ಬೆಂಗಳೂರಿನಲ್ಲಿ ಪಿಯುಸಿ ವಿದ್ಯಾರ್ಥಿ ಸಾವು : ಪ್ರಕರಣಕ್ಕೆ ಕ್ಷಣಕ್ಕೊಂದು ಟ್ವಿಸ್ಟ್..!
ಬೆಳ್ಳಂ ಬೆಳಗ್ಗೆ ರಾಜಧಾನಿಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಇದು ಯಾರೋ ರೌಡಿಗಳು ಹಾರಿಸಿದ ಗುಂಡಿನ ಸದ್ದು ಅಲ್ಲ. ಬದಲಿಗೆ ಇನ್ನೂ ಬಾಳಿ ಬದುಕಬೇಕಿದ್ದ ಬಾಲಕ ತನ್ನ ತಲೆಗೆ ಹಾರಿಸಿಕೊಂಡ ಗುಂಡಿನ ಸದ್ದು.
ಹೌದು.. ಇಂದು ಸಿಲಿಕಾನ್ ಸಿಟಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ದ್ವಿತಿಯ ಪಿಯು ವಿದ್ಯಾರ್ಥಿ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಉತ್ತರಾಖಂಡ್ ಮೂಲದ ಮಿಲಿಟರಿ ಸ್ಕೂಲ್ನಲ್ಲಿ ಓದುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ, ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತಪಟ್ಟ ವಿದ್ಯಾರ್ಥಿ ರಾಹುಲ್ ಭಂಡಾರಿ ,ಮಾನಸಿಕ ಒತ್ತಡದಿಂದ ಶೂಟ್ ಮಾಡಿಕೊಂಡಿರೋ ಶಂಕೆ ಮೂಡಿದೆ. ಮೊದಲ ಶೂಟ್ ನಲ್ಲೇ ಬಾಲಕ ಸಾವನ್ನಪ್ಪಿದ್ದಾನೆ.
ಉತ್ತರಾಖಂಡ್ ಮೂಲದ ಸೇನೆಯ ನಿವೃತ್ತ ಅಧಿಕಾರಿಯಾಗಿದ್ದ ಭಗತ್ ಸಿಂಗ್ ಪುತ್ರ ರಾಹುಲ್, ಇಂದು ಮುಂಜಾನೆ ವಾಕಿಂಗ್ಗೆಂದು ಬಂದಿದ್ದಾನೆ. ಬೆಳಗ್ಗೆ 5 ಗಂಟೆಗೆ ಮಗನಿಗೆ ಪೋಷಕರು ಫೋನ್ ಮಾಡಿದ್ದಾರೆ. ತಾಯಿ ಸತತ ಫೋನ್ ಮಾಡಿದ್ರೂ ರಾಹುಲ್ ರಿಸೀವ್ ಮಾಡಿರಲಿಲ್ಲ. 12 ಗುಂಡುಗಳಿದ್ದ ಪಿಸ್ತೂಲ್ನಿಂದ ರಾಹುಲ್ ತಲೆಗೆ ಶೂಟ್ ಮಾಡಿಕೊಂಡಿರೋ ಹಾಗೆ ಮೇಲ್ನೋಟಕ್ಕೆ ಕಾಣಿಸುತ್ತಿದ್ದು, ಸೂಸೈಡಾ..? ಬೇರೆ ಯಾರಾದ್ರೂ ಶೂಟ್ ಮಾಡಿದ್ರಾ…? ಎಂಬ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಜೊತೆಗೆ ವಿದ್ಯಾರ್ಥಿ ರಾಹುಲ್ ಕೇಳಿದ ಹಣ ಕೊಡಲಿಲ್ಲ ಎಂದು ರಾಹುಲ್ ಪ್ರಾಣವನ್ನೇ ಬಿಟ್ನಾ ಅನ್ನೋ ಅನುಮಾನ ಮೂಡಿದೆ. ಅಪ್ಪ 500 ಕೊಟ್ಟಿಲ್ಲ ಎಂದು ರಾಹುಲ್ ಆತ್ಮಹತ್ಯೆಗೆ ಶರಣಾದನಾ? ಹಣ ಕೊಟ್ಟಿಲ್ಲ ಎಂದು ಅಪ್ಪನ ವಿರುದ್ಧ ಮುನಿಸಿಕೊಂಡಿದ್ನಾ ರಾಹುಲ್? ಎನ್ನುವ ಅನುಮಾನವೂ ಇದೆ. ಎಫ್ ಎಸ್ ಎಲ್ಲ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ.
ಮೃತನ ಜೇಬ್ನಲ್ಲಿದ್ದ ಮೊಬೈಲ್ ಅನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಭೇಟಿ ನೀಡಿದ್ದು, ಮಗನನ್ನು ಕಳೆದುಕೊಂಡ ವಿದ್ಯಾರ್ಥಿಯ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.