ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಕೀಲ್ ಸಾಬ್ ಜಗದೀಶ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ!
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತೆಯ ಪರವಾಗಿ ವಾದ ಮಾಡಿದ್ದ ಬೆಂಗಳೂರಿನ ವಕೀಲ ಜಗದೀಶ್ ಮಹಾದೇವ್ರವರು ಇಂದು ಅಧಿಕೃತವಾಗಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಎಎಪಿ ಸೇರಿದ ನಂತರ ಮಾತನಾಡಿದ ನಂತರ, “ಈ ಭ್ರಷ್ಟ ಸರ್ಕಾರಗಳು ಮುಂದಿನ ದಿನಗಳಲ್ಲಿ ನಾವು ಉಸಿರಾಡುವುದಕ್ಕೂ ಟ್ಯಾಕ್ಸ್ ವಿಧಿಸುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಅದನ್ನು ತಪ್ಪಿಸಲು ಮತ್ತು ಲೂಟಿಕೋರರ ಮಧ್ಯದಲ್ಲಿ ಜನಪರವಾದ ಆಡಳಿತ ಮಾಡಿ ತೋರಿಸಲು ಆಮ್ ಆದ್ಮಿ ಪಕ್ಷ ಸೇರುತ್ತಿದ್ದೇನೆ” ಎಂದು ಹೇಳಿದ್ದಾರೆ.
ನಮ್ಮ ಮುಂದಿನ ಗುರಿ ಬಿಬಿಎಂಪಿ ಚುನಾವಣೆಯಾಗಿದೆ. ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿಸಬೇಕು, ಕಸದ ಮಾಫಿಯಾ, ಕಾಂಟ್ರಾಕ್ಟರ್ ಮಾಫಿಯಾವನ್ನು ತೊಲಗಿಸಬೇಕಿದೆ ಎಂದು ಅವರು ಹೇಳಿದ್ದಾರೆ.
“ಇಂದು ಜನಪರ ಆಡಳಿತ ಕಾಣುತ್ತಿಲ್ಲ. ಬೆಲೆ ಏರಿಕೆ ನಿರಂತರವಾಗಿದೆ. ಇದನ್ನು ತಪ್ಪಿಸಲು ಒಂದು ರಾಜಕೀಯ ಪರ್ಯಾಯ ಬೇಕಿದೆ. ಇದುವರೆಗೂ ವಯಕ್ತಿಕ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದ ನನಗೆ ಅದನ್ನು ಮುಂದುವರೆಸಲು ಆಪ್ ಸೂಕ್ತ ವೇದಿಕೆಯಾಗಿದೆ” ಎಂದು ಜಗದೀಶ್ ಹೇಳಿದ್ದಾರೆ.
ಭ್ರಷ್ಟಾಚಾರ ವಿರೋಧಿ ಹೋರಾಟವೇ ನಾನು ಆಪ್ ಸೇರಲು ಕಾರಣ. ಅವರ ದೆಹಲಿಯಲ್ಲಿನ ಆಡಳಿತ ನನಗೆ ಬಹಳ ಇಷ್ಟವಾಗಿದೆ. ಉಚಿತ ಶಿಕ್ಷಣ, ಆರೋಗ್ಯ, ನೀರು, ವಿದ್ಯುತ್ ಮತ್ತು ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಟ್ಟಿರುವುದು ಒಳ್ಳೆಯ ಆಡಳಿತವಾಗಿದೆ. ಅದನ್ನು ಕರ್ನಾಟಕದಲ್ಲಿಯೂ ಮಾಡುವ ಬಯಕೆ ನಮ್ಮದು ಎಂದರು.
ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿರೆಡ್ಡಿಯವರು ಮಾತನಾಡಿ, “ಒಳ್ಳೆಯ ಜನ ಒಗ್ಗೂಡಿದರೆ ಜನಸಾಮಾನ್ಯರ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಹುದೆಂದು ದೆಹಲಿಯಲ್ಲಿ ತೋರಿಸಲಾಗಿದೆ. ಅದೇ ರೀತಿಯ ಬದಲಾವಣೆ ಬರಬೇಕೆಂದು ಕರ್ನಾಟಕದಲ್ಲಿ ಆಪ್ ಪ್ರಯತ್ನಿಸುತ್ತಿದೆ. ಜಗದೀಶ್ರವರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದೆ” ಎಂದರು.
ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ, ಮಾಧ್ಯಮ ಸಂಚಾಲಕ ಜಗದೀಶ್ ಸದಂ, ಪ್ರಶಾಂತಿ ಸುಭಾಷ್ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಆಧುನಿಕ ಮಹಿಳೆಯರು ಮಕ್ಕಳನ್ನು ಹೆರಲು ಬಯಸುತ್ತಿಲ್ಲ ಎಂದ ಸುಧಾಕರ್; ಸಚಿವರಿಗೆ ಚಿಕಿತ್ಸೆ ಅಗತ್ಯವಿದೆ ಎಂದ ನೆಟ್ಟಿಗರು