ಬೆಂಗಳೂರು: ಶುಲ್ಕ ಕಟ್ಟಿಲ್ಲವೆಂದು ವಿದ್ಯಾರ್ಥಿಗಳನ್ನು ಬಿಸಿಲಿನಲ್ಲಿ ಸಿಲ್ಲಿಸಿದ ಶಾಲಾ ಆಡಳಿತ
ಶಾಲಾ ಶುಲ್ಕ ಕಟ್ಟಿಲ್ಲವೆಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ಇಡೀ ದಿನ ಬಿಸಿಲಿನಲ್ಲಿ ನಿಲ್ಲಿಸಿ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಕಮಲಾ ನಗರದಲ್ಲಿ ನಡೆದಿದೆ.
ಕಮಲಾ ನಗರದಲ್ಲಿರುವ ಅಮರವಾಣಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಶಾಲಾ ಸಿಬ್ಬಂದಿಯ ಈ ಅಮಾನವೀಯ ನಡೆಯ ವಿರುದ್ದ ಪಾಲಕರು ಶಾಲೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಶಾಲೆಯ ದಾಖಲಾತಿಗಾಗಿ ಪಾವತಿಸಬೇಕಿದ್ದ ಮೊತ್ತದಲ್ಲಿ 10 ಸಾವಿರ ಶುಲ್ಕವನ್ನು ಕೆಲವು ವಿದ್ಯಾರ್ಥಿಗಳ ಪೋಷಕರು ಬಾಕಿ ಉಳಿಸಿಕೊಂಡಿದ್ದರು. ಹೀಗಾಗಿ, ಶಾಲಾ ಆಡಳಿತ ಮಂಡಳಿಯು ಹಲವು ವಿದ್ಯಾರ್ಥಿಗಳನ್ನು ಕೊಠಡಿಯಿಂದ ಹೊರಗೆ ದೂಡಿ, ಇಡೀ ದಿನ ಬಿಸಿಲಿನಲ್ಲಿ ನಿಲ್ಲಿಸಿದೆ.
ಶಾಲಾ ಆಡಳಿತ ಮಂಡಳಿಯ ಈ ಕೃತ್ಯದಿಂದಾಗಿ ಹಲವು ವಿದ್ಯಾರ್ಥಿಗಳು ಜ್ವರ, ತಲೆನೋವು ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.
ಕೊರೊನಾದಿಂದಾಗಿ ಸರಿಯಾಗಿ ಕೆಲಸ ಇಲ್ಲದ ಕಾರಣ ಈ ವರ್ಷ ಶಾಲಾ ಶುಲ್ಕ ಪಾವತಿಸಲು ವಿಳಂಬವಾಗಿತ್ತು. ಕಳೆದ ವರ್ಷ ಸಂಪೂರ್ಣವಾಗಿಯೇ ಫೀಸ್ ಕಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಕಟ್ಟುತ್ತೇವೆ ಎಂದರೂ ವಿದ್ಯಾರ್ಥಿಗಳೊಂದಿಗೆ ಶಾಲಾ ಆಡಳಿತ ಮಂಡಳಿ ಅಮಾನವೀಯವಾಗಿ ನಡೆದುಕೊಂಡಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ-2021 ಎಂದರೇನು?; ವಿರೋಧಕ್ಕೆ ಕಾರಣಗಳೇನು?