ಸಂಜೆಯೊಳಗೆ ಹೈಕಮಾಂಡ್ ಸಂದೇಶ; ನಾಳೆ ಸಿಎಂ ಪದತ್ಯಾಗ? ಬಿಎಸ್ವೈ ಹೇಳಿದ್ದೇನು?
ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಇಂದು (ಭಾನುವಾರ) ಸಂಜೆಯೊಳಗೆ ಹೈಕಮಾಂಡ್ನಿಂದ ಸಂದೇಶ ಬರಲಿದೆ. ಸಂದೇಶ ಬಂದ ತಕ್ಷಣವೇ ತಿಳಿಸುತ್ತೇನೆ. ನನಗೆ ಬಿಜೆಪಿ ನಾಯಕರ ಮೇಲೆ ವಿಶ್ವಾಸವಿದೆ. ಸಂಜೆವರೆಗೂ ಕಾದು ನೋಡೋಣ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಉತ್ತರ ಕರ್ನಾಟಕದ ಬಹುಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿ, ಮಳೆಯಿಂದಾಗಿರುವ ಅನಾಹುತಗಳನ್ನು ಪರಿಶೀಲಿಸಿ ಮಾತನಾಡಿ ಬಿಎಸ್ವೈ, ಇಂದು ಹೈಕಮಾಂಡ್ನಿಂದ ಸಂದೇಶ ಬರುವ ನಿರೀಕ್ಷೆ ಇದೆ. ಸಂದೇಶ ಬಂದ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನ್ನೊಂದಿಗೆ ಹಲವು ಸಚಿವರು ಮತ್ತು ಅಧಿಕಾರಿಗಳಿದ್ದಾರೆ ಎಂದು ಹೇಳಿದ್ದಾರೆ.
ನನ್ನ ಪರವಾಗಿ ಸ್ವಾಮಿಗಳು ಸಮಾವೇಶ ನಡೆಸುತ್ತಿದ್ದಾರೆ. ಅದರ ಅಗತ್ಯವಿರಲಿಲ್ಲ. ನನಗೆ ನಮ್ಮ ನಾಯಕರ ಮೇಲೆ ವಿಶ್ವಾಸವಿದೆ. ಎರಡು ವರ್ಷಗಳ ನನ್ನ ಆಡಳಿತ ಜನರಿಗೆ ತೃಪ್ತಿ ನೀಡಿದೆ ಎಂದು ಭಾವಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಮುಂದಿನ ಮುಖ್ಯಮಂತ್ರಿ ಯಾರು ಆಗಬೇಕು. ಯಾರು ಆಗಬಾರದು. ದಲಿತ ಮುಖ್ಯಮಂತ್ರಿಯಾಗುತ್ತಾರೆಯೇ ಎಂದು ನಿರ್ಧರಿಸುವವನು ನಾನಲ್ಲ, ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸುದ್ದಿಗಾರರ ಪಶ್ನೆಗೆ ಅವರು ಉತ್ತರಿಸಿದ್ದಾರೆ.
Read Also: ಔಷಧ ಖರೀದಿ ಅಕ್ರಮ: ಉತ್ತರ ಕೊಡದೆ ಕದ್ದಾಡುತ್ತಿದೆ ಆರೋಗ್ಯ ಇಲಾಖೆ!