬಿಜೆಪಿಯು ತನ್ನ ಟ್ವಿಟರ್ ಖಾತೆಯಲ್ಲಿ, ““ನೀವು ಲಕ್ನೋಗೆ ತೆರಳುತ್ತಿದ್ದೀರಿ ಎಂದು ಕೇಳಿದೆ. ಅಲ್ಲಿ ಯಾರೊಂದಿಗೂ ಘರ್ಷಣೆಗೆ ಇಳಿಯಬೇಡಿ. ಅಲ್ಲಿ ಯೋಗಿ ಕುಳಿತಿದ್ದು, ಅವರು ನಿಮ್ಮನ್ನು ಹೊಡೆದು ಚರ್ಮವನ್ನು ಸುಲಿಯುತ್ತಾರೆ. ಅಲ್ಲದೆ ನಿಮ್ಮ ಪೋಸ್ಟರ್ ಅನ್ನು ನಗರದ ಗೋಡೆಗಳ ಮೇಲೆ ಅಂಟಿಸುತ್ತಾರೆ” ಎಂದು ಬರೆದಿರುವ ಪೋಸ್ಟರ್ ಒಂದವನ್ನು ಟ್ವೀಟ್ ಮಾಡಿದೆ.
ಆದರೆ ರೈತರು, ಬಿಜೆಪಿಯ ಬೆದರಿಕೆಗೆ ಜಗ್ಗಲ್ಲ, ಹೋರಾಟವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಬಿಜೆಪಿಯ ಬೆದರಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ರಾಜಕೀಯ ವಲಯ ಹಾಗೂ ರೈತರ ಆಂದೋಲನದ ಬೆಂಬಲಿಗರಲ್ಲಿ ಕೋಲಾಹಲವನ್ನು ಉಂಟುಮಾಡಿದೆ.
ಇದನ್ನೂ ಓದಿ:2022ರ ಯುಪಿ ಚುನಾವಣೆ: ‘ಹಿಂದೂತ್ವ ಐಕಾನ್’ ಯಾರು – ಮೋದಿ ಅಥವಾ ಯೋಗಿ?
ಜುಲೈ 26 ರಂದು ಲಕ್ನೋಗೆ ಭೇಟಿ ನೀಡಿದ್ದ ರೈತರ ನಾಯಕರು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಾದ್ಯಂತ ಪ್ರತಿಭಟನೆಗಳನ್ನು ವಿಸ್ತರಿಸುವುದಾಗಿ ಘೋಷಿಸಿದ್ದರು. ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಮತ್ತು ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಅವರು ಉತ್ತರ ಪ್ರದೇಶದ ಎಲ್ಲಾ 75 ಜಿಲ್ಲೆಗಳಲ್ಲಿ ಮಹಾಪಂಚಾಯತ್, ರ್ಯಾಲಿ ಮತ್ತು ಸಭೆಗಳನ್ನು ನಡೆಸುವುದಾಗಿ ಘೋಷಿಸಿದ್ದರು.
ओ भाई जरा संभल कर जइयो लखनऊ में…#BJP4UP pic.twitter.com/TKwrjaIXYz
— BJP Uttar Pradesh (@BJP4UP) July 29, 2021
“ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಅವರ ಪಕ್ಷವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರದ ಕಾರಣ ಜನ ಚಳುವಳಿಗಳನ್ನು ಹತ್ತಿಕ್ಕುತ್ತಿದ್ದಾರೆ. ಕಾರ್ಟೂನ್ ಪ್ರಕಟಿಸುವ ಮೂಲಕ, ಬಿಜೆಪಿ ತನ್ನ ನಿಜವಾದ ಮುಖವನ್ನು ಸಾರ್ವಜನಿಕರಿಗೆ ತೋರಿಸುತ್ತಿದೆ. ಯಾವುದೇ ಬೆದರಿಕೆಗೆ ಒಳಗಾಗಿ ತಮ್ಮ ಪ್ರತಿಭಟನೆಯನ್ನು ರೈತರು ಹಿಂತೆಗೆದುಕೊಳ್ಳುವುದಿಲ್ಲ” ಎಂದು ರೈತ ಮುಖಂಡ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: ಪ್ರತಿ ಹಳ್ಳಿಯಲ್ಲೂ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ: ಯೋಗಿ ಸರ್ಕಾರದ ವಿರುದ್ದ ಬಿಜೆಪಿ ನಾಯಕರೇ ಆಕ್ರೋಶ!
ಉತ್ತರ ಪ್ರದೇಶದ ಪ್ರಧಾನ ವಿರೋಧ ಪಕ್ಷ ಸಮಾಜವಾದಿ ಪಕ್ಷ (ಎಸ್ಪಿ) ನಾಯಕ ಸುನಿಲ್ ಕುಮಾರ್ ಸಾಜನ್, “ಪ್ರಸ್ತುತ ಕಾರ್ಟೂನ್, ಬಡವರು ಮತ್ತು ರೈತರ ಬಗ್ಗೆಗಿನ ಬಿಜೆಪಿಯ ಆಲೋಚನೆ ಮತ್ತು ಸಿದ್ಧಾಂತವನ್ನು ಪ್ರತಿಬಿಂಬಿಸುತ್ತದೆ. ಕಾರ್ಟೂನ್ನಲ್ಲಿ ರೈತನ ತಲೆಯಿಂದ ಬೀಳುವ ಟೋಪಿ ವಾಸ್ತವವಾಗಿ ರೈತನ ಹೆಮ್ಮಯಾಗಿದೆ. ಕಾರ್ಟೂನ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಹಂಕಾರವನ್ನು ಪ್ರತಿಬಿಂಬಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಕೂಡ ಕಾರ್ಟೂನ್ ಅನ್ನು ಖಂಡಿಸಿದ್ದು, ಪಕ್ಷದ ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಲಲ್ಲು, “ ಈ ಕಾರ್ಟೂನ್ ಮೂಲಕ ಸರ್ಕಾರವು ಗೂಂಡಾಗಿರಿಯನ್ನು ಬಳಸಿ ಪ್ರತಿಭಟನೆಯನ್ನು ಇಲ್ಲದಂತೆ ಮಾಡಲು ಬಯಸುತ್ತದೆ ಎಂದು ಜೋರಾಗಿ ಮತ್ತು ಸ್ಪಷ್ಟ ಸಂದೇಶವನ್ನು ನೀಡಿದೆ. ಕಾಂಗ್ರೆಸ್ ರೈತರ ಬೆಂಬಲಕ್ಕಿದ್ದು, ರೈತರ ಪ್ರತಿಭಟನೆಯನ್ನು ಅಡಗಿಸಲು, ಬಿಜೆಪಿಯ ಸೊಕ್ಕಿನ ಆಡಳಿತಕ್ಕೆ ನಾವು ಅನುಮತಿಸುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Fact Check: ವಿಡಿಯೋದಲ್ಲಿ ಹಂಚಿಕೊಳ್ಳಲಾದ ಶಿಲ್ಪಕಲೆಗಳು ಅಯೋಧ್ಯೆ ರಾಮ ಮಂದಿರದ್ದವೇ?