ಅಮೆರಿಕಾ ಕ್ರಾಂತಿಗೂ ಸ್ಪೂರ್ತಿಯಾಗಿದ್ದ ಹೈದರ್ ಮತ್ತು ಟಿಪ್ಪು ಸುಲ್ತಾನ್‌!

ಇಂದು ಅಮೆರಿಕಾ ಅಧ್ಯಕ್ಷರ ಕೃಪಾಕಟಾಕ್ಷ ಪಡೆಯುವುದೇ ಭಾರತ ಸರ್ಕಾರದ ಯಶಸ್ಸಿಗೆ ಮಾನದಂಡ ಎಂಬಂತಾಗಿದೆ. ಹೀಗಾಗಿಯೇ ಭಾರತದ ಪ್ರಧಾನಿಗಳು ಅಮೆರಿಕದ ಅಧ್ಯಕ್ಷರ ಅರೆಕಾಲಿಕ ಚುನಾವಣಾ ಪ್ರಚಾರ ಕಾರ್ಯಕರ್ತರೂ ಆಗಿದ್ದನ್ನು ನಾವೆಲ್ಲ ನೋಡಿಯೇ ಇದ್ದೇವೆ. ಗುಲಾಮಿತನವನ್ನೇ ವಿಶ್ವಗುರುತನವೆಂಬಂತೆ ಪ್ರಚಾರ ಮಾಡಿಕೊಳ್ಳುವುದನ್ನೂ ನೋಡುತ್ತಿದ್ದೇವೆ.

ಆದರೆ ನಮ್ಮ ಚರಿತ್ರೆಯಲ್ಲಿ ನ್ಯಾಯ ಹಾಗೂ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ನಡೆಸಿದ ಹೋರಾಟದಿಂದಲೇ ಇಡೀ ವಿಶ್ವ ಭಾರತದತ್ತ ಆಶಾಭಾವನೆಯಿಂದ ನೋಡಿದ ಕಾಲವೂ ಇತ್ತು. ಅದರಲ್ಲ್ಲೂ ನಮ್ಮ ಮೈಸೂರಿನ ಹೈದರಾಲಿ ಖಾನ್ ಮತ್ತು ಟೀಪೂ ಸುಲ್ತಾನರು ಬ್ರಿಟಿಶರ ವಿರುದ್ಧ ನಡೆಸಿದ ವೀರೋಚಿತ ಸ್ವಾತಂತ್ರ್ಯ ಸಮರವೂ ಇಡೀ ವಿಶ್ವದ ಗಮನವನ್ನು ಸೆಳೆದಿತ್ತು.

ಅಷ್ಟು ಮಾತ್ರವಲ್ಲ. ಅಮೆರಿಕದ ಕ್ರಾಂತಿಕಾರಿಗಳು ಹೈದರ್ ಆಲಿ ಮತ್ತು ಟೀಪೂ ಸುಲ್ತಾನರಿಂದ ತಾವು ಬ್ರಿಟಿಷರ ವಿರುದ್ಧ ನಡೆಸುತ್ತಿದ್ದ ಹೋರಾಟಕ್ಕೆ ಸ್ಪೂರ್ತಿ ಪಡೆದುಕೊಳ್ಳುತ್ತಿದ್ದರು. ಹಾಗೂ ಹೈದರ್ ಮತ್ತು ಟಿಪ್ಪುವಿನ ಗೆಲುವಿಂದ ಅಮೆರಿಕ ಮತ್ತು ಇಡೀ ಜಗತ್ತೇ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕಬಂಧಬಾಹುಗಳಿಂದ ವಿಮೋಚನೆಯಾಗುತ್ತದೆಂಬ ಆಶಾಭಾವನೆಯಿಂದ ಆಂಗ್ಲೋ-ಮೈಸೂರು ಯುದ್ಧಗಳನ್ನು ಗಮನಿಸುತ್ತಿದ್ದರು. ಹೈದರ್ -ಟಿಪ್ಪು ಗೆದ್ದಾಗ ಇಡೀ ಅಮೆರಿಕ ಸಮ್ಭ್ರಮಗೊಳ್ಳುತ್ತಿತ್ತು ಮತ್ತು ಅವರಿಬ್ಬರೂ ವೀರರಾಗಿ ಸಾವನ್ನಪ್ಪಿದ್ದಾಗ ಇಡೀ ಅಮೆರಿಕವೇ ಕಣ್ಣೀರಿಟ್ಟಿತು.

ಇದನ್ನೂ ಓದಿ: ಅಮೆರಿಕಾದಲ್ಲಿ ಶುರವಾಗಿದೆ ಡೆಮಾಕ್ರಾಟ್ ಪಕ್ಷದವರ ಟ್ರಂಪೀಕರಣ!?

ಬಿಜೆಪಿ ಸರ್ಕಾರ ಎಷ್ಟೇ ಪ್ರಯತ್ನಪಟ್ಟರೂ ಅಮೆರಿಕದ ನಾಸಾದಲ್ಲಿ ಈಗಲೂ ಜತನದಿಂದ ಕಾಪಿಟ್ಟಿರುವ ಟಿಪ್ಪುವಿನ ಹಾಗೂ ಈ ಜಗತ್ತಿನ ಮೊಟ್ಟ ಮೊದಲ ಕ್ಷಿಪಣಿಯನ್ನು ನಾಶಮಾಡಲಾಗಿಲ್ಲ. ಹಾಗೆಯೇ ಅಮೆರಿಕಾದ ಆಳುವ ವರ್ಗ ಎಷ್ಟೇ ಇಸ್ಲಾಮೋಫೋಬಿಕ್ ಆಗಿದ್ದರೂ ಅಮೆರಿಕದ ಕ್ರಾಂತಿಯ ಇತಿಹಾಸದಲ್ಲಿ ಹೈದರ್ ಮತ್ತು ಟಿಪ್ಪುಗಳ ಹೋರಾಟದ ಬಗ್ಗೆ ದಾಖಲಾಗಿರುವ ಅಪಾರ ಗೌರವವನ್ನು ಅಳಿಸಲಾಗಿಲ್ಲ.

ಇದು ನಾವರಿಯದ ನಮ್ಮ ಚರಿತ್ರೆ. ಅಥವಾ ಆಳುವವರ್ಗಗಳು ನಾವು ಮರೆಯಬೇಕೆಂದು ಬಯಸುವ ನಮ್ಮ ಹೆಮ್ಮೆಯ ಚರಿತ್ರೆ. ಅಧಿಕಾರದ ವಿರುದ್ಧ ವ್ಯಕ್ತಿಯು ನಡೆಸುವ ಹೋರಾಟವು ಮರೆವಿನ ವಿರುದ್ಧ ನೆನೆಪು ನಡೆಸುವ ಹೋರಾಟವೇ ಆಗಿರುತ್ತದೆ. ಅಮೆರಿಕ ಸಾಮ್ರಾಜ್ಯಶಾಹಿ ಸರ್ಕಾರ ಹಾಗೂ ಭಾರತದ ಹಿಂದೂತ್ವವಾದಿ ಸರ್ಕಾರ ಕಿತ್ತುಹಾಕ ಬಯಸುವ ನಮ್ಮ ಹೆಮ್ಮೆಯ ಇತಿಹಾಸದ ಕೆಲವು ಪುಟಗಳಿವು.

ಬ್ರಿಟಿಷ್ ವಸಾಹತುಶಾಹಿ-ಸಮಾನ ಶತ್ರು

೧೫ ನೇ ಶತಮಾನದಲ್ಲಿ ಕೊಲಂಬಸನು ಅಮೆರಿಕಕ್ಕೆ ಸಮುದ್ರ ಮಾರ್ಗವನ್ನು ಕಂಡುಹಿಡಿದ ನಂತರ ಮೂಲ ಯೋರೋಪಿನಿಂದ ಲಕ್ಷಾಂತರ ಸಂಖ್ಯೆಯಲ್ಲಿ ಯೂರೋಪಿಯನ್ನರು ಅಮೆರಿಕಕ್ಕೆ ವಲಸೆ ಹೋಗಿ ನೆಲೆಸಿದರು. ೧೬-೧೭ನೇ ಶತಮಾನದುದ್ದಕ್ಕೂ ಬ್ರಿಟಿಷ, ಫ್ರೆಂಚ್, ಸ್ಪಾನಿಷ ಹಾಗೂ ಪೋರ್ಚುಗೀಸ್ ವಸಾಹತುಶಾಹಿಗಳು ಅಮೆರಿಕದ ಮೂಲನಿವಾಸಿಗಳನ್ನು ಕೊಂದು-ಬಗ್ಗುಬಡೆದು, ಅಮೆರಿಕ ಖಂಡದ ವಿವಿಧ ಭಾಗಗಳನ್ನು ತಮ್ಮ ತಮ್ಮ ವಸಾಹತುಗಳನ್ನಾಗಿ ಮಾಡಿಕೊಂಡರು.

ಅದೇ ಸಮಯದಲ್ಲಿ ಇಡೀ ಜಗತ್ತಿನ ಏಕಾಧಿಪತ್ಯಕ್ಕಾಗಿ ಫ್ರೆಂಚ್ ಮತ್ತು ಬ್ರಿಟಿಷರ ನಡುವೆ ಯೂರೋಪಿನಲ್ಲಿ ನಡೆಯುತ್ತಿದ್ದ ಸಂಘರ್ಷ ಆಫ್ರಿಕಾ, ಏಶಿಯಾ ಹಾಗೂ ಅಮರಿಕದ ವಸಾಹತುಗಳಲ್ಲೂ ಮುಂದುವರಿಕೆಯಾಗುತ್ತಿದ್ದವು. ಭಾರತದ ಮೇಲಿನ ಅಧಿಪತ್ಯಕ್ಕಾಗಿ ಕಾದಾಡುತ್ತಿದ್ದಂತೆ ಅಮೆರಿಕದ ಮೇಲಿನ ತಮ್ಮ ಏಕಾಧಿಪತ್ಯಕ್ಕಾಗಿಯೂ ಫ್ರೆಂಚ್ ಮತ್ತು ಬ್ರಿಟಿಷರು ಕಾದಾಡುತ್ತಿದ್ದರು.

 Boston Tea Party
Boston Tea Party (america)

ಅದೇ ಸಂದರ್ಭದಲ್ಲಿ ಬ್ರಿಟಿಷ್ ಸಾಮ್ರಾಜ್ಯವಾದಿ ಸರ್ಕಾರಕ್ಕೂ ಮತ್ತು ಅದರಡಿಯಲ್ಲಿ ಸೀಮಿತ ಸ್ಥಳೀಯಾಧಿಕಾರವನ್ನು ಹೊಂದಿದ್ದ ಅಮೆರಿಕದ ಯೂರೋಪಿಯನ್ ಮೂಲದ ನೆಲೆಸಿಗ ವರ್ತಕ ಹಾಗೂ ಇತರ ಜನವರ್ಗಗಳಿಗೂ ದೊಡ್ಡ ವ್ಯಾವಹಾರಿಕ ವೈರುಧ್ಯ ಏರ್ಪಡುತ್ತಿತ್ತು. ತನ್ನ ಆಳ್ವಿಕೆಯಲ್ಲಿರುವ ಅಮೆರಿಕನ್ ವಸಾಹತುಗಳ ಬಗ್ಗೆ ಬ್ರಿಟಿಷ್ ಸರ್ಕಾರ ಜಾರಿ ಮಾಡುತ್ತಿದ್ದ ಕಾನೂನುಗಳೆಲ್ಲವೂ ನೆಲಸಿಗ ಅಮೆರಿಕನ್ನಿರಿಗಿಂತ ಬ್ರಿಟನ್ನಿನ ಹಿತಾಸಕ್ತಿಗಳಿಗೆ ಮಾತ್ರ ಅನೂಕೂಲವಾಗಿರುತ್ತಿದ್ದವು ಮತ್ತು ನಿಚ್ಚಳವಾಗಿ ತಾರತಮ್ಯಗಳಿಂದ ಕೂಡಿರುತ್ತಿದ್ದವು. ಜೊತೆಗೆ ಬ್ರಿಟನ್ ಸರ್ಕಾರ ಅಮೆರಿಕದ ನೆಲಸಿಗರನ್ನು ಎರಡನೇ ದರ್ಜೆ ಪ್ರಜೆಗಳಂತೆ ಪರಿಗಣಿಸುತ್ತಿತ್ತು. ಇದು ಬ್ರಿಟನ್ ಸಾಮ್ರಾಜ್ಯದ ವಿರುದ್ಧ ಅಮೆರಿಕದ ನೆಲೆಸಿಗ ಯೂರೋಪಿಯನ್ನರಲ್ಲಿ ಅಪಾರವಾದ ಅಸಮಾಧಾನ ಹುಟ್ಟಿಹಾಕಿತ್ತು.

ಅಮೆರಿಕದ ವ್ಯಾಪಾರಿಗಳ ಹಿತಾಸಕ್ತಿಯನ್ನು ಬಲಿಗೊಟ್ಟು ಬ್ರಿಟನ್ನಿನ ಟೀ ವ್ಯಾಪಾರಿಗಳಿಗೆ ಲಾಭ ಹೆಚ್ಚಿಸುವ ಉದ್ದೇಶದಿಂದ ಬ್ರಿಟನ್ನು ೧೭೭೩ರಲ್ಲಿ ಹೋಸ ಟೀ ತೆರಿಗೆ ನೀತಿ ಜಾರಿ ಮಾಡಿದ ನಂತರ ಹೆಪ್ಪುಗಟ್ಟಿದ ಅಸಮಾಧಾನ ಬೃಹತ್ ಆಕ್ರೋಶವಾಗಿ ಸ್ಪೋಟವಾಯಿತು. ೧೭೭೩ರ ಡಿಸೆಂಬರ್ ೧೬ರಂದು ಬ್ರಿಟನ್ನಿಂದ ಆಮದಾದ ಟೀ ಯನ್ನೆಲ್ಲಾ ಸಮುದ್ರಕ್ಕೆ ಎಸೆದ -ಬೋಸ್ಟನ್ ಟೀಪಾರ್ಟಿ ಯೆಂದು ಪ್ರಖ್ಯಾತವಾಗಿರುವ ಪ್ರತಿರೋಧದ ಮೂಲಕ ಅಮೆರಿಕನ್ನರ ಹೋರಾಟ ಹೊಸ ಮಜಲನ್ನು ಮುಟ್ಟಿತು. ಇದಕ್ಕೆ ಪ್ರತಿಯಾಗಿ ಬ್ರಿಟಿಷ್ ವಸಾಹತುಶಾಹಿಗಳು ಮ್ಯಾಸುಚುಸೆಟ್ಸ್ ಸಂಸ್ಥಾನಕ್ಕೆ ಬಿಟ್ಟುಕೊಟ್ಟಿದ್ದ ಸ್ವಯಮಾಡಳಿತ ಹಕ್ಕನ್ನು ರದ್ದುಮಾಡಿತ್ತು.

ಇದನ್ನೂ ಓದಿ: ಟ್ರಂಪ್ ಎಂದರೆ ಟ್ರಂಪ್ ಮಾತ್ರವಲ್ಲ! ಅಮೆರಿಕಾ ಗೆಲುವು ಮತ್ತು ಸೋಲಿನ ಕಂದಕಗಳೇನು?

ಇವೆಲ್ಲವೂ ಬ್ರಿಟಿಶ ಸಾಮ್ರಾಜ್ಯಶಾಹಿಯ ವಿರುದ್ಧ ಆರ್ಥಿಕ ನೆಲೆಯಲ್ಲಿ ಮಡುಗಟ್ಟುತ್ತಿದ್ದ ಅಸಮಾಧಾನವನ್ನು ರಾಜಕೀಯ ಸ್ವಾತಂತ್ರ್ಯದ ಹೋರಾಟವನ್ನಾಗಿ ರೂಪಿಸಿತು. ೧೭೭೪ರಲ್ಲಿ ಬ್ರಿಟಿಷ್ ಅಡಿಯಲ್ಲಿದ್ದ ಅಮೆರಿಕದ ೧೮ ಸಂಸ್ಥಾನಗಳು ಮೊಟ್ಟಮೊದಲ ಬಾರಿಗೆ ಒಟ್ಟು ಸೇರಿ ಅಮೆರಿಕ ಖಂಡಮಟ್ಟದ ಸಮ್ಮೇಳನವನ್ನು ನಡೆಸಿ ಬ್ರಿಟಿಶರ ವಿರುದ್ಧ ಯುದ್ಧ ಘೋಷಿಸಿದವು. ಮರುವರ್ಷದಿಂದಲೇ ಅಮೆರಿಕದ ಹೋರಾಟಗಾರರಿಗೂ ಹಾಗೂ ಬ್ರಿಟಿಷ್ ಸೇನೆಯ ನಡುವೆ ಸಶಸ್ತ್ರ ಕಾದಾಟ ಪ್ರಾರಂಭವಾಗುವ ಮೂಲಕ ಅಮೆರಿಕ ಕ್ರಾಂತಿ ಪ್ರಾರಂಭವಾಯಿತು.

೧೭೭೬ ಜುಲೈ ೪ ಅಮೆರಿಕನ್ ವಸಾಹತುಗಳ ಎರಡನೇ ಖಂಡಾಂತರ ಸಮ್ಮೇಳನದಲ್ಲಿ ಅಮೆರಿಕನ್ ಕ್ರಾಂತಿಕಾರಿಗಳು ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಘೋಷಿಸಿದರೂ ಮುಂದಿನ ಐದು ವರ್ಷಗಳ ಕಾಲ ಅಮೆರಿಕನ್ ಕ್ರಾಂತಿಕಾರಿಗಳು ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ನಡುವೆ ಘನಘೋರ ಸಶಸ್ತ್ರ ಸಂಘರ್ಷವೂ ನಡೆಯಿತು.

ಹೈದರ್-ಟಿಪ್ಪು- ಅಮೆರಿಕನ್ನರ ಸಮರ ಸಂಗಾತಿಗಳು

ಈ ಸಂದರ್ಭದಲ್ಲೇ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಜಗತ್ತಿನ ಇತರ ಭಾಗಗಳಲ್ಲಿ ನಡೆಯುತ್ತಿರುವ ಹೋರಾಟಗಳು ವಿಜಯಿಯಾಗುವುದು ತಮ್ಮ ವಿಜಯಕ್ಕೂ ಪೂರ್ವಶರತ್ತು ಎಂಬುದನ್ನು ಅಮೆರಿಕದ ಕ್ರಾಂತಿಕಾರಿಗಳು ಅರ್ಥಮಾಡಿಕೊಂಡರು. ಅದರ ಭಾಗವಾಗಿ ಜಗತ್ತಿನ ವಿವಿಧ ಕಡೆಗಳಿಗೆ ಅದರಲೂ ಬ್ರಿಟಿಷ ಸಾಮ್ರಾಜ್ಯಶಾಹಿಯ ಪರಮ ವೈರಿಯಾಗಿದ್ದ ಹಾಗೂ ಭಾರತವನ್ನು ಒಳಗೊಂಡಂತೆ ಜಗತ್ತಿನ ಹಲವಾರು ಭಾಗಗಳಲ್ಲಿ ಬ್ರಿಟಿಶ್ ಸಾಮ್ರಾಜ್ಯಶಾಹಿಗೆ ಸವಾಲು ಹಾಕುತ್ತಿದ್ದ ಫ್ರಾನ್ಸ್, ಸ್ಪೇನ್, ಇನ್ನಿತ್ಯಾದಿ ದೇಶಗಳಿಗೆ ತಮ್ಮ ರಾಯಭಾರಿಗಳನ್ನು ಕಳಿಸತೊಡಗಿದರು.

ಅಮೆರಿಕದ ಪ್ರಥಮ ಸಾಲಿನ ಕ್ರಾಂತಿಕಾರಿಗಳೂ ಹಾಗೂ ಆ ನಂತರದ ಸ್ವತಂತ್ರ ಅಮೆರಿಕದ ಅಧ್ಯಕ್ಷರುಗಳೂ ಆದ ಜಾರ್ಜ್ ವಾಷಿಂಗ್‌ಟನ್, ಥಾಮಸ್ ಜೆಫರ್ಸನ್, ಫ್ರಾಂಕ್ಲಿನ್, ಮ್ಯಾಡಿಸನ್ ಹಾಗೂ ಇನ್ನಿತರರು ಅಮೆರಿಕದ ಸ್ವಾತಂತ್ರ್ಯಕ್ಕೆ ಜಾಗತಿಕ ಬೆಂಬಲ ಗಳಿಸಿಕೊಳ್ಳುವಲ್ಲಿ ಹಾಗೂ ಜಗತ್ತಿನಾದ್ಯಂತ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ನಡೆಯುತ್ತಿದ್ದ ಸಮರಗಳ ಜೊತೆ ಸಂಬಂಧ ಹಾಗೂ ಸಹಕಾರಗಳನ್ನು ಸ್ಥಾಪಿಸಿಕೊಳ್ಳುವಲ್ಲಿ ಅಪಾರ ಪರಿಶ್ರಮ ತೋರಿದರು.

Character and Policies of Haider Ali and Tipu Sultan

ಜಗತ್ತಿನ ವಿವಿದೆಡೆಗಳಲ್ಲಿ ನಡೆಯುತ್ತಿದ್ದ ಬ್ರಿಟಿಶ್ ವಿರೋಧಿ ಸಮರಗಳಲ್ಲಿ ಅಮೆರಿಕನ್ನರು ಅತ್ಯಂತ ಗೌರವ, ಆದರ ಹಾಗೂ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು ಮೈಸೂರು ಪ್ರಾಂತ್ಯದಲ್ಲಿ ಹೈದರ್ ಆಲಿ ಖಾನ್ ಮತ್ತು ಟಿಪ್ಪೂ ಸುಲ್ತಾನ್ ಬ್ರಿಟಿಷರ ವಿರುದ್ಧ ನಡೆಸುತ್ತಿದ್ದ ಸ್ವಾತಂತ್ರ್ಯ ಸಮರದ ಬಗ್ಗೆ ಎಂಬುದು ನಿಜವಾದ ದೇಶಭಕ್ತರಿಗೆಲ್ಲಾ ಹೆಮ್ಮೆ ತರುವ ವಿಷಯವಾಗಿದೆ.

ಇದನ್ನೂ ಓದಿ: ಅವಧಿಯೊಳಗೆ ಚಾರ್ಜ್ ಶೀಟ್ ಸಲ್ಲಿಸದಿದ್ದರೆ ಜಾಮೀನು ಪಡೆಯಲು ಅವಕಾಶ: ಆದರೂ ಉಳಿದಿವೆ ಕೆಲವು ಪ್ರಶ್ನೆಗಳು!

ಅಮೆರಿಕನ್ ಕ್ರಾಂತಿಕಾರಿಗಳಿಗೆ ಹೈದರ್ ಮತ್ತು ಟಿಪ್ಪುವಿನ ಪರಿಚಯ ಮಾಡಿಕೊಟ್ಟಿದ್ದು ಫ್ರೆಂಚರು. ಅಮೆರಿಕದ ಎರಡನೇ ಅಧ್ಯಕ್ಷರಾದ ಥಾಮಸ್ ಜೆಫರ್ಸನ್ ಅವರು ಅಮೆರಿಕನ್ ಸಂಗ್ರಾಮದ ಸಂದರ್ಭದಲ್ಲಿ ಪ್ರಾನ್ಸಿನಲ್ಲಿದ್ದಾಗ ಫ಼್ರೆಂಚ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಹೈದರ್ ಮತ್ತು ಟಿಪ್ಪುಗಳ ಸಮರ ಸಾಧನೆಗಳನ್ನು ಹಾಗೂ ಆರ್ಕಾಟ್, ಕಡಲೂರು, ಮದ್ರಾಸ್ ಇನ್ನಿತರ ಕಡೆ ಬ್ರಿಟಿಶ್ ಸೈನ್ಯ ಹೈದರ್ ಮತ್ತು ಟಿಪ್ಪು ಅವರ ರಣಾಕ್ರಮಣಕ್ಕೆ ಶರಣಾಗಿ ಓಡಿ ಹೋಗುತ್ತಿದ್ದನ್ನು, ಅಥವಾ ಹೈದರ್ ಶರತ್ತುಗಳಿಗೆ ಒಪ್ಪಿ ಅನಿವಾರ್ಯವಾಗಿ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದನ್ನು ಅತ್ಯಂತ ಕುತೂಹಲ ಹಾಗೂ ಆಸಕ್ತಿಗಳಿಂದ ಟಿಪ್ಪಣಿ ಮಾಡಿಕೊಂಡು ಅಮೆರಿಕದ ತಮ್ಮ ಸಂಗಾತಿಗಳಿಗೆ ರವಾನಿಸುತ್ತಿದ್ದರು. ಈ ಸಾಹಸಗಾಥೆಗಳು ಅಲ್ಲಿ ಇನ್ನಷ್ಟು ವಿಸ್ತೃತ ಪ್ರಚಾರ ಪಡೆದುಕೊಂಡು ಹೈದರ್ ಮತ್ತು ಟಿಪ್ಪು ಸುಲ್ತಾನರು ಆಗ ಅಮೆರಿಕದ ಮನೆಮಾತಾಗಿಬಿಟ್ಟಿದ್ದರು.

ಹೈದರ್ ಆಲಿ ಬಗ್ಗೆ ಅಮೆರಿಕನ್ ಲಾವಣಿಗಳು!

ಉದಾಹರಣೆಗೆ, ಅಮೆರಿಕದ ಸ್ವಾತಂತ್ರ್ಯ ಸಮರದ ಇತಿಹಾಸಕಾರ ಫ್ರಾಂಕ್ ಮೂರ್ ಅವರು ತಮ್ಮ Diary of the American Revolution ನಲ್ಲಿ ದಾಖಲಿಸುವಂತೆ ಹೈದರ್ ಮತ್ತು ಬ್ರಿಟಿಶರ ನಡುವೆ ನಡೆಯುತ್ತಿದ್ದ ಎರಡನೇ ಆಂಗ್ಲೋ ಮೈಸೂರ್ ಯುದ್ಧದಲ್ಲಿ (೧೭೮೦-೮೪) ಟಿಪ್ಪು ನೇತೃತ್ವದ ಮೈಸೂರು ಸೇನೆಯು ಬ್ರಿಟಿಷರಿಗೆ ನೀಡುತ್ತಿದ್ದ ಅನಿರಿಕ್ಷಿತ ಮಾರಣಾಂತಿಕ ಪೆಟ್ಟುಗಳ ಮಾಹಿತಿಗಳು ಅಮೆರಿಕನ್ನರಿಗೆ ೧೭೮೧ರ ಆಗಸ್ಟಿಗೆ ತಲುಪಿತ್ತು.

೧೭೮೧ರ ಅಕ್ಟೋಬರ್‌ನಲ್ಲಿ ಲಾರ್ಡ್ ಕಾರನ್‌ವಾಲಿಸನ ನೇತೃತ್ವದ ಬ್ರಿಟಿಷ್ ಸಾಮ್ರಾಜ್ಯದ ಸೇನೆ ಅಮೆರಿಕಾದ ಕ್ರಾಂತಿಕಾರಿ ಸೇನೆಯ ದಂಡನಾಯಕರಾಗಿದ್ದ ಜಾರ್ಜ್ ವಾಷಿಂಗ್‌ಟನ್ನರಿಗೆ ಶರಣಾಯಿತು. ಒಂಭತ್ತು ದಿನಗಳ ನಂತರ ಈ ವಿಜಯವನ್ನು ನ್ಯೂಜೆರ್ಸಿ ಪ್ರಾಂತ್ಯದ ಟ್ರೆನ್ಟನ್ನಲ್ಲಿ ಆಚರಿಸಲಾಯಿತು. ಹಾಗೂ ಈ ವಿಜಯದಲ್ಲಿ ತಾವು ನೆನೆಸಿಕೊಳ್ಳಬೇಕಿರುವ ೧೩ ಜನರ ನೆನಪಿನಲ್ಲಿ ೧೩ ತೋಪುಗಳನ್ನು ಹಾರಿಸಲಾಯಿತು.

ಅಮೆರಿಕದ ಜನರು ತಮ್ಮ ಈ ಸ್ವಾತಂತ್ರ್ಯ ಸಂಭ್ರಮದಲ್ಲೂ ಮರೆಯದೇ ನೆನೆಸಿಕೊಂಡ ೧೩ ಜನರಲ್ಲಿ ಒಬ್ಬರು ಭಾರತದ ಹೆಮ್ಮೆಯ ಹೈದರ್ ಆಲಿ.

ಫ್ರಾಂಕ್ ಮೂರ್ ದಾಖಲಿಸಿರುವಂತೆ ಅಮೆರಿಕನ್ನರು ಹೈದರ್ ಆಲಿಯನ್ನು ನೆನೆಸಿಕೊಂಡಿದ್ದೂ ಹೀಗೆ:

“The great and heroic Hyder Ali, raised up by providence to avenge the numberless cruelties perpetrated by the English on his unoffending countrymen, and to check the insolence and reduce the power of Britain in the East Indies.” ಅಂದರೆ- ತನ್ನ ಅಮಾಯಕ ದೇಶವಾಸಿಗಳ ಮೇಲೆ ಇಂಗ್ಲೀಷರು ನಡೆಸಿದ ಅಸಂಖ್ಯಾತ ದಾರುಣ ಕ್ರೌರ್ಯಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಮತ್ತು ಭಾರತದಲ್ಲಿ ಬ್ರಿಟಿಷರ ದರ್ಪ ಮತ್ತು ಆಳ್ವಿಕೆಯನ್ನು ಮೊಟಕುಗೊಳಿಸಲು ದೈವಕೃಪೆಯಿಂದ ಮೇಲೆದ್ದು ಬಂದ ಮಹಾನ್ ವೀರ ಹೈದರ್ ಆಲಿ…

ಇದನ್ನೂ ಓದಿ: ಹಸಿವನ್ನು ಹೆಚ್ಚಿಸುತ್ತಿವೆ ಮೋದಿಯ ಹೊಸ ಕೃಷಿ ಕಾಯಿದೆಗಳು

ಅಷ್ಟು ಮಾತ್ರವಲ್ಲ. ಚಿಕಾಗೋ ವಿಶ್ವವಿದ್ಯಾಲಯದ ಸಂಶೋಧಕ ಪ್ರೊ. ಬ್ಲೇಕ್ ಸ್ಮಿತ್‌ಅವರು ಹೇಳುವಂತೆ ಟಿಪ್ಪು, ಹೈದರ್ ಮತ್ತು ಮೈಸೂರು ಪ್ರಾಂತ್ಯಗಳ ಹೆಸರು ೧೮ ನೇ ಶತಮಾನದ ಪ್ರಖ್ಯಾತ ಇತಿಹಾಸಕಾರ ಜೆಡಿದಾ ಮೋರ್ಸ್ ಅವರು ೧೭೯೩ರಲ್ಲಿ ಬರೆದ The American Universal Geography ವನ್ನೂ ಒಳಗೊಂಡಂತೆ ಹಲವಾರು ಪಠ್ಯಪುಸ್ತಕಗಳ ಭಾಗವಾಗಿತ್ತು. .

ಅಮೆರಿಕ ಸ್ವಾತಂತ್ರ್ಯ ಸಂಗ್ರಾಮವನ್ನು ಗೆಲ್ಲಬೇಕೆಂದರೆ ಜಾಗತಿಕವಾಗಿ ಬ್ರಿಟಿಷ್ ಸಾಮ್ರಾಜ್ಯದ ಶಕ್ತಿ ಕುಂದುವುದು ಅತ್ಯಗತ್ಯವೆಂದು ಅರ್ಥಮಾಡಿಕೊಂಡಿದ್ದ ಅಮೆರಿಕನ್ ಕ್ರಾಂತಿಕಾರಿಗಳು ಫ಼್ರೆಂಚರೊಂದಿಗೆ ಮಾತ್ರವಲ್ಲದೆ ಬ್ರಿಟಿಶ್ ಸಾಮ್ರಾಜ್ಯಕ್ಕೆ ನಿಜವಾದ ಸವಾಲಾಗಿದ್ದ ಎಲ್ಲರೊಂದಿಗೂ ನೇರ ರಣಮೈತ್ರಿ ಮಾಡಿಕೊಳ್ಳುವ ಆಸಕ್ತಿಯನ್ನು ಹೊಂದಿದ್ದರು.

ಅದರ ಭಾಗವಾಗಿಯೇ ಫ್ರೆಂಚ್ ಮಿಲಿಟರಿ ಸಮಾಲೋಚಕ ಥಾಮಸ್ ಕಾನ್ವೆಯ ಸಲಹೆಯ ಮೇರೆಗೆ ಏಷಿಯಾ ಖಂಡದಲ್ಲಿ ಬ್ರಿಟಿಷರಿಗೆ ದೊಡ್ಡ ಸವಾಲಾಗಿದ್ದ ಟಿಪ್ಪೂ ಸಮರಕ್ಕೆ ಸಹಾಯವಾಗಲು ೧೭೭೭ರಲ್ಲಿ ಒಂದು ಸೇನಾಪಡೆಯನ್ನು ಕಳಿಸುವ ಬಗ್ಗೆಯೂ ಯೋಚಿಸಿದ್ದರು.

ಅಮೆರಿಕದ ವಿವಿಧ ಸಂಸ್ಥಾನಗಳೂ ಸಹ ವಿವಿಧ ರೀತಿಯಲ್ಲಿ ಮೈಸೂರು ಸಂಸ್ಥಾನದ ಬಗ್ಗೆ ಹಾಗೂ ಹೈದರ್-ಟಿಪ್ಪೂಗಳ ತಮ್ಮ ಗೌರವವನ್ನು ವ್ಯಕ್ತಪಡಿಸಿದ್ದವು. ೧೭೮೧ರಲ್ಲಿ ಪೆನ್ಸಿಲ್ವೇನಿಯಾ ಪ್ರಾಂತ್ಯದ ಶಾಸನಸಭೆಯು ತಮ್ಮ ಒಂದು ಯುದ್ಧ ನೌಕೆಗೆ Hyder-Ally (ಮಿತ್ರ) ಎಂದು ಹೆಸರಿಟ್ಟು ಗೌರವಿಸಿತು.

ಅಮೆರಿಕದ ಆ ಕಾಲದ ಪ್ರಖ್ಯಾತ ಕವಿ ಹಾಗೂ ಅಮೆರಿಕದ ಎರಡನೇ ಅಧ್ಯಕ್ಷರಾಗಿದ್ದ ಥಾಮಸ್ ಜೆಫರಸನ್ ಅವರ ಮಿತ್ರ ಹೈದರ್ ಆಲಿಯ ಕುರಿತು ನುಡಿ ನಮನವನ್ನೇ ಮಾಡಿರುವುದೂ ಸಹ ಅಮೆರಿಕದ ಇತಿಹಾಸದಲ್ಲಿ ದಾಖಲಾಗಿದೆ:

From an Eastern prince she takes her name,
Who, smit with freedom’s sacred flame
Usurping Britons brought to shame,
His country’s wrongs avenging

(ಹೆಸರಿದು ಪೂರ್ವದ ರಾಜನದು
ಸ್ವಾತಂತ್ರ್ಯದ ಪವಿತ್ರ ಜ್ವಾಲೆಯಲ್ಲಿ
ತನ್ನ ನಾಡಿಗೆ ಅನ್ಯಾಯ ಬಗೆದ
ದರ್ಪಿಷ್ಟ ಬ್ರಿಟಿಷರಿಗೆ
ಪಾಠ ಕಲಿಸಿದ ರಣಕಲಿಯದು….)

ಹಲವಾರು ಅಮೆರಿಕನ್ ಇತಿಹಾಸಕಾರರು ದಾಖಲಿಸಿರುವಂತೆ ಆಗ ಅಮೆರಿಕನ್ ಯುದ್ಧದಲ್ಲಿ ವೀರೋಚಿತ ಪಾತ್ರವಹಿಸಿದ ಹಲವಾರು ಯುದ್ಧ ಕುದುರೆಗಳಿಗೂ ಹೈದರ್ ಹಾಗೂ ಟಿಪ್ಪು ಎಂದು ಹೆಸರಿಟ್ಟಿದ್ದರಂತೆ!

೧೭೯೯ರ ನಾಲ್ಕನೇ ಆಂಗ್ಲೋ-ಮೈಸೂರ್ ಯುದ್ಧದಲ್ಲಿ ಟಿಪ್ಪು ವೀರೋಚಿತವಾಗಿ ಹೋರಾಡಿ ರಣರಂಗದಲ್ಲಿ ಮಡಿದ ನಂತರ ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಭಾರತದಲ್ಲಿ ಎದುರಾಗಿದ್ದ ಸವಾಲು ಅಂತಿಮಗೊಳ್ಳುತ್ತದೆ.

ಆದರೂ ಅಮೆರಿಕನ್ನರು ಸುಲಭವಾಗಿ ಹೈದರ್-ಟಿಪ್ಪುಗಳನ್ನು ಮರೆಯುವುದಿಲ್ಲ. ಅಮೆರಿಕದ ಜಾನ್ ರಸೆಲ್ ಎನ್ನುವ ಪಾದ್ರಿ ೧೮೦೦ರ ಜುಲೈ ೪ ರಂದು ಅಮೆರಿಕದ ಸ್ವಾತಂತ್ರ್ಯ ಘೋಷಣೆಯ ದಿನಾಚರಣೆಯೆಂದು ದಿವ್ಯ ಆಶೀರ್ವಾದ ಪ್ರವಚನವನ್ನು ಮಾಡುತ್ತಾ ಬ್ರಿಟಿಷ್ ಸಾಮ್ರಾಜ್ಯವಾದದ ಅಪಾಯದ ಬಗ್ಗೆ ತನ್ನ ಕೇಳುಗರಿಗೆ ಎಚ್ಚರಿಸುತ್ತಾರೆ. ಹಾಗೂ ತನ್ನ ಪ್ರಾರ್ಥನಾ ಸಭೆಯಲ್ಲಿದ್ದವರಿಗೆ ಟಿಪ್ಪುವಿನ ಸಾವಿನ ಕುರಿತು ಹೇಳುತ್ತಾ:
” ಟಿಪ್ಪು ಸುಲ್ತಾನರು ಅತ್ಯಂತ ವೀರೋಚಿತವಾಗಿ ತಮ್ಮ ಸ್ವಾತಂತ್ರ್ಯ ಕಾಪಾಡಿಕೊಳ್ಳಲು ಹೋರಾಡುತ್ತಾ ಒಬ್ಬ ನಿಜವಾದ ರಾಜನಿಗೆ ತಕ್ಕುದಾದ ಸಾವನ್ನು ಅಪ್ಪಿದರು” ಎಂದು ತಿಳಿಸುತ್ತಾರೆ.

ಅಮೆರಿಕದ ಆರ್ಖೈವ್ಸ್ ನಲ್ಲಿ ಭದ್ರಗೊಂಡ ಹೈದರ್-ಟಿಪ್ಪು ನೆನಪು

ಒಂದೆಡೆ ಭಾರತದಲ್ಲಿ ಹೈದರ್ ಮತ್ತು ಟಿಪ್ಪು ಅವರ ನೆನೆಪುಗಳನ್ನು ವಿಲನೀಕರಿಸುವ ಅಥವಾ ಅಳಿಸಿಬಿಡುವ ಕುತಂತ್ರಗಳು ಮತ್ತು ರಾಜತಂತ್ರಗಳು ನಡೆಯುತ್ತಿವೆ. ಆದರೆ ಅಮೆರಿಕದಲ್ಲಿ ನಿರುದ್ದಿಶ್ಯವಾಗಿ ಹೈದರ್ ಮತ್ತು ಟಿಪ್ಪು ಅವರ ನೆನಪುಗಳು ಆರ್ಖವ್ ಆಗುತ್ತಲಿದೆ.

೨೦೧೦ರಲ್ಲಿ ಅಮೆರಿಕಾದ ನ್ಯಾಶನಲ್ ಆರ್ಖೈವ್ಸ್ ಮತ್ತು ಯೂನಿವರ್ಸಿಟಿ ಆಫ್ ವರ್ಜೀನಿಯಾ ಗಳು ಪ್‌ಅಮೆರಿಕ ಸಂಸ್ಥಾನದ ಪಿತಾಮಹರುಗಳಿಗೆ ಸಂಬಂಧಪಟ್ಟ ಐತಿಹಾಸಿಕ ದಾಖಲೆಗಳನ್ನು ಸಾರ್ವಜನಿಕಗೊಳಿಸುವ ಒಂದು ವೆಬ್ ಸೈಟನ್ನು ರೂಪಿಸಿದ್ದಾರೆ. ಅದರಲ್ಲಿ ಅಮೆರಿಕದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳು ಹಾಗೂ ಅಮೆರಿಕದ ಪ್ರಾರಂಭಿಕ ಕಾಲದ ಅಧ್ಯಕ್ಷರುಗಳಾದ ಜಾರ್ಜ್ ವಾಷಿಂಗ್‌ಟನ್, ಬೆಂಜಮಿನ್ ಫ್ರಾಂಕ್ಲಿನ್, ಥಾಮ್ಸ್ ಜೆಫರ್ಸನ್, ಅಲೆಕ್ಸಾಂಡರ್ ಹ್ಯಾಮಿಲ್ಟನ್ ಮತ್ತು ಜೇಮ್ಸ್ ಮಾಡಿಸನ್ ಹಾಗೂ ಇನ್ನಿತರರುಗಳು ಕ್ರಾಂತಿಕಾಲದಲ್ಲಿ ಹಾಗು ಆ ತರುಣದಲ್ಲಿ ಪರಸ್ಪರ ಬರೆದ ಪತ್ರಗಳು, ಬೇರೆಬೇರೆಯವರು ಈ ಮಹನೀಯರುಗಳಿಗೆ ಬರೆದ ಪತ್ರಗಳನ್ನು ಅಪ್ಲೋಡ್ ಮಾಡಲಾಗಿದೆ. ಇದರಲ್ಲಿ ಅಮೆರಿಕದ ಕ್ರಾಂತಿ ಸಂದರ್ಭದಲ್ಲಿ ಮೈಸೂರಿನ ಹೈದರ್ ಅಲಿ ಮತ್ತು ಟಿಪ್ಪೂ ಸುಲ್ತಾನರಬಗ್ಗೆ, ಅವರ ಸಮರಸಾಧನೆಗಳ ಬಗ್ಗೆ ಹಾಗು ಅವುಗಳ ಚಾರಿತ್ರಿಕ ಮಹತ್ವಗಳ ಬಗೆಗೆ ಅವರುಗಳ ನಡೆದ ಪತ್ರಸಂವಾದಗಳನ್ನು ದಾಖಲಿಸಲಾಗಿದೆ.

The Last Time the US and India Were This Aligned? 1780 – The Diplomat

ಇವೆಲ್ಲವನ್ನೂ ಅತ್ಯಂತ ಜತನದಿಂದ ಹಾಗೂ ಅಕೆಡೆಮಿಕ್ ಶಿಸ್ತಿನಿಂದ ವಿದ್ವತ್ಪೂರ್ಣ ಅಧ್ಯಯನ ಮಾಡಿರುವ ತುಮಕೂರು ಮೂಲದ ಸಂಶೋಧಕ ಅಮೀನ್ ಅಹ್ಮದ್ ಅವರು ಅವುಗಳ ಸಂಕ್ಷಿಪ್ತ ವಿವರಗಳನ್ನು ತಮ್ಮ https://historyofmysuru.blogspot.com/ ಎಂಬ ವೆಬ್ ವಿಳಾಸದಲ್ಲಿ ದಾಖಲಿಸಿದ್ದಾರೆ. ನಮ್ಮ ನಾಡಿನ ನಿಜವಾದ ಹೆಮ್ಮೆಯ ಇತಿಹಾಸವನ್ನು ತಿಳಿದುಕೊಳ್ಳಬಯಸುವವರು ಅದಕ್ಕೆ ಭೇಟಿಕೊಟ್ಟು ಇನ್ನಷ್ಟು ವಿವರಗಳನ್ನು ಪಡೆದುಕೊಳ್ಳಬಹುದು.

ಆ ಕೆಲವು ಪತ್ರೋತ್ತರಗಳಲ್ಲಿ ದಾಖಲಾಗಿರುವ ಅಂದಿನ ಕೆಲವು ವಿದ್ಯಮಾನಗಳು ಇಂತಿವೆ:

೧೭೮೧ರುದ್ದಕ್ಕೂ ಅಮೆರಿಕಾದ ಕ್ರಾಂತಿಕಾರಿಗಳು ಆಂಗ್ಲೋ-ಮೈಸೂರು ಯುದ್ಧದ ಬಗ್ಗೆ ತೀವ್ರವಾದ ಕುತೂಹಲದಿಂದ ಪತ್ರವ್ಯವಹಾರಗಳನ್ನು ಮಾಡಿದ್ದಾರೆ. ಈ ಯುದ್ಧದಲ್ಲಿ ಬ್ರಿಟಿಶರು ಸೋಲಬೇಕೆಂಬ ಬಲವಾದ ಆಸೆ ಹಾಗೂ ಭರವಸೆಗಳು ಅವರಲ್ಲಿತ್ತು.

೧೭೮೧ರ ಏಪ್ರಿಲ್ ೪ ರಂದು ಬ್ರಸೇಲ್ಸ್ ನಿಂದ ಜಾನ್ ಆಡಮ್ಸ್ ಗೆ ಪತ್ರ ಬರೆಯುವ ಎಡ್ಮಂಡ್ ಜೆನ್ನಿಂಗ್ಸ್ ರ್‍ಯಾಂಡಾಲ್ಫ್ ಅವರು ಬ್ರಿಟಿಷರ ವಿರುದ್ಧ ಹೈದರ್ ಆಲಿ ನಡೆಸುತ್ತಿದ್ದ ಸಮರದ ಕೂಲಂಕಷವಾದ ವಿವರಗಳನ್ನು ನೀಡುತ್ತಾರೆ. ಅದರಲ್ಲಿ ಅವರು ಬ್ರಿಟಿಷ ಪತ್ರಿಕೆಯೊಂದರಲ್ಲಿ ವರದಿಯನ್ನು ಉಲ್ಲೇಖಿಸುತ್ತಾ ಹೈದರ್ ಅಲಿಯ ೮೦,೦೦೦ ಬಲದ ಅಶ್ವಪಡೆಯು ಆರ್ಕಾಟನ್ನು ಮುತ್ತಿಗೆಹಾಕಿರುವ ಬಗ್ಗೆ ವಿವರಗಳನ್ನು ನೀಡುತ್ತಾರೆ. ಹಾಗೆಯೇ ಈ ಕದನದಲ್ಲಿ ಬ್ರಿಟಿಶ್ ಸೇನೆಯ ಕರ್ನಲ್ ಬೇಲಿ ಮತ್ತು ಕರ್ನಲ್ ಫ್ಲೆಚರ್ ಸಂಪೂರ್ಣವಾಗಿ ಸೋತು ೪೦೦ ಯೂರೋಪಿಯನ್ ಮತ್ತು ೪೦೦೦ ಭಾರತೀಯ ಸಿಪಾಯಿಗಳು ಸತ್ತು ಸ್ವಲ್ಪದರಲ್ಲ್ಲೇ ಕರ್ನಲ್ ಮುನ್ರೊ ತಪ್ಪಿಸಿಕೊಂಡು ಮದ್ರಾಸಿಗೆ ಪಲಾಯನಮಾಡಿದ್ದರ ಬಗ್ಗೆ ಹಾಗೂ ಹೈದಾರಾಲಿಯ ಸೈನ್ಯಕ್ಕೆ ಆಗಿರುವ ಭೌಗೋಳಿಕ ವಿಜಯದ ಬಗ್ಗೆ ಸಂತಸದಿಂದ ದಾಖಲಾಗಿರುವ ವಿವರಗಳಿವೆ. ರ್‍ಯಾಂಡಾಲ್ಫ್ ಅವರು ೧೭೭೫ರಲ್ಲಿ ಜಾರ್ಜ್ ವಾಷಿಂಗ್‌ಟನ್ ಅವರ ಆಪ್ತ ಸೇನಾಧಿಕಾರಿಯಾಗಿದ್ದರು. ಮತ್ತು ಥಾಮಸ್ ಜೆಫರ್ಸನ್ ಅವರ ನಂತರ ೧೭೯೪ರಲ್ಲಿ ಅಮೆರಿಕದ ಎರಡನೇ ಸೆಕ್ರೆಟರಿ ಆಫ್ ಸ್ಟೇಟ್ (ಗೃಹಮಂತ್ರಿ) ಯಾಗುತ್ತಾರೆ.

ಇದನ್ನೂ ಓದಿ: ಬಾಬರಿ ಮಸೀದಿ ದ್ವಂಸಗೊಳಿಸಲು ಯಾರೂ ಸಂಚು ಮಾಡಿಲ್ಲ ಎನ್ನಲು ಕೋರ್ಟ್‌ ಕೊಟ್ಟ 10 ಕಾರಣಗಳು!

ಜಾನ್ ಕ್ವಿನ್ಸಿ ಆಡಮ್ಸ್ ಅವರು ೧೮೨೫ರಲ್ಲಿ ಅಮೆರಿಕದ ಆರನೇ ಅಧ್ಯಕ್ಷರಾಗುತ್ತಾರೆ. ಅವರು ೧೩ನೇ ವಯಸ್ಸಿನಲ್ಲಿದ್ದಾಗ ಹೈದರಾಲಿಯ ವಿಜಯ ಹಾಗೂ ಕರ್ನಲ್ ಫೆಚರ್ ಮರಣ ಮತ್ತು ಕರ್ನಲ್ ಬೇಲಿ ಬಂಧನದ ಕುರಿತು ತನ್ನ ತಾಯಿ ಅಬಿಗೈಲ್ ಆಡಮ್ಸ್ ಗೆ ೧೭೮೧ರ ಏಪ್ರಿಲ್ ೮ರಂದು ಬರೆದ ಪತ್ರವೂ ಅಮೆರಿಕನ್ ಆರ್ಖೈವ್ಸ್ ನಲ್ಲಿ ಸುರಕ್ಷಿತವಾಗಿದೆ.

ಕೆಲವು ದಿನಗಳನಂತರ ೧೭೮೨ರ ಜೂನ್ ೨೫ರಂದು ಜೇಮ್ಸ್ ಮ್ಯಾಡಿಸನ್ ಅವರು ಫಿಲಿಡಾಲ್ಫಿಯಾದಿಂದ ರ್‍ಯಾಮ್ಡ್ಲಾಫ್ ಅವರಿಗೆ ಬರೆದ ಪತ್ರದಲ್ಲಿ ಹೈದರಾಲಿಯವರು ಇಂಗ್ಲಿಷರ ವಿರುದ್ಧ ಗಳಿಸುತ್ತಿರುವ ವಿಜಯದ ಬಗ್ಗೆ ಹೆಮ್ಮೆಯಿಂದ ಪ್ರಸ್ತಾಪಿಸುತ್ತಾರೆ. ಮ್ಯಾಡಿಸನ್ ಅವರು ೧೮೦೯ರಲ್ಲಿ ಅಮೆರಿಕದ ನಾಲ್ಕನೇ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ.

ಇದು ನಮ್ಮ ಹೆಮ್ಮೆಯ ಹೈದರಾಲಿ ಖಾನ್ ಮತ್ತು ಟೀಪೂ ಸುಲ್ತಾನ್. ಈಗ ತಾನೇ ಜಗತ್ತಿನ ದೊಡ್ಡ ಸಾಮ್ರಜ್ಯಶಾಹಿಯಾಗಿ ಬದಲಾಗಿರುವ ಅಮೆರಿಕಕ್ಕೆ, ಹಾಗೂ ಭಾರತದ ಬ್ರಾಹ್ಮಣಶಾಹಿಗಳಿಗೆ ಹಾಗೂ ನವವಸಾಹತುಶಾಹಿಗಳ ಗುಲಾಮರಿಗೆ ಅಪ್ಪಟ ಸ್ವಾತಂತ್ರ್ಯ ಯೋಧರಾಗಿದ್ದ ಹೈದರ್ ಮತ್ತು ಟೀಪೂಗಳ ನೆನಪು ಬೇಡವಾಗಿದೆ. ಆದರೆ ನಮಗೆ ಬೇಕಲ್ಲವೇ?

– ಶಿವಸುಂದರ್


ಇದನ್ನೂ ಓದಿ: ನಮ್ಮ ಸಂವಿಧಾನದಲ್ಲೇ ಸೆಕ್ಯುಲರ್ ವಿರೋಧಿ ಮತ್ತು ಫೆಡರಲ್ ವಿರೋಧಿ ಅಂಶಗಳಿವೆಯೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights