ಸುವೇಂದು ಅಧಿಕಾರಿ ರ್ಯಾಲಿಯಲ್ಲಿ ಗೋಲಿ ಮಾರೋ ಘೋಷಣೆ: ಮೂವರು BJP ಮುಖಂಡರ ಬಂಧನ!
ಸುವೇಂದು ಅಧಿಕಾರಿ ನೇತೃತ್ವದಲ್ಲಿ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಬಿಜೆಪಿ ರ್ಯಾಲಿಯಲ್ಲಿ ‘ದೇಶದ್ರೋಹಿಗಳ ಮೇಲೆ ಗುಂಡು ಹಾರಿಸಿ’ (ಗೋಲಿ ಮಾರೋ..) ಎಂದು ಘೋಷಣೆ ಕೂಗಿದ ಮೂವರು ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.
ಹೂಗ್ಲಿ ಜಿಲ್ಲೆಯ ಚಂದನ್ನಗರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಆರೋಪಿಗಳು ಗೋಲಿ ಮಾರೋ ಘೋಷಣೆ ಕೂಗಿದ್ದು, ಹೂಗ್ಲಿ ಜಿಲ್ಲೆಯ ಬಿಜೆಪಿ ಯುವ ಮುಖಂಡ ಸುರೇಶ್ ಸಾಹು ಸೇರಿದಂತೆ ಪಕ್ಷದ ಮೂವರು ಕಾರ್ಯಕರ್ತರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬುಧವಾರ ರಾತ್ರಿ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಬಂಧಿತರನ್ನು ಗುರುವಾರ ಇಂದು ನ್ಯಾಯಾಲಯದ ಎದುರು ಹಾಜರುಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೂಗ್ಲಿ ಕ್ಷೇತ್ರದ ಸಂಸದ ಲಾಕೆಟ್ ಚಟರ್ಜಿ ಮತ್ತು ರಾಜ್ಯಸಭಾ ಸದಸ್ಯ ಸ್ವಾಪನ್ ದಾಸ್ಗುಪ್ತಾ ಮತ್ತು ಸುವೇಂದು ಅಧಿಕಾರಿಯೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ವೇಳೆ, ಇವರ ಹಿಂದೆ ಬರುತ್ತಿದ್ದ ಕಾರ್ಯಕರ್ತರು ಇಲ್ಲಿನ ರಥಾಲಾ ಪ್ರದೇಶದಲ್ಲಿ ಬಿಜೆಪಿಯ ಧ್ವಜಗಳನ್ನು ಹಿಡಿದು ಘೋಷಣೆ ಕೂಗುತ್ತಿದ್ದರು.
‘ಬಿಜೆಪಿ ಧ್ವಜ ಹಿಡಿದು ಇಂಥ ಘೋಷಣೆಗಳನ್ನು ಕೂಗಿರುವ ವ್ಯಕ್ತಿಗಳನ್ನು ಪಕ್ಷ ಬೆಂಬಲಿಸುವುದಿಲ್ಲ’ ಎಂದು ಬಿಜೆಪಿ ವಕ್ತಾರ ಸಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ.
Read Also: ಚುನಾವಣಾ ಸಮೀಕ್ಷೆ: ಬಂಗಾಳದಲ್ಲಿ ಮಮತಾ; ತಮಿಳಲ್ಲಿ ಸ್ಟ್ಯಾಲಿನ್ಗೆ ಅಧಿಕಾರ; BJPಗೆ ಮುಖಭಂಗ?